ಪಿ.ಸಿ.ಶೇಖರ್ ನಿರ್ದೇಶನದ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದೂರು ಅವರು ನಿರ್ಮಿಸುತ್ತಿರುವ ಹಾಗೂ ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ಹಾಗೂ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ “ಮಹಾನ್” ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮೇರು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖಪಾತ್ರದಲ್ಲಿ “ಬಿಗ್ ಬಾಸ್” ಖ್ಯಾತಿಯ ನಮ್ರತಾ ಗೌಡ ಹಾಗೂ “ಹಾಗೆ ಸುಮ್ಮನೆ” ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಕಿರಣ್ ಶ್ರೀನಿವಾಸ್ ನಟಿಸಿದ್ದಾರೆ. ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನ್ನು “ಮಹಾನ್” ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.
ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಇನ್ನೂ, ಪ್ರಕಾಶ್ ಬುದೂರು ಅವರ ನಿರ್ಮಾಣವಂತೂ ಬಹಳ ಅಚ್ಚುಕಟ್ಟಾಗಿದೆ. ನಾನು ನೋಡಿದ ಅತ್ತ್ಯುತ್ತಮ ನಿರ್ಮಾಣ ಸಂಸ್ಥೆ ಇದು. ಪಿ.ಸಿ.ಶೇಖರ್ ಅವರು ಈ ಚಿತ್ರದ ಕಥೆ ಹೇಳುತ್ತಿದ್ದಾಗಲೇ ನನ್ನ ಪಾತ್ರ ಹಾಗೂ ಕಥೆ ಬಹಳ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ವಿದ್ಯಾವಂತ ಹೆಣ್ಣುಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಗರದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಹಳ್ಳಿಯಲ್ಲಿ ರೈತರು ಕಷ್ಟಗಳಿಗೆ ಧ್ಚನಿಯಾಗುವ ಹೆಣ್ಣುಮಗಳು. ನಮ್ಮೆಲ್ಲರ ಮೆಚ್ಚಿನ ಶಿವಣ್ಣ, ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ ಹೀಗೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸಿರುವ ಈ ಚಿತ್ರದಲ್ಲಿ ಅಭಿನಯಿಸಿರುವುದು ನನಗೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ನಟಿ ನಮ್ರತಾ ಗೌಡ. ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಟ ಕಿರಣ್ ಶ್ರೀನಿವಾಸ್ ಹೀಗೆ ಹೇಳಿದ್ದಾರೆ.
“ಮಹಾನ್” ಚಿತ್ರದ ನನ್ನ ಪಾತ್ರದ ಫಸ್ಟ್ ಲುಕ್ ಅನಾವರಣವಾಗಿದೆ. ಹಳ್ಳಿಯಿಂದ ನಗರಕ್ಕೆ ಬಂದು ವಿದ್ಯಾವಂತನಾದ ಹುಡುಗನಿಗೆ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಹಂಬಲ. ಆದರೆ ಅವನು ಹಳ್ಳಿಗೆ ಬಂದು ಏನು ಮಾಡುತ್ತಾನೆ ಎಂಬುದೆ ನನ್ನ ಪಾತ್ರದ ಕಥಾ ಸಾರಾಂಶ. ಸಮಾಜಕ್ಕೆ ಒಂದೊಳ್ಳೆ ಸಂದೇಶವಿರುವ ಚಿತ್ರದಲ್ಲಿ ಅಭಿನಯಿಸಿರುವುದು ಬಹಳ ಸಂತೋಷವಾಗಿದೆ. ಪಿ.ಸಿ.ಶೇಖರ್ ನಿರ್ದೇಶನದಲ್ಲಿ , ಪ್ರಕಾಶ್ ಬುದೂರು ಅವರ ನಿರ್ಮಾಣದಲ್ಲಿ ಹಾಗೂ ಅನೇಕ ಹಿರಿಯ ಅನುಭವಿ ಕಲಾವಿದರ ತಾರಾಬಳಗದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿಬರುತ್ತಿದೆ. ಅನೇಕ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿ ನನಗೆ ಬಹಳ ಖುಷಿಯಾಗಿದೆ ಎಂದಿದ್ದಾರೆ.
ನಮ್ಮ “ಮಹಾನ್” ಚಿತ್ರದಲ್ಲಿ ಕನ್ನಡದ “ಮಹಾನ್” ಕಲಾವಿದರು ಅಭಿನಯಿಸಿರುವುದು ನಿಜಕ್ಕೂ ಸಂತೋಷವಾಗಿದೆ. ನಮ್ಮ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದ್ದೇವೆ. ಈವರೆಗೂ ಮಾಡಿರದ ಪಾತ್ರಗಳಲ್ಲಿ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ “ಮಹಾನ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.
ನಮ್ಮ ಆಕಾಶ ಪಿಕ್ಚರ್ಸ್ ಸಂಸ್ಥೆಯ ಮೊದಲ ನಿರ್ಮಾಣದ “ಮಹಾನ್”, ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಚಿತ್ರ. ಇದೊಂದು ರೈತರ ಕುರಿತಾದ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವೂ ಹೌದು. ವಿಜಯ ರಾಘವೇಂದ್ರ ನಮ್ಮ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ವಿಶೇಷಪಾತ್ರದಲ್ಲಿ ಶಿವರಾಜಕುಮಾರ್ ಅವರು ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಅನುಭವಿ ಹಾಗೂ ಹೆಸರಾಂತ ಕಲಾವಿದರು ತಾರಾಬಳಗದಲ್ಲಿದ್ದಾರೆ. ಜನಪ್ರಿಯ ಕಲಾವಿದರಾದ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ ಎನ್ನುತ್ತಾರೆ ನಿರ್ಮಾಪಕ ಪ್ರಕಾಶ್ ಬುದೂರು.





Be the first to comment