Suryavamsha Serial: ‘ಸೂರ್ಯವಂಶ’ ಧಾರಾವಾಹಿ ಶುರು ಮಾಡಿದ ಅನಿರುದ್ಧ್ ; ಮಾ.11ಕ್ಕೆ ಉದಯ ಟಿವಿಯಲ್ಲಿ ಪ್ರಸಾರ

ಡಾ. ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಈಗ ಅದೇ ಹೆಸರಿನ ಕಿರುತೆರೆಯಲ್ಲಿ ಸೀರಿಯಲ್ ಬರ್ತಾ ಇದೆ. ಒಂದು ವಿಶೇಷ ಏನಪ್ಪ ಅಂದರೆ ಕಿರುತೆರೆ ಹಾಗೂ ಬಿಗ್ ಸ್ಕ್ರೀನ್​ನಲ್ಲಿ ಮೋಡಿ ಮಾಡಿದ ನಟ ಅನಿರುದ್ಧ್ ಈಗ ಸೂರ್ಯವಂಶದ ಕುಡಿಯಾಗಿ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ’ಸೂರ್ಯವಂಶ’ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಬಯಕೆ. ವಂಶದ ಕುಡಿ 20 ವರ್ಷಗಳ ಹಿಂದೆ ಮೊಮ್ಮಗ ಸೂರ್ಯವರ್ಧನ ಕಾಣೆಯಾಗಿದ್ದೆ ಚಿಂತೆಗೆ ಕಾರಣವಾಗಿರುತ್ತದೆ. ಒಂದು ಆಕಸ್ಮಿಕ ಸಂದರ್ಭದಲ್ಲಿ ಆ ಹುಡುಗ ಸಿಗುತ್ತಾನೆ. ತಾಯಿಯ ಚಿಕಿತ್ಸೆಗೆ ಹಣ ಬೇಕಿರುವುದರಿಂದ ಆತನು ಈ ನಾಟಕಕ್ಕೆ ಒಪ್ಪಿಕೊಳ್ಳುತ್ತಾನೆ. ಅವನೇ ಕಥಾನಾಯಕ ಕರ್ಣ.

ನಂತರ ಕರ್ಣನು ಸೂರ್ಯವಂಶಕ್ಕೆ ಕಾಲಿಟ್ಟ ನಂತರ ಎಲ್ಲಾ ಕಡೆಗಳಿಂದಲೂ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅದೇ ಊರಿನ ಕಾಳಿಂಗ ಆಟಾಟೋಪವನ್ನು ಬಗ್ಗು ಬಡಿಯಲು ಕರ್ಣನಿಂದ ಮಾತ್ರ ಸಾಧ್ಯ ಎಂದು ಊರ ಜನರು ನಂಬಿರುತ್ತಾರೆ. ಇದರ ಮಧ್ಯೆ ನಾಯಕಿ ಸುರಭಿ ಆಗಮನವಾಗುತ್ತದೆ. ಇದರಿಂದ ಕಥೆ ಹೊಸ ರೂಪ ಪಡೆದುಕೊಳ್ಳುತ್ತದೆ. ಮುಂದೆ ಕರ್ಣನೇ ಸೂರ್ಯವರ್ಧನ ಎನ್ನುವ ವಿಷಯ ತಿಳಿಯುತ್ತದೆ. ಅದು ಹೇಗೆ, ಯಾರಿಂದ, ಯಾವಾಗ ಎಂಬ ಸನ್ನಿವೇಶಗಳೊಂದಿಗೆ ರೋಚಕ ತಿರುವುಗಳು ಬರುತ್ತದೆ. ಪ್ರತಿ ಕಂತುಗಳು ಶ್ರೀಮಂತವಾಗಿ ಮೂಡಿಬಂದಿರುವುದು ವಿಶೇಷ.

ನಾಯಕನಾಗಿ ಅನಿರುದ್ದ್‌ ಜಟ್ಕರ್, ನಾಯಕಿಯಾಗಿ ಸುರಭಿ. ತಾತನಾಗಿ ಸುಂದರರಾಜ್, ಖಳನಾಗಿ ದಿ. ಉದಯ್‌ಕುಮಾರ್ ಪುತ್ರ ವಿಕ್ರಂ ಉದಯಕುಮಾರ್. ಉಳಿದಂತೆ ರವಿಭಟ್, ಸುಂದರಶ್ರೀ, ಲೋಕೇಶ್‌ಬಸವಟ್ಟಿ, ಪುಷ್ಪಾಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರು ನಟಿಸುತ್ತಿದ್ದಾರೆ.

ಅದ್ಧೂರಿಯಾಗಿ ಚಿತ್ರೀಕರಣ ಆಗಿರುವ ಧಾರಾವಾಹಿ ಉದಯ ವಾಹಿನಿಯಲ್ಲಿ ಮಾರ್ಚ್ 11ರಿಂದ ಅಂದರೆ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ತನ್ವಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಪಕ ಎಲ್. ಪದ್ಮನಾಭ ಬಂಡವಾಳ ಹೂಡುವುದರ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ.

ಬೈಟ್ ಟು ಲವ್ ಸಿನಿಮಾ ಬಳಿಕ ನಿರ್ದೇಶಕ ಹರಿ ಸಂತು ಇದೇ‌ ಮೊದಲ ಬಾರಿಗೆ ಈ ಧಾರಾವಾಹಿಯನ್ನ ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಮುಚ್ಚಳಗುಡ್ಡ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪ್ರೋಮೊ ಮೂಲಕ ಕುತೂಹಲ ಹುಟ್ಟಿಸಿರೋ ಸೂರ್ಯವಂಶ ಕರ್ಣನಾಗಿ ಅನಿರುದ್ದ್​ ಸಿನಿಮಾ ಪ್ರಿಯರ ಮನಸ್ಸು ಗೆಲ್ಲುತ್ತಾರಾ ಎಂಬುದನ್ನು ