ಸಂಭಾವನೆ ಸಿಕ್ಕಾಪಟ್ಟೆ ಹೆಚ್ಚಿಸಿಕೊಂಡ ಸ್ಟಾರ್ ನಟರು ಮತ್ತು ತಂತ್ರಜ್ಞರು, ಮಲ್ಟಿಪ್ಲೆಕ್ಸ್ ಟಿಕೆಟ್ ಬೆಲೆಗಳು ಕನ್ನಡ ಚಿತ್ರೋದ್ಯಮಕ್ಕೆ ಕಂಟಕ ಎಂದು ನಿರ್ದೇಶಕ ಎಂ ಚೈತನ್ಯ ಹೇಳಿದ್ದಾರೆ.
‘ಮಲ್ಟಿಪ್ಲೆಕ್ಸ್ಗಳು ಸಿನಿ ಅನುಭವವನ್ನು ದುಬಾರಿಯಾಗಿಸಿವೆ. ಒಟಿಟಿ ವೇದಿಕೆಗಳು ಚಿತ್ರಗಳನ್ನು ಮನೆಯಲ್ಲಿಯೇ ಕುಳಿತು ನೋಡುವಂತೆ ಮಾಡಿವೆ. ಆದರೂ ಅನೇಕ ನಟರು ಮತ್ತು ತಂತ್ರಜ್ಞರು ಈ ವಾಸ್ತವಗಳನ್ನು ಒಪ್ಪಿಕೊಳ್ಳದೆ ಹೆಚ್ಚಿನ ಸಂಭಾವನೆಯನ್ನು ಬೇಡುತ್ತಲೇ ಇದ್ದಾರೆ. ಈ ಎಲ್ಲ ಅಂಶಗಳು ನಮ್ಮ ಚಿತ್ರೋದ್ಯಮವನ್ನು ಅವನತಿಯತ್ತ ತಳ್ಳುತ್ತಿವೆ. ಅದನ್ನು ನಿಲ್ಲಿಸಲು ನಾವು ಸಾಮೂಹಿಕವಾಗಿ ಯೋಚಿಸಬೇಕು’ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಬರೆದಿದ್ದಾರೆ.
‘ಕರ್ನಾಟಕದಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಹಣ ಗಳಿಸುವ ಸದ್ಯದ ವಿಧಾನವು ಇನ್ಮುಂದೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಭವಿಷ್ಯದಲ್ಲಿ ಸುಸ್ಥಿರವಾಗಿರುವುದಿಲ್ಲ’ ಎಂದು ಹೇಳಿದ್ದಾರೆ.
ಚೈತನ್ಯ ಅವರ ಹೇಳಿಕೆಗಳು ಚರ್ಚೆಯನ್ನು ಹುಟ್ಟುಹಾಕಿದ್ದು, ನಿರ್ದೇಶಕರು ಮತ್ತು ನಿರ್ಮಾಪಕರಿಂದ ಪ್ರತಿಕ್ರಿಯೆಗಳು ಬಂದಿವೆ.
‘ಸಿನಿಮಾವನ್ನು ರಕ್ಷಿಸುವ ಜವಾಬ್ದಾರಿ ನಿರ್ಮಾಪಕರ ಮೇಲೆ ಮಾತ್ರ ಇರಬಾರದು. ಪ್ರದರ್ಶಕರು ಮತ್ತು ವಿತರಕರಿಂದ ಹಿಡಿದು ನಟರು, ತಂತ್ರಜ್ಞರು ಮತ್ತು ಸ್ಟುಡಿಯೋಗಳವರೆಗೆ ಪ್ರತಿಯೊಬ್ಬ ಪಾಲುದಾರರು’ ಎಂದು ನಿರ್ದೇಶಕ ಮತ್ತು ನಿರ್ಮಾಪಕ ಬಿ.ಎಸ್. ಲಿಂಗದೇವರು ಹೇಳಿದ್ದಾರೆ.
ನಟ ಮತ್ತು ನಿರ್ದೇಶಕ ನಾಗೇಂದ್ರ ಅರಸ್ ಕೂಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ತಾರೆಯರ ಸಂಭಾವನೆಯನ್ನು ಔಪಚಾರಿಕವಾಗಿ ನಿಯಂತ್ರಿಸಬೇಕೆಂದು ಕರೆ ನೀಡಿದ್ದಾರೆ.





Be the first to comment