ಹಿರಿಯ ನಿರ್ದೇಶಕ ಕೆ ವಿ ರಾಜು ಇನ್ನಿಲ್ಲ

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಕೆ ವಿ ರಾಜು ಅವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕೆ ವಿ ರಾಜು ಅವರುಬ್ರಾಜಾಜಿನಗರದ ನಿವಾಸದಲ್ಲಿ ಡಿ.24ರ ಬೆಳಗ್ಗೆ 8 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ ರಾಜು ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ರಾಜು ಅವರು ಕನ್ನಡ ಚಿತ್ರರಂಗದ ರೆಬೆಲ್ ನಿರ್ದೇಶಕ ಎಂದೇ ಪ್ರಸಿದ್ಧರಾಗಿದ್ದರು. ನೇರ ಮಾತುಗಳಿಗೆ ಹೆಸರಾಗಿದ್ದ ಅವರು ದೇವರಾಜ್ ನಟನೆಯ ಹುಲಿಯಾ, ರವಿಚಂದ್ರನ್ ನಟನೆಯ ಯುದ್ಧಕಾಂಡ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದರು. ಕ್ರಾಂತಿಕಾರಿ ಕತೆಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಕೆ ವಿ ರಾಜು ಕನ್ನಡ ಚಿತ್ರರಂಗದ ಅಪ್ರತಿಮ ನಿರ್ದೇಶಕರಲ್ಲಿ ಒಬ್ಬರು ಎಂದು ಹೆಸರು ಮಾಡಿದ್ದರು.

ಹುಲಿಯಾ, ನವಭಾರತ, ಸಂಗ್ರಾಮ, ಇಂದ್ರಜಿತ್, ಕದನ, ಯುದ್ಧಕಾಂಡ, ಓ ಗಂಡಸರೇ ನೀವೆಷ್ಟು ಒಳ್ಳೆಯವರು, ರಾಷ್ಟ್ರಗೀತೆ, ಬೆಳ್ಳಿ ಮೋಡಗಳು, ಬೆಳ್ಳಿಕಾಲುಂಗುರ, ಬೊಂಬಾಟ್ ಹುಡ್ಗ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು.
ಕನ್ನಡ ಚಿತ್ರರಂಗದ ಉತ್ತಮ ಚಿತ್ರ ಎಂದೇ ಹೆಸರಾದ ದೇವರಾಜ್, ಅರ್ಚನಾ, ಅವಿನಾಶ್ ನಟನೆಯ ‘ಹುಲಿಯಾ’ ಸಿನಿಮಾದಲ್ಲಿ ರಾಜು ಅವರು ನಿರ್ದೇಶನದ ಜೊತೆಗೆ ನಟಿಸಿದ್ದರು. ಆದರೆ ‘ಹುಲಿಯಾ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತು ಹೋಯಿತು. ಕೆ ವಿ ರಾಜು ನಿರ್ದೇಶಿಸಿದ ಈ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ ರಾಜಧಾನಿ ‘ ಸಿನಿಮಾದ ನಿರ್ದೇಶಕರು ಅರ್ಧಕ್ಕೆ ಸಿನಿಮಾದಿಂದ ಹೊರ ನಡೆದ ವೇಳೆ ಸಿನಿಮಾವನ್ನು ಕೆ ವಿ ರಾಜು ಅವರು ಮುಗಿಸಿಕೊಟ್ಟಿದ್ದರು. ಈ ವೇಳೆ ಸಿನಿಮಾದ ನಿರ್ದೇಶಕನ ಕ್ರೆಡಿಟ್ ನ್ನು ಅವರು ತೆಗೆದುಕೊಂಡಿರಲಿಲ್ಲ.

ಅದ್ಭುತ ತಂತ್ರಜ್ಞ ಆಗಿದ್ದ ರಾಜು ಅವರು ಸಿನಿಮಾದ ವಿವಿಧ ವಿಭಾಗಗಳನ್ನು ಚೆನ್ನಾಗಿ ಅರಿತಿದ್ದರು. ಅವರು ಸಂಭಾಷಣೆಕಾರರಾಗಿಯೂ ಕೆಲಸ ಮಾಡಿದ್ದರು. ಇತ್ತೀಚೆಗಿನ ದಿನಗಳಲ್ಲಿ ಕೆ ವಿ ರಾಜು ಚಿತ್ರರಂಗದಲ್ಲಿ ಹೆಚ್ಚಾಗಿ ಸಕ್ರಿಯರಾಗಿರಲಿಲ್ಲ. ರಾಜು ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!