ವಿಡಿಯೋ

ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಹಾರರ್ ಟ್ರೈಲರ್ !

ದಿಯಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಇದೀಗ ತಮ್ಮದೇ ಆದ ‘ಧೀ ಸಿನಿಮಾಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಅದರ ಮೊದಲ ಪ್ರಯತ್ನವಾಗಿ ಹಾರರ್ ಚಿತ್ರ ನಿರ್ಮಿಸಿದ್ದಾರೆ. ಬಹುಭಾಷಾ ನಟನಾಗಿಯೂ ಗುರುತಿಸಿ ಕೊಂಡಿರುವ ದೀಕ್ಷಿತ್ ಶೆಟ್ಟಿ ಅವರ ಚೊಚ್ಚಲ ನಿರ್ಮಾಣದ ಹಾರರ್ ಚಿತ್ರವಾದ ‘ವಿಡಿಯೋ’ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಸೆ.೧೧ಕ್ಕೆ ತೆರೆ ಕಾಣಲಿದೆ. ಬ್ಲಿಂಕ್ ಖ್ಯಾತಿಯ ಶ್ರೀನಿಧಿ ಬೆಂಗಳೂರು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಬ್ಲಿಂಕ್ ಚಿತ್ರದ ಯಶಸ್ಸಿನ ನಂತರ ‘ವಿಡಿಯೋ’ಗಾಗಿ ಶ್ರೀನಿಧಿ ಅವರ ಜೊತೆ ದೀಕ್ಷಿತ್ ಶೆಟ್ಟಿ ಕೈಜೋಡಿಸಿದ್ದಾರೆ. ಈಗಾಗಲೇ ತನ್ನ ಟೀಸರ್ ಹಾಗೂ ವಿಭಿನ್ನ ಪ್ರಚಾರದ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ ಭರತ್, ಜೀವನ್ ಶಿವಕುಮಾರ್, ತೇಜಸ್ ಎಸ್.ಎಂ, ಪ್ರಿಯಾ ಜೆ.ಆಚಾರ್, ನಲ್ಮೆ ನಚಿಯಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವೇದಿಕೆಯಲ್ಲಿ ಹಾರರ್ ಶೈಲಿಯ ಹಾಡುಗಳಿಗೆ ನಟ ಸಿದ್ದು ಮೂಲಿಮನಿ ಜತೆ ಚಿತ್ರದ ಕಲಾವಿದರು ಡಾನ್ಸ್ ಮಾಡುವ ಮೂಲಕ ವಿಡಿಯೋ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ನಿರ್ಮಾಪಕ ದೀಕ್ಷಿತ್ ಶೆಟ್ಟಿ ಇದೊಂದು ಯೂನಿಕ್ ಕಾನ್ಸೆಪ್ಟ್ ಒಳಗೊಂಡ ಫೌಂಡ್‌ ಫೂಟೇಜ್ ಹಾರರ್, ಥ್ರಿಲ್ಲರ್ ಚಿತ್ರ, ನಮ್ಮ ಚಿತ್ರದಲ್ಲಿ ಬಿಜಿಎಂ ಇಲ್ಲ, 12 ಕ್ಯಾಮೆರಾ ಉಪಯೋಗಿಸಿ ಚಿತ್ರೀಕರಿಸಿದ್ದೇವೆ, ಭರತ್ ಸಾಗರ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜತೆಗಿದ್ದಾರೆ, ನಾನು ಬೇರೆ ಯಾವುದೇ ಭಾಷೆ ಚಿತ್ರದಲ್ಲಿ ನಟಿಸಿದರೂ, ಅಲ್ಲಿ ದುಡಿದ ದುಡ್ಡನ್ನು ತಂದು ಇಲ್ಲೇ ಹಾಕುತ್ತೇನೆ. ಕಳೆದವಾರ ಎಎಂಬಿ ಸಿನಿಮಾಸ್‌ನಲ್ಲಿ ನಮ್ಮ ಚಿತ್ರದ ಪೇಡ್‌ ಪ್ರೀಮಿಯರ್ ನಡೆಸಿದೆವು, ಬುಕ್ ಮೈ ಶೋನಲ್ಲಿ ಕೆಲವೇ ಗಂಟೆಗಳಲ್ಲಿ ಫುಲ್ ಆಯ್ತು. ಸಿನಿಮಾ ನೋಡಿದ ನಂತರ ಅದ್ಭುತ ಥ್ರಿಲ್ಲಿಂಗ್ ಎಕ್ಸ್ಪೀರಿಯನ್ಸ್ ಅನುಭವಿಸಿದ ಖುಷಿ ಮುಖದಲ್ಲೂ ಕಾಣುತ್ತಿತ್ತು ಎಂದರು.

