ಯುವರತ್ನ ಬಿಡುಗಡೆಗೆ ಒತ್ತಾಯ

ರಾಜ್ಯಾದ್ಯಂತ ಯುವರತ್ನ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವಂತೆ ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ. ಯುವರತ್ನ ಬಿಡುಗಡೆಯಾದಾಗ ಎರಡನೇ ಅಲೆ ಉಲ್ಬಣಗೊಂಡಿತ್ತು. ಈ ಕಾರಣದಿಂದ ಸರ್ಕಾರ ಮತ್ತೆ ಚಿತ್ರಮಂದಿರದಲ್ಲಿ ಶೇ.50ರಷ್ಟು ಆಸನ ವ್ಯವಸ್ಥೆ ಇರಬೇಕೆಂದು ಆದೇಶ ನೀಡಿತ್ತು. ಒಂದು ವಾರ ಚಿತ್ರಮಂದಿರದಲ್ಲಿದ್ದ ಈ ಸಿನಿಮಾವನ್ನು ಸಾಕಷ್ಟು ಅಭಿಮಾನಿಗಳು ನೋಡಲು ಸಾಧ್ಯವಾಗಿರಲಿಲ್ಲ. ಯುವರತ್ನ ಬಿಡುಗಡೆಯಾದ 9ನೆಯ ದಿನಕ್ಕೆ ಅಮೆಜಾನ್ ಪ್ರೈಂನಲ್ಲಿ ಚಿತ್ರ ರಿಲೀಸ್ ಮಾಡಲಾಯಿತು. ಇದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು.

ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಲ್ಲಿರುವ ಅಭಿಮಾನಿಗಳು ಯುವರತ್ನವನ್ನು ಮರುಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಯುವರತ್ನವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ಸಂತೋಷ್ ಆನಂದ್‌ರಾಮ್ ನಿರ್ದೇಶಕ ಆಗಿ ಕೆಲಸ ಮಾಡಿದ್ದರು.

“ಯುವರತ್ನ ಬಿಡುಗಡೆ ಆದಾಗ ಸಾಕಷ್ಟು ತೊಂದರೆ ಆಗಿ ಚಿತ್ರ ಪ್ರದರ್ಶನ ರದ್ದಾಯಿತು. ಈಗ ಮತ್ತೊಮ್ಮೆ ಚಿತ್ರ ರಿಲೀಸ್ ಮಾಡಿ. ಸಿನಿಮಾ ನೋಡಲು ಅವಕಾಶ ಕೊಡಿ” ಎಂದು ಪುನೀತ್ ಅಭಿಮಾನಿಗಳು ನಿರ್ಮಾಪಕರು ಹಾಗೂ ನಿರ್ದೇಶಕರ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಯುವರತ್ನ ಸಿನಿಮಾದಲ್ಲಿ ದೊಡ್ಡ ತಾರಾಗಣ ನಟಿಸಿದ್ದು, ಪುನೀತ್ ಜೊತೆ ಸಾಯೇಷಾ ನಾಯಕಿಯಾಗಿ ನಟಿಸಿದ್ದರು. ಪ್ರಕಾಶ್ ರೈ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ನಟಿಸಿದ್ದರು. ಜೊತೆಗೆ ಧನಂಜಯ್, ದಿಗಂತ್, ಸಾಯಿ ಕುಮಾರ್, ಸೋನು ಗೌಡ, ಸುಧಾರಾಣಿ, ರಂಗಾಯಣ ರಘು, ಸಾಧುಕೋಕಿಲಾ, ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ನಟರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಅಭಿಮಾನಿಗಳ ಬೇಡಿಕೆಯಂತೆ ಚಿತ್ರ ಮರುರಿಲೀಸ್ ಆಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!