‘ಮಾರಿಗೋಲ್ಡ್ ‘ ಚಿತ್ರದ ಟ್ರೇಲರ್ ಬಿಡುಗಡೆ ; ಏ.5ಕ್ಕೆ‌ ಚಿತ್ರ ಬಿಡುಗಡೆ

ಚಿನ್ನದ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆ ಇಟ್ಟುಕೊಂಡು ನಿರ್ಮಾಪಕ ರಘುವರ್ಧನ್ ಅವರು “ಮಾರಿಗೋಲ್ಡ್” ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಬಿಡುಗಡೆಗೆ ಸಿದ್ದವಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ ಹಾಗೂ ದಿಗಂತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧೀ ಹೀಗೆ ೪ ಪಾತ್ರಗಳ ಮೇಲೆ ಇಡೀಕಥೆ ಸುತ್ತುತ್ತದೆ. ಸಂಪತ್ ಮೈತ್ರೇಯಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ರಘುವರ್ಧನ್, “ಮಾರಿಗೋಲ್ಡ್” ಆಕ್ಷನ್, ಥ್ರಿಲ್ಲರ್ ಜಾನರ್ ಚಿತ್ರ. ಬೆಂಗಳೂರು, ಸಕಲೇಶಪುರ ಸುತ್ತ ಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.

ನಿರ್ದೇಶಕ ರಾಘವೇಂದ್ರ ಎಂ.ನಾಯ್ಕ್ ಮಾತನಾಡಿ ಈ ಚಿತ್ರ ಆಗಲು ನಿರ್ಮಾಪಕ ರಘುನಂದನ್, ದಿಗಂತ್ ಹಾಗೂ ವಿಜಯ್ ಭರಮಸಾಗರ ಕಾರಣ. ಹಲವು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡಿದ ಕಲಾವಿದರೇ ಇದರಲ್ಲಿದ್ದರಿಂದ ಎಲ್ಲೂ ತೊಂದರೆಯಾಗಲಿಲ್ಲ ಎಂದರು.

ನಟ ದಿಗಂತ್ ಮಾತನಾಡಿ ನಿರ್ದೇಧಕ ರಘು ಜೊತೆ ಹಿಂದೆಯೇ ಕೆಲಸ ಮಾಡಬೇಕಿತ್ತು. ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇವೆ. ಹೊಗೆ ಧೂಳಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಮ್ಮೊಮ್ಮೆ ಏಳೆಂಟು ಟೇಕ್ ಆಗುತ್ತಿತ್ತು. ಚಿತ್ರ ನೋಡಿದಾಗ ಯಾಕೆ ಅಷ್ಟೊಂದು ಟೇಕ್ ತೆಗೆದುಕೊಂಡರು ಎನ್ನುವುದು ಗೊತ್ತಾಯಿತು. ನಾನೇನಾ ಆಕ್ಟ್ ಮಾಡಿರುವುದು ಅನ್ನಿಸಿತು. ನನ್ನ ಬೆನ್ನು ನಾನೇ ತಟ್ಟಿಕೊಂಡು ಖುಷಿ ಪಟ್ಟೆ . ನಿರ್ಮಾಪಕರು ತುಂಬಾ ತಿಳಿದುಕೊಂಡಿದ್ದಾರೆ. ಅವರೇ ನಿರ್ದೇಶಕರಾಗಿದ್ದರೂ ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದ್ದಾರೆ. ವೀರಸಮರ್ಥ ಒಳ್ಳೇ ಸಾಂಗ್ ಕೊಟ್ಟಿದ್ದಾರೆ ಎಂದರು.

ನಟಿ ಸಂಗೀತ ಮಾತನಾಡಿ ಶಾಲೆಯಲ್ಲಿ ಇರುವಾಗ ದಿಗಂತ್ ಮೇಲೆ ಕ್ರಷ್ ಆಗಿತ್ತು. ಅವರ ಜೊತೆ ಫೋಟೋ ತೆಗೆಸಿಕೊಂಡರೆ ಸಾಕು ಅನ್ನಿಸಿತ್ತು. ಈಗ ಅವರ ಜೊತೆ ನಟಿಸಿದ್ದ ಖುಷಿ ಆಗಿದೆ. ಅವರ ಜೊತೆ ಲವ್ ಸ್ಟೋರಿ ಚಿತ್ರ ಮಾಡುವ ಆಸೆ ಇತ್ತು ಆದರೆ ಆಕ್ಷನ್ ಸಿನಿಮಾ ಸಿಕ್ಕಿತ್ತು. ದಿಗಂತ್ ಜೊತೆ ನಟಿಸುತ್ತಿರುವುದಕ್ಕೆ ಖುಷಿ ಇದೆ ಎಂದು ಹೇಳಿಕೊಂಡರು.

ಕಲಾವಿದರಾದ ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಗಣೇಶ್ ರಾವ್ ಕೇಸರ್ ಕರ್, ವಜ್ರಾಂಗ್ ಶೆಟ್ಟಿ, ಮಹಂತೇಶ್ ಹಿರೇಮಠ್ ,ಸಂಗೀತ ನಿರ್ದೇಶಕ ವೀರ್ ಸಮರ್ಥ, ಸಂಭಾಷಣೆಕಾರ ರಘು ನಿಡವಳ್ಳಿ, ಸಾಹಿತಿ ಕವಿರಾಜ್, ಛಾಯಾಗ್ರಾಹಕ ಕೆಎಸ್ ಚಂದ್ರಶೇಖರ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!