ಪತ್ರಕರ್ತ, ನಟ ಯತಿರಾಜ್ ಯಾವುದಾದರೊಂದು ಹೊಸ ಅವತಾರ ಪಡೆಯುತ್ತಲೇ ಇರುತ್ತಾರೆ. ಇತ್ತೀಚಿಗೆ ದಾರಾವಾಹಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಅವರು, ಇದೀಗ ತಮ್ಮ ನಿರ್ದೇಶನದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿ ಚಿತ್ರಕಥೆಯಲ್ಲಿ ತೊಡಗಿಕೊಂಡಿದ್ದಾರೆ.
ಯುಗಾದಿ ಹಬ್ಬದಂದು ಬೆಂಗಳೂರಿನ ಪ್ರಶಾಂತನಗರದ ಪ್ರಶಾಂತ ಗಣಪತಿ ದೇವಾಲಯದಲ್ಲಿ ಸರಳವಾಗಿ ಪೂಜೆ ನೆರವೇರಿಸಿಕೊಂಡ ಚಿತ್ರತಂಡ ಇದೀಗ ಕಲಾವಿದರ ಹುಡುಕಾಟದಲ್ಲಿದೆ. ಸುನಿ ವಿನಿ ಪ್ರಸ್ತುತ ಪಡಿಸುತ್ತಿರುವ ಈ ಹೊಸ ಚಿತ್ರ ವೃದ್ಧಿ ಎಂಟರ್ಪ್ರೈಸ್ ಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಟಿ ಆರ್ ಚೇತನ್ ಬಂಡವಾಳ ಹೂಡುತ್ತಿದ್ದಾರೆ.

ಇದೇ ಮೊದಲಬಾರಿಗೆ ಹಾರರ್ ಕಥಾ ಹಂದರದ ಹಿಂದೆ ಬಿದ್ದಿರುವ ಯತಿರಾಜ್, ಹೊಸಬಗೆಯ ಕಥೆ ಮಾಡಿಕೊಂಡಿದ್ದಾರಂತೆ. ಹಾರರ್ ಮಿಶ್ರಿತ ಕಥೆಯಲ್ಲಿ ಹಾಸ್ಯ ಹಾಗೂ ಭಾವನಾತ್ಮಕ ಬೆಸುಗೆಯ ತೀವ್ರತೆಗೂ ಹೆಚ್ಚು ಒತ್ತುಕೊಟ್ಟಿದ್ದಾರಂತೆ.
ಇನ್ನೂ ಹೆಸರಿಡದ ಈ ಚಿತ್ರ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಅತ್ಯುತ್ತಮ ಪ್ರತಿಭೆಗಳನ್ನು ಎದರು ನೋಡುತ್ತಿದೆ. ಈ ಹಿಂದೆ ಯತಿ ನಿರ್ದೇಶನದ ‘ಸಂಜು’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ವಿಜಯ್ ಹರಿತ್ಸ ಇದೀಗ ಮತ್ತೊಮ್ಮೆ ಜೊತೆಯಾಗಿದ್ದಾರೆ. ಶ್ರೀಕಾಂತ್ ಸಂಭಾಷಣೆ ಬರೆಯುತ್ತಿದ್ದು, ಸುಧೀಂದ್ರ ವೆಂಕಟೇಶ್ ಅವರ ಪ್ರಚಾರ ಕಲೆ, ಅರುಣ್ ಕುಮಾರ್ ಅವರ ಸಹ ನಿರ್ದೇಶನವಿರಲಿದೆ ಎಂದು ತಿಳಿದು ಬಂದಿದೆ. ಉಳಿದ ತಂತ್ರಜ್ಞರ ಹಾಗೂ ಕಲಾವಿದರ ಆಯ್ಕೆ ನಡೆಯುತ್ತಿದೆ.





Be the first to comment