ತಮಿಳುನಾಡಿಗೆ ಪ್ರತಿದಿನ 3,500 ಟಿಎಂಸಿ ಅಡಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದ್ದು,ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹೋರಾಟಕ್ಕೆ ಬೆಂಬಲ ಘೋಷಿಸಿದೆ.
ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್, ಪ್ರದರ್ಶಕರ ಸಂಘ, ವಿತರಕರ ಸಂಘ ಹಾಗೂ ಫಿಲ್ಮ್ ಚೇಂಬರ್ ವ್ಯಾಪ್ತಿಯ ಎಲ್ಲಾ ಅಂಗ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
“ಭಾಷೆ, ನೆಲ ಮತ್ತು ಜಲದ ವಿಚಾರದಲ್ಲಿ ಕನ್ನಡ ಚಿತ್ರೋದ್ಯಮ ಎಂದಿಗೂ ಹಿಂದೆ ಸರಿಯುವುದಿಲ್ಲ. ಡಾ. ರಾಜ್ಕುಮಾರ್ ತೋರಿಸಿದ ಕನ್ನಡದ ಹೋರಾಟದ ಮಾರ್ಗದಲ್ಲೇ ನಾವು ಸಾಗುತ್ತೇವೆ” ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಸ್ಪಷ್ಟಪಡಿಸಿದ್ದಾರೆ.
‘ಕನ್ನಡಪರ ಸಂಘಟನೆಗಳು ಯಾವ ರೂಪದ ಹೋರಾಟಕ್ಕೂ ಕರೆ ನೀಡಿದರೂ ಚಿತ್ರರಂಗದ ಕಲಾವಿದರು ಒಗ್ಗಟ್ಟಿನಿಂದ ಭಾಗವಹಿಸಲಿದ್ದಾರೆ ಎಂದು ರಾಕ್ಲೈನ್ ವೆಂಕಟೇಶ್ ಭರವಸೆ ನೀಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿವೆ.





Be the first to comment