ಈ ಹಿಂದೆ ‘ಬ್ರಹ್ಮರಾಕ್ಷಸ’ ಎಂಬ ಚಿತ್ರ ಮಾಡಿದ್ದ ಶಂಕರ್ ರಾಜ ವರ್ಮ, ಇದೀಗ ಸದ್ದಿಲ್ಲದೆ ‘ಶ್ರೀಕೃಷ್ಣ’ ಎಂಬ ಇನ್ನೊಂದು ಹೊಸ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವು ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ.
‘ಉಧೋ ಉಧೋ ಯಲ್ಲವ್ವ …’ ಎಂದು ಸಾಗುವ ಹಾಡಿಗೆ ಎಂ.ಎಸ್. ತ್ಯಾಗರಾಜ್ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸುವುದರ ಜೊತೆಗೆ, ಧ್ವನಿಯಾಗಿದ್ದಾರೆ. ಅವರ ಜೊತೆಗೆ ಸರಯೂ ಸಹ ಹಾಡಿದ್ದಾರೆ. ಈ ಲಿರಿಕಲ್ ಹಾಡು, ಇದೀಗ ಯೂಟ್ಯೂಬ್ನ ಸಿರಿ ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆ ಆಗಿದೆ. ಶುಕ್ರವಾರ ಉತ್ಸವ್ ಲೆಗೆಸಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಚಿತ್ರತಂಡದವರು ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಬೃಹಸ್ಪತಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಶಂಕರ್ ರಾಜ ವರ್ಮ ಮತ್ತು ಅಜಯ್ ಕುಮಾರ್ ಪಿ.ಎಂ. ಜಂಟಿಯಾಗಿ ನಿರ್ಮಿಸಿರುವ ‘ಶ್ರೀಕೃಷ್ಣ’ ಚಿತ್ರದಲ್ಲಿ ಶಂಕರ್ ರಾಜ ವರ್ಮ, ಚೈತ್ರಾ ತೋಟದ್ ಜೊತೆಗೆ ಪ್ರದೀಪ್ ಪೂಜಾರಿ, ಭುವನ್ ಗೌಡ, ಸ್ನೇಹಾ, ಈಶ್ವರ್ ಶೆಟ್ಟಿ ಮುಂತಾದವರು ನಟಿಸಿದ್ದು ಎಂ.ಎಸ್. ತ್ಯಾಗರಾಜ್ ಸಾಹಿತ್ಯ ಮತ್ತು ಸಂಗೀತ, ಅನಿರುದ್ಧ್ ಛಾಯಾಗ್ರಹಣ ಹಾಗೂ ಕೀರ್ತಿರಾಜು ಅವರ ಸಂಕಲನವಿದೆ.






Be the first to comment