ವಿಡಿಯೋ

ನಿರ್ದೇಶಕ ಶ್ರೀನಿಧಿ ಮಾತನಾಡಿ ಬ್ಲಿಂಕ್, ಜೆರಾಕ್ಸ್ ನಂತರ ಇದು ನನ್ನ ಮೂರನೇ ಚಿತ್ರ. ಫೌಂಡ್ ಫೂಟೇಜ್ ಸಿನಿಮಾ, ಹಾರರ್ ಚಿತ್ರವನ್ನು ಅದೆಷ್ಟು ನೈಜವಾಗಿ ತರಬಹುದು ಎಂದು ಯೋಚಿಸಿದಾಗ ಈ ಕಾನ್ಸೆಪ್ಟ್ ಹೊಳೆಯಿತು. ಇದು ಅನ್ ಕನ್ವೆಂಷನಲ್ ಸ್ಕ್ತಿಪ್ಟ್. ಆರಂಭದಲ್ಲಿ ಚಿತ್ರಕ್ಕೆ ಬ್ಲಾಗ್ ಅಂತ ಹೆಸರಿತ್ತು, ಏಕೆಂದರೆ ಚಿತ್ರದಲ್ಲಿರುವ ಎಲ್ಲರೂ ಬ್ಲಾಗರ್‌ಗಳೇ, ಇದು ಬ್ಲಾಗರ್ ಗಳ ಬದುಕಿನ ಕಥೆ. ಮೊದಲ 20 ನಿಮಿಷ ನಿಮ್ಮನ್ನು ನಗಿಸುತ್ತೆ, ನಂತರ ಸೀಟ್ ಎಡ್ಜ್ ನಲ್ಲಿ ಕೂರಿಸುತ್ತೆ ಎಂದರು.

ನಾಯಕಿ ಪ್ರಿಯಾ ಜೆ.ಆಚಾರ್ ಮಾತನಾಡಿ ಇದು ನನ್ನ 2ನೇ ಚಿತ್ರ. ನನಗೆ ಸ್ಪೆಷಲ್, ತುಂಬಾ ಎಕ್ಸೈಟ್ ಆಗಿದ್ದೇನೆ. ನಿರ್ಮಾಪಕರು ಚಿತ್ರದಲ್ಲಿ ಸಾಕಷ್ಟು ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ವಿಭಿನ್ನತೆಯ ಹಿಂದೆ ರಿಸ್ಕೂ ಇರುತ್ತೆ ಅಂತ ನಾವು ಆಕ್ಟ್ ಮಾಡುವಾಗಲೇ ಗೊತ್ತಾಯ್ತು. ವಿಡಿಯೋ ಒಂದು ಎಕ್ಸ್ಪೀರಿಯನ್ಸ್ ಚಿತ್ರ ಎಂದರು,

ಮತ್ತೊಬ್ಬ ನಟಿ ನಲ್ಮೆ ನಚಿಯಾರ್ ಮಾತನಾಡಿ ಕನಸನ್ನು ನಂಬಿ ಅದರ ಬೆನ್ನಟ್ಟಿ ಹೋಗೋದಕ್ಕೆ ಧೈರ್ಯ ಬೇಕು, ಅದು ನಮ್ಮ ತಂಡದಲ್ಲಿದೆ ಎಂದರು, ನಟ ಜೀವನ್ ಮಾತನಾಡಿ ನಾನು ರಂಗಭೂಮಿಯಿಂದ ಬಂದವನು ಎಂದರೆ, ನಾಯಕ ಭರತ್ ಮಾತನಾಡಿ ಶೂಟಿಂಗ್ ಟೈಮಲ್ಲಿ ತನ್ನ ತಂದೆ ಕಳೆದುಕೊಂಡದ್ದು ನೆನೆದು ಕಣ್ಣೀರಾದರು. ಪ್ರಸನ್ನಕುಮಾರ್ ಅವರ ಸಂಗೀತ, ಅವಿನಾಶ್ ಶಾಸ್ತ್ತಿಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

ವಿಡಿಯೋ

Be the first to comment

Leave a Reply

Your email address will not be published. Required fields are marked *

Translate »
error: Content is protected !!