ಪ್ರೇಮದ ಊರಲಿ

ಸೆಪ್ಟೆಂಬರ್ 25 ಕ್ಕೆ ಬೆಳ್ಳಿಪರದೆಗೆ ‘ಪ್ರೇಮದ ಊರಲಿ’ ಲಗ್ಗೆ

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ನೂತನ ಚಲನಚಿತ್ರ ‘ಪ್ರೇಮದ ಊರಲಿ’ ಸೆಪ್ಟೆಂಬರ್ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.

ಶ್ರೀರಾಮ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯರಾಗಿ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ಇತ್ತೀಚೆಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ ಚಿತ್ರತಂಡ, ಸಿನಿಮಾ ನಿರ್ಮಾಣದ ಅನುಭವ ಹಾಗೂ ಹಾಡುಗಳಿಗೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿತು.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಮನೋಜ್ ಕುಮಾರ್, ಟೀಸರ್ ಮತ್ತು ಹಾಡುಗಳು ಬಿಡುಗಡೆಯಾದಾಗಿನಿಂದ ಮಾಧ್ಯಮಗಳು ಮತ್ತು ಪ್ರೇಕ್ಷಕರು ನೀಡುತ್ತಿರುವ ನಿರಂತರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. “‘ಪ್ರೇಮದ ಊರಲಿ’ ಚಿತ್ರದ ಎಲ್ಲಾ ಹಾಡುಗಳು ಈಗಾಗಲೇ ಎಲ್ಲರ ಜನಮನ ಗೆದ್ದಿವೆ. ಇದು ನಾಗಣ್ಣನ ಸುಂದರ ಕುಟುಂಬದ ಕಥೆ. ಮನಮಿಡಿಯುವ ಪ್ರೇಮ, ಕುಟುಂಬದ ಬಾಂಧವ್ಯ ಮತ್ತು ಸಂಗೀತದ ಸುಗ್ಗಿ ಇದರಲ್ಲಿದೆ. ಚಿತ್ರಮಂದಿರದಲ್ಲೇ ನೋಡಿ ಆನಂದಿಸಬೇಕಾದ ಈ ಕೌಟುಂಬಿಕ ಚಿತ್ರ ಪ್ರತಿಯೊಬ್ಬ ಪ್ರೇಕ್ಷಕನಿಗೂ ಮೆಚ್ಚುಗೆಯಾಗಲಿದೆ ಎಂಬ ಅಚಲ ವಿಶ್ವಾಸ ನನಗಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ನಟ ರಂಗಾಯಣ ರಘು ಚಿತ್ರದ ಆಧಾರಸ್ತಂಭವಾಗಿ ನಿಂತಿದ್ದು, ಶ್ರೀರಾಮ್ ಮತ್ತು ನಾಯಕಿಯರ ಸಮರ್ಥ ಅಭಿನಯ ಚಿತ್ರಕ್ಕಿದೆ ಎಂದರು.

ಪ್ರೇಮದ ಊರಲಿ

ಚಿತ್ರದ ನಾಯಕ ನಟ ಶ್ರೀರಾಮ್ ಮಾತನಾಡಿ, ಟೈಟಲ್ ಟ್ರ‍್ಯಾಕ್ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದು, ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ರೀಲ್ಸ್ಗಳು ರೀಲ್ಸ್ ಗಳು ಸೃಜನಗೊಂಡಿವೆ ಎಂದು ಸಂತಸ ಹಂಚಿಕೊಂಡರು. ವಿಶೇಷವಾಗಿ ಆಟೋ ಚಾಲಕರು ಚಿತ್ರದ ಶೀರ್ಷಿಕೆಯ ಸ್ಟಿಕ್ಕರ್‌ಗಳನ್ನು ತಮ್ಮ ವಾಹನಗಳಲ್ಲಿ ಪ್ರೀತಿಯಿಂದ ಅಂಟಿಸಿಕೊಳ್ಳುತ್ತಿರುವುದನ್ನು ಸ್ಮರಿಸಿದರು, ಚಿತ್ರದ ಬೆನ್ನೆಲುಬಾಗಿ ನಿಂತ ನಿರ್ಮಾಪಕರಿಗೆ, ಉತ್ತಮ ದೃಶ್ಯಗಳನ್ನು ಕಟ್ಟಿಕೊಟ್ಟ ಛಾಯಾಗ್ರಾಹಕರಿಗೆ ಹಾಗೂ ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಯಕಿಯರಿಗೆ ಶ್ರೀರಾಮ್ ಧನ್ಯವಾದ ತಿಳಿಸಿದರು. ನಾಯಕಿಯರಿಬ್ಬರೂ ಪ್ರೀತಿಯಿಂದ ನಮ್ಮ ಸಿನಿಮಾಕ್ಕೆ ಎಲ್ಲರನ್ನೂ ಅಹ್ವಾನಿಸಿದರು.

ಹಿರಿಯ ನಟ ರಂಗಾಯಣ ರಘು ಮಾತನಾಡಿ, ಇದು ನನ್ನ ಮನಸ್ಸಿಗೆ ನೆಮ್ಮದಿ ಕೊಟ್ಟ ಕಲಾವಿದನಾಗಿ ತೃಪ್ತಿ ಕೊಟ್ಟಂತಹ ಪಾತ್ರ ಮತ್ತು ಇದು ಗ್ರಾಮೀಣ ಸೊಗಡಿನ ಕಥೆ ಮತ್ತು ಕನ್ನಡದ ಮಣ್ಣಿನ ಕಥೆ ಹಾಗಾಗಿ ಈ ಚಲನಚಿತ್ರವು ಎಲ್ಲಾ ಕನ್ನಡಾಭಿಮಾನಿಗಳಿಗೆ ಖಂಡಿತಾ ಇಷ್ಟ್ಟವಾಗುತ್ತದೆ ಎಂದು ಹೇಳಿದರು.

ವೆನಿಲ್ಲಾ ಎಂಟರ್ಟೇನ್ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ. ರಾಜ್‌ಕಾಂತ್ ಎಸ್.ಕೆ ಅವರ ಛಾಯಾಗ್ರಹಣ ಹಾಗೂ ಹರ್ಷಿತ್ ಪ್ರಭು ಅವರ ಸಂಕಲನ ಚಿತ್ರಕ್ಕಿದೆ. ಸಂಗೀತ, ಪ್ರೇಮ ಹಾಗೂ ಭಾವನಾತ್ಮಕ ಕೌಟುಂಬಿಕ ಎಳೆಗಳೊಂದಿಗೆ ಮೂಡಿಬಂದಿರುವ ‘ಪ್ರೇಮದ ಊರಲಿ’ ಸೆಪ್ಟೆಂಬರ್ 25 ರಂದು ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಗಳಿಗೆ ಬರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!