ಒರಟ ಶ್ರೀ ನಿರ್ದೇಶನದಲ್ಲಿ ಮೂಡಿ ಬಂದಿರುವ `ಶಬರಿ’ ಚಿತ್ರದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿತ್ತು. ಈ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಮೂಡಿಕೊಂಡಿರುವ ಹೊತ್ತಿನಲ್ಲಿಯೇ ಚಿತ್ರತಂಡ “ತಂದಾನಿ ತನನೋ”ಎಂಬ ವೀಡಿಯೋ ಸಾಂಗ್ ಒಂದನ್ನು ಪ್ರೇಕ್ಷಕರಿಗೆ ತಲುಪಿಸಿದೆ. ನಿರ್ದೇಶಕ ಓಂ ಪ್ರಕಾಶ್ ರಾವ್, ರಘು ರಾಮ್, ಬಾಲಾಜಿ ವೀರಾಸ್ವಾಮಿ ಮತ್ತು ಉದ್ಯಮಿ ವಿ. ಬಾಬು ಈ ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಸಂಬಂಧವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಈ ವೀಡಿಯೋ ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ಬಿ ಆರ್. ಹೇಮಂತ್ ಕುಮಾರ್ ಅವರ ಸಂಗೀತ ಸಂಯೋಜನೆ ಮನಮುಟ್ಟುವಂತಿದೆ. ಸರೆಗಮಪ ಖ್ಯಾತಿಯ ಅಶ್ವಿನ್ ಶರ್ಮಾ ಕೂಡಾ ಚೆಂದವಾಗಿ ಹಾಡಿದ್ದಾರೆ. ಈ ಹಾಡಿನಲ್ಲಿ ಸಮರ್ಥ್ ಹಾಗೂ ಧನ್ವಿ ಎಲ್ಲಿಯೂ ಹೊಸಬರೆನ್ನಿಸದಂತೆ ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ’ ಎಂಬ ಮೆಚ್ಚುಗೆಯನ್ನು ಓಂಪ್ರಕಾಶ್ ರಾವ್ ಮತ್ತು ಬಾಲಾಜಿ ವೀರಾಸ್ವಾಮಿ ವ್ಯಕ್ತಪಡಿಸಿದರು. ರಘುರಾಮ್ ಹೊಸಬರ ಈ ಪ್ರಯತ್ನವನ್ನು ಮೆಚ್ಚಿಕೊಳ್ಳುತ್ತಲೇ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಒರಟ ಶ್ರೀ ಅವರೇ ಈ ಹಾಡನ್ನು ಬರೆದಿದ್ದಾರೆ. ಸ್ಥಳದಲ್ಲಿಯೇ ಹಾಡನ್ನು ಸೃಷ್ಟಿಸಿದ ಬಗೆಯನ್ನು ವಿವರಿಸಿದ ಒರಟ ಶ್ರೀ, ‘ನಮ್ಮ ಸಿನಿಮಾದಲ್ಲಿ ಸಮರ್ಥ್ ಮತ್ತು ಧನ್ವಿ ಮಾತ್ರವಲ್ಲದೇ ಜೀಪ್ ಕೂಡಾ ಪ್ರಧಾನ ಪಾತ್ರವಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸೇರಿದಂತೆ ನಾನಾ ಅಂಶಗಳನ್ನು ಈ ಕಥೆ ಒಳಗೊಂಡಿದೆ’ ಎಂಬ ವಿವರಣೆಯನ್ನೂ ನೀಡಿದರು.
ಸಿವಿಲ್ ಇಂಜಿನಿಯರ್ ಆಗಿರುವ ರಮೇಶ್ , ಸುಧಾಕರ್ ರೆಡ್ಡಿ ಯಾಕಸಿರಿ ಮತ್ತು ವಿಷ್ಣುಕಾಂತ್ ಎ ಜೊತೆಗೂಡಿ ಬರವಿ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒರಟ ಶ್ರೀ ನಿರ್ದೇಶನವಿರುವ ಈ ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಧನ್ವಿ, ಎಂ.ಕೆ ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ, ಹಾಗೂ ಕೋರ ಚಿನ್ನಯ್ಯ ರವರ ಸಾಹಸ ಈ ಚಿತ್ರಕ್ಕಿದೆ.





Be the first to comment