Surya Movie : “ಸೂರ್ಯ” ನ ಟೀಸರ್ ರಿಲೀಸ್ ಮಾಡಿದ ನಿರ್ದೇಶಕ ಭರ್ಜರಿ ಚೇತನ್.

 ಯುವ ನಿರ್ದೇಶಕ ಸಾಗರ್ ಅವರು ‘ಸೂರ್ಯ’ ಎನ್ನುವ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಬಿ.ಸುರೇಶ್ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್, ಮಾಸ್ ಲವ್‌ಸ್ಟೋರಿ ಇಟ್ಟುಕೊಂಡು ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣದ ಕೊನೇಹಂತ ತಲುಪಿರುವ ಈ ಸಿನಿಮಾದಲ್ಲಿ ಯುವನಟ ಪ್ರಶಾಂತ್ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಸೂರ್ಯ ಚಿತ್ರದ ಟೀಸರ್ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ನಿರ್ದೇಶಕ ಬಹದ್ದೂರ್ ಚೇತನ್ ಅವರು ಟೀಸರ್ ಬಿಡುಗಡೆಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಾಯಕನ ಹೆಸರು. ಆತ ತನ್ನ ಪ್ರೀತಿಗೋಸ್ಕರ ಯುದ್ದದ ರೀತಿಯಲ್ಲಿ ಸಮರ ಸಾರಿ ಅದನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಾನ್ಸೆಪ್ಟ್. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಲೇ ನಾನೊಂದು ಕಥೆ ಮಾಡಿಕೊಂಡಿದ್ದೆ, ಆ ಕಥೆಯನ್ನು ಇಷ್ಟಪಟ್ಟ ನನ್ನ ಸ್ನೇಹಿತ, ಈ ನಿರ್ಮಾಪಕರ ಬಳಿ ಮಾತನಾಡಿ ಅವರನ್ನು ಒಪ್ಪಿಸಿದರು. ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಸಿದ್ದೇವೆ, ಈಗಾಗಲೇ ೩ ಹಾಡುಗಳನ್ನು ಚಿತ್ರೀಕರಿಸಿದ್ದು, ಉಳಿದ ೨ ಸೆಟ್ ಸಾಂಗ್ ಹಾಗೂ ಹೆಚ್‌ಎಂಟಿಯಲ್ಲಿ ಮಾಡಬೇಕೆಂದಿರುವ ಸಾಹಸ ದೃಶ್ಯದ ಚಿತ್ರೀಕರಣವಷ್ಟೇ ಬಾಕಿಯಿದೆ. ನವೆಂಬರ್ ಕೊನೆ ಅಥವಾ ಡಿಸೆಂಬರ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ಕಾಣಬಹುದು. ಅಲ್ಲದೆ ನಟಿ ಶೃತಿ ಅವರು ಒಬ್ಬ ಡಾಕ್ಟರ್ ಜೊತೆಗೆ ಈಗಿನ ಕಾಲದ ಅಮ್ಮನಾಗೂ ಕಾಣಿಸಿಕೊಂಡಿದ್ದಾರೆ, ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರಿಲ್ಲಿ ಉತ್ತರ ಕರ್ನಾಟಕ ಭಾಗದ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ೫ ಹಾಡುಗಳಿಗೆ ಶ್ರೀಶಾಸ್ತ ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು.

ನಾಯಕ ಪ್ರಶಾಂತ್ ಮಾತನಾಡುತ್ತ ಪೂನಾ ಫಿಲಂ ಇನ್ ಸ್ಟಿಟ್ಯೂಟ್‌ನಲ್ಲಿ ಅಭಿನಯ ಕಲಿತ ನಂತರ ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದೆ. ಸಾಗರ್ ಅವರು ಕರೆದು ನನಗೀ ಅವಕಾಶ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮೊದಲಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಮಿಡಲ್ ಕ್ಲಾಸ್ ಹುಡುಗ, ಲವರ್ ಬಾಯ್, ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಆತ ಹೇಗೆಲ್ಲ ಹೋರಾಡುತ್ತಾನೆಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು.

ನಾಯಕಿ ಹರ್ಷಿತಾ ಮಾತನಾಡಿ ನನ್ನದು ತುಂಬಾ ವೇರಿಯೇಶನ್ಸ್ ಇರುವ ಪಾತ್ರ, ಪ್ರೀತಿಯ ವಿಷಯದಲ್ಲಿ ಆಕೆ ಯಾವ ನಿರ್ಧಾರ ತಗೋತಾಳೆ ಅನ್ನುವುದೇ ಈ ಚಿತ್ರದ ಕಥೆ ಎಂದು ವಿವರಿಸಿದರು.

ನಿರ್ಮಾಪಕ ಬಸವರಾಜ ಬೆಣ್ಣಿ ಮಾತನಾಡಿ ರವಿ ಬೆಣಿ ಹಾಗೂ ನಾನು ಇಬ್ಬರೂ ಸಹೋದರರು. ಬೆಳಗಾವಿಯ ರೈತ ಕುಟುಂಬದಿಂದ ಬಂದವರು. ಪೂನಾದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಸಾಗರ್ ನಮ್ಮನ್ನು ಭೇಟಿಯಾಗಿ ಈ ಕಥೆ ಹೇಳಿದರು. ಹೊಸಬರಿಗೆ ಅವಕಾಶ ಕೊಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು. ವಿಲನ್ ರೋಲ್ ಮಾಡಿರುವ ಪ್ರಶಾಂತ್ ಶೆಟ್ಟಿ ಮಾತನಾಡಿ ನನ್ನ ಪಾತ್ರ ರವಿಶಂಕರ್ ಅವರಜೊತೆ ಬರುತ್ತದೆ ಎಂದರು.

ಛಾಯಾಗ್ರಾಹಕ ಮನುರಾಜ್ ಮಾತನಾಡಿ ಈ ಹಿಂದೆ ಮೆಲೋಡಿ ಡ್ರಾಮಾ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದೆ, ಇದು ಎರಡನೇ ಚಿತ್ರ. ಬೆಂಗಳೂರು ಸುತ್ತಮುತ್ತ ಈವರೆಗೆ ೩೫ ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಿದ್ದೇವೆ ಎಂದರು. ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಪ್ರಸನ್ನ ಉಳಿದ ಪಾತ್ರ ವರ್ಗದಲ್ಲಿದ್ದಾರೆ,

Be the first to comment

Leave a Reply

Your email address will not be published. Required fields are marked *

Translate »
error: Content is protected !!