ಇಂದು ನಾಲ್ಕು ಚಿತ್ರಗಳು ತೆರೆಗೆ

ಇಂದು ನಾಲ್ಕು ಚಿತ್ರಗಳು  ತೆರೆ ಕಾಣುತ್ತಿವೆ. ಜೊತೆಗೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಂಜನಿ ಪುತ್ರ’ ಚಿತ್ರ ಮರುಬಿಡುಗಡೆಗೊಳ್ಳುತ್ತಿದೆ.

ಗ್ರೇ ಗೇಮ್ಸ್‌

ವಿಜಯ ರಾಘವೇಂದ್ರ, ಭಾವನಾ ರಾವ್‌ ನಟನೆಯ ‘ಗ್ರೇ ಗೇಮ್ಸ್‌’ ಇಂದು ತೆರೆ ಕಾಣುತ್ತಿರುವ ಚಿತ್ರ. ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದ ಗಂಗಾಧರ್‌ ಸಾಲಿಮಠ ನಿರ್ದೇಶನದ  ಈ ಚಿತ್ರ ಸಸ್ಪೆನ್ಸ್‌ ಡ್ರಾಮಾ ಕಥೆಯನ್ನು ಹೊಂದಿದೆ.

ಆನ್‌ಲೈನ್‌ ಗೇಮಿಂಗ್‌ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಸೈಕಾಲಜಿಸ್ಟ್‌ ಆಗಿ ವಿಜಯ ರಾಘವೇಂದ್ರ ನಟಿಸಿದರೆ, ಸೈಬರ್‌ ಕ್ರೈಂ ತನಿಖಾಧಿಕಾರಿಯಾಗಿ ಭಾವನಾ ರಾವ್‌ ಕಾಣಿಸಿಕೊಂಡಿದ್ದಾರೆ. ವೃತ್ತಿಪರ ಗೇಮರ್‌ ಆಗಿ ಜೈ, ಚಿತ್ರನಟಿಯಾಗಿ ಶ್ರುತಿ ಪ್ರಕಾಶ್‌ ಸಿನಿಮಾದಲ್ಲಿದ್ದಾರೆ. ಆನಂದ್‌ ಮುಗದ್‌ ನಿರ್ಮಾಣ , ವರುಣ್‌ ಡಿಕೆ ಛಾಯಾಗ್ರಹಣ, ಜಗದೀಶ್ ಎನ್‌. ಸಂಕಲನ ಚಿತ್ರಕ್ಕಿದೆ.

‘4 ಎನ್ 6’

ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ನಿರ್ಮಿಸಿರುವ, ಮರ್ಡರ್‌ ಮಿಸ್ಟ್ರಿ ಪತ್ತೆದಾರಿ, ಥ್ರಿಲ್ಲರ್‌ ಕಥೆ ಹೊಂದಿರುವ ‘4 ಎನ್ 6’ ಇಂದು ತೆರೆಗೆ ಬರುತ್ತಿದೆ.

‘ಲವ್ ಮಾಕ್ಟೇಲ್’ ಖ್ಯಾತಿಯ ರಚನಾ ಇಂದರ್‌ ಫೋರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಶ್ರೀನಿವಾಸ್  ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಭವಾನಿ ಪ್ರಕಾಶ್, ನವೀನ್ ಕುಮಾರ್ ಹಾಗೂ ಆದ್ಯಶೇಖರ್ ತಾರಾಗಣದಲ್ಲಿದ್ದಾರೆ. ಚರಣ್ ತೇಜ್ ಛಾಯಾಗ್ರಹಣ, ಸಾಯಿ ಸೋಮೇಶ್ ಸಂಗೀತ ನಿರ್ದೇಶನವಿದೆ.

ಅಲೈಕ್ಯಾ

ಬಹುತೇಕ ಹೊಸಬರಿಂದಲೇ ಕೂಡಿರುವ ‘ಅಲೈಕ್ಯಾ’ ಚಿತ್ರ ಇಂದು ತೆರೆ ಕಾಣುತ್ತಿದೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಸಾತ್ವಿಕ್ ಎಂ.ಭೂಪತಿ ಕಥೆ , ಆಕ್ಷನ್‌ ಕಟ್‌ ಹೇಳಿದ್ದಾರೆ.

ಎಂ.ಭೂಪತಿ ಬಂಡವಾಳ ಹೂಡಿರುವ ಚಿತ್ರ ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ದರ್ಶಿನಿ ಆರ್.ಒಡೆಯರ್, ನಿಸರ್ಗ ಮನ್ವೀರ್ ಚವ್ಹಾನ್, ವಿವೇಕ ಚಕ್ರವರ್ತಿ ಮುಂತಾದವರು ನಟಿಸಿದ್ದಾರೆ. ಸಾಯಿ ಸೋಮೇಶ್ ಸಂಗೀತ, ಬುಗುಡೆ ವೀರೇಶ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ  ಚಿತ್ರಕ್ಕಿದೆ.

ರಾಮನ ಅವತಾರ

‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ‘ರಾಮನ ಅವತಾರ’ ಚಿತ್ರ ಇಂದು ಬಿಡುಗಡೆಗೆಯಾಗುತ್ತಿದೆ.  ಹಾಸ್ಯಮಯ ಕಥಾ ಹಂದರ ಹೊಂದಿರುವ ಚಿತ್ರವನ್ನು ವಿಕಾಸ್ ಪಂಪಾಪತಿ ನಿರ್ದೇಶಿಸಿದ್ದಾರೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್‌ ಅಡಿಯಲ್ಲಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಕ್ಯಾಮೆರಾ, ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಚಿತ್ರೀಕರಣಗೊಂಡಿದೆ.

ಅಂಜನಿ ಪುತ್ರ

ಪುನೀತ್‌ ರಾಜ್‌ಕುಮಾರ್‌, ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದ ಅಂಜನಿಪುತ್ರ ಸಿನಿಮಾ ಇಂದು ಮರುಬಿಡುಗಡೆಯಾಗುತ್ತಿದೆ. ಎಂಎನ್‌ಕೆ ಮೂವಿಸ್‌ ಮೂಲಕ ಎಂಎನ್‌ ಕುಮಾರ್‌ ನಿರ್ಮಿಸಿದ್ದ ಚಿತ್ರಕ್ಕೆ ಎ ಹರ್ಷ ನಿರ್ದೇಶನವಿದೆ.

ಪಿ. ರವಿಶಂಕರ್, ರಮ್ಯಾ ಕೃಷ್ಣನ್, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿಬಸ್ರೂರ್‌ ಸಂಗೀತ, ಸ್ವಾಮಿ ಜೆ ಛಾಯಾಗ್ರಹಣ, ದೀಪು ಎಸ್‌ ಕುಮಾರ್‌ ಸಂಕಲನವಿದೆ. 2017ರ ಡಿಸೆಂಬರ್‌ 21ರಂದು ಈ ಚಿತ್ರ ತೆರೆ ಕಂಡಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!