ಉತ್ತರ ಕರ್ನಾಟಕದಲ್ಲಿ ‘ತ್ರಿವಿಕ್ರಮ’ಪ್ರಚಾರ ಶುರು

ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟಿಸಿರುವ ಚೊಚ್ಚಲ ಸಿನಿಮಾ ತ್ರಿವಿಕ್ರಮ ಜೂನ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಪ್ರೇಕ್ಷಕರನ್ನು ನೇರವಾಗಿ ಭೇಟಿಯಾಗಲು ಉತ್ತರ ಕರ್ನಾಟಕ ಪ್ರವಾಸ ಹಮ್ಮಿಕೊಂಡಿದೆ ‘ತ್ರಿವಿಕ್ರಮ’ ಬಳಗ.

ಈಗಾಗಲೇ ಹಾಡುಗಳಿಗೆ ಸಖತ್ ರೆಸ್ಪಾನ್ಸ್‌ ದೊರಕಿರುವುದರಿಂದ ರಾಜ್ಯಾದ್ಯಂತ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಲು ‘ತ್ರಿವಿಕ್ರಮ’ ತಂಡ ಮೊದಲಿಗೆ ಉತ್ತರ ಕರ್ನಾಟಕವನ್ನು ಸುತ್ತಿ ಬರಲಿದೆ. ಜೂನ್ 13ರಂದು ದಾವಣಗೆರೆಯಿಂದ ಪ್ರಯಾಣ ಆರಂಭಿಸಲಿದ್ದು, 14ರಂದು ಹುಬ್ಬಳ್ಳಿ-ಧಾರವಾಡ, 15ರಂದು ಬೆಳಗಾವಿ ಹಾಗೂ 16ರಂದು ಬಳ್ಳಾರಿ ಮತ್ತು ಹೊಸಪೇಟೆಯ ಪ್ರಮುಖ ಸ್ಥಳಗಳು, ಕಾಲೇಜುಗಳಿಗೆ ಭೇಟಿ ನೀಡಿ ಬರಲಿದೆ. ಬಳಿಕ ಮಂಡ್ಯ, ಮದ್ದೂರು ಹಾಗೂ ಮೈಸೂರು ಸುತ್ತಮುತ್ತ ಪ್ರದೇಶಗಳಿಗೆ ಭೇಟಿ ನೀಡುವ ಯೋಜನೆ ಚಿತ್ರತಂಡಕ್ಕಿದೆ.

ಜೂನ್ 19ರಂದು ದೊಡ್ಡ ಮಟ್ಟದಲ್ಲಿ ಪ್ರಿ ರಿಲೀಸ್ ಈವೆಂಟ್ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಾನಾ ಭಾಷೆಯ ತಾರೆಯರು ಆಗಮಿಸುವ ನಿರೀಕ್ಷೆಯಿದೆ. ಸಾವಿರಾರು ಮಂದಿ ಜಮಾಯಿಸಲಿರುವ ಅದ್ಧೂರಿ ಸಮಾರಂಭದಲ್ಲಿ ಸ್ಯಾಂಡಲ್’ವುಡ್ ಸ್ಟಾರ್‌’ಗಳು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ. ಅದೇ ವೇದಿಕೆಯಲ್ಲಿ ‘ತ್ರಿವಿಕ್ರಮ’ ಟ್ರೇಲರ್ ಅನಾವರಣಗೊಳ್ಳಲಿದೆ.

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳಿಗೆ ಭೂಷಣ್ ಕೊರಿಯೋಗ್ರಫಿ ಮಾಡಿದ್ದಾರೆ. ಕಲರ್’ಫುಲ್ ಆಗಿ ಮೂಡಿಬಂದಿರುವ ಚಿತ್ರದ ಹಾಡುಗಳು ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್’ನಲ್ಲಿ ಬಿಡುಗಡೆಯಾಗಿ ಜೋರಾಗಿ ಸದ್ದು ಮಾಡುತ್ತಿದೆ.

ರೋಸ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ.

ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!