ವೈಶಾಖ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು

ನಟಿ ಕೃಷಿ ತಾಪಂಡ ಅವರ ಸ್ನೇಹಿತ,  ಉದ್ಯಮಿ ವೈಶಾಖ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು  ಪೊಲೀಸರು ಚುರುಕುಗೊಳಿಸಿದ್ದು, ಘಟನೆ ನಡೆದ ದಿನವೇ ಕೃಷಿ ಹೇಳಿಕೆ ದಾಖಲಿಸಿದ್ದಾರೆ.

ಪೊಲೀಸರ ಮುಂದೆ ಹೇಳಿಕೆ ನೀಡಿರುವ ಕೃಷಿ ,  ಮೂರು ದಿನಗಳ ಕಾಲ ಕ್ಷೇಮವನಕ್ಕೆ ತೆರಳಿದ್ದೆ. ಬುಧವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಫ್ಲ್ಯಾಟ್‌ಗೆ ಬಂದಾಗ ಬಾಗಿಲು ಲಾಕ್ ಆಗಿತ್ತು. ಫ್ಲ್ಯಾಟ್‌ಗೆ ಎರಡು ಕೀಗಳಿದ್ದು, ಒಂದು ತಮ್ಮ ಬಳಿ ಹಾಗೂ ಇನ್ನೊಂದು ವೈಶಾಖ್ ಬಳಿ ಇತ್ತು.  ಬಾಗಿಲು ತೆರೆದು ಒಳಗೆ ಹೋದಾಗ ವೈಶಾಖ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದರು. ಬಳಿಕ ಸೀರೆಯನ್ನು ಕತ್ತರಿಸಿ ಮೃತದೇಹವನ್ನು ಕೆಳಗಿಳಿಸಿ ಪೊಲೀಸರಿಗೆ ಹಾಗೂ ವೈಶಾಖ್ ಕುಟುಂಬದವರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.

ತನಿಖೆಯ ಭಾಗವಾಗಿ ಪೊಲೀಸರು ಕೃಷಿ ಅವರ ಮೊಬೈಲ್‌ ಕಾಲ್ ಲಿಸ್ಟ್, ವಾಟ್ಸ್ಆಪ್ ಚಾಟ್ ಹಾಗೂ ಸಂದೇಶಗಳನ್ನು ಪರಿಶೀಲಿಸಿದ್ದಾರೆ. ಯಾವುದೇ ಅನುಮಾನಾಸ್ಪದ ಮಾಹಿತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಹೇಳಿಕೆ ದಾಖಲಿಸಿಕೊಂಡು ಮೊಬೈಲ್  ಮರಳಿಸಿದ್ದಾರೆ.

ಪ್ರಕರಣ ಸಂಬಂಧ ವೈಶಾಖ್ ಅವರ ಪತ್ನಿ ಮೇಘನಾ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೃಷಿ ತಾಪಂಡ ಅವರ ಫ್ಲ್ಯಾಟ್‌ನ ಕೋಣೆಯ ಬೆಡ್ ಮೇಲೆ ವೈಶಾಖ್ ಮೃತದೇಹ ಪತ್ತೆಯಾಗಿತ್ತು. ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದಿದ್ದು, ಅರ್ಧ ಸೀರೆ ತುಂಡಾಗಿತ್ತು. ಕುತ್ತಿಗೆ ಭಾಗದಲ್ಲಿ ಗುರುತು ಕಂಡು ಬಂದಿದ್ದವು.  ಆತ್ಮಹತ್ಯೆ ಕುರಿತು ಯಾರ ಮೇಲೂ ಅನುಮಾನವಿಲ್ಲ  ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!