ಸಾಗರ : ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು’ ಚಲನಚಿತ್ರದ ಅಧಿಕೃತ ಶೀರ್ಷಿಕೆ (ಟೈಟಲ್) ಹಾಗೂ ಧ್ವನಿಸುರುಳಿಯನ್ನು ಕರ್ಕಿ ಶ್ರೀ ಜ್ಞಾನೇಶ್ವರೀ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು.
ಸಾಗರ ನಗರದ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ವೈಭವದಿಂದ ಜರುಗುತ್ತಿರುವ ಶ್ರೀಗಳವರ 41ನೇ ಚಾತುರ್ಮಾಸ್ಯ ವ್ರತಾಚರಣೆಯ ಧಾರ್ಮಿಕ ಮಹೋತ್ಸವದ ಶುಭ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯಿತು.

ಸಮಾಜದ ಕಲೆ-ಸಂಸ್ಕೃತಿ ಬಿಂಬಿಸುವ ಸಿನಿಮಾ:
ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ರತಂಡದ ಪ್ರಯತ್ನವನ್ನು ಶ್ಲಾಘಿಸಿ, “ದೈವಜ್ಞ ಬ್ರಾಹ್ಮಣ ಸಮಾಜವು ಕಲೆ, ಕರಕುಶಲತೆ ಮತ್ತು ಧಾರ್ಮಿಕ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಇಂತಹ ಶ್ರೀಮಂತ ಇತಿಹಾಸ ಹಾಗೂ ಸಾಂಸ್ಕೃತಿಕ ಬೇರುಗಳನ್ನು ಇಂದಿನ ಯುವ ಪೀಳಿಗೆಗೆ ಸಿನಿಮಾದಂತಹ ದೃಶ್ಯ ಮಾಧ್ಯಮದ ಮೂಲಕ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯ” ಎಂದು ಶುಭ ಹಾರೈಸಿದರು.
ಚಿತ್ರತಂಡ ಮತ್ತು ಸಮಾಜದ ಮುಖಂಡರ ಉಪಸ್ಥಿತಿ:
ಚಿತ್ರದ ನಾಯಕ ನಟ ಹಾಗೂ ನಿರ್ದೇಶಕರಾದ ಅಜಯಕುಮಾರ್ ದೈವಜ್ಞ ಅವರು ಚಿತ್ರದ ಕಥಾಹಂದರ ಹಾಗೂ ಉದ್ದೇಶವನ್ನು ವಿವರಿಸಿದರು. ಸಮಾರಂಭದಲ್ಲಿ ಕಾರವಾರದ ಮಾಜಿ ಶಾಸಕ ಗಂಗಾಧರ್ ಭಟ್, ಸಮಾಜದ ಪ್ರಮುಖರಾದ ಅರುಣ್ ಕುಮಾರ್, ಮಂಜುನಾಥ್ ಪರಮೇಶ್ವರ್ ಶೇಟ್ (ಹೊನ್ನಾವರ ) ಮೋಹನ್ ಶೇಟ್, ರವಿ ಗಾಂವ್ಕರ್, ಅಶೋಕ್ ರೇವಣಕರ್, ಸಿಎ ಶಶಿಕಾಂತ್ ಆರ್.ಎಸ್., ಉಲ್ಲಾಸ್ ಹಾಗೂ ಅಶೋಕ್ ಶೇಟ್ ಸೇರಿದಂತೆ ಹಲವು ಗಣ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.






Be the first to comment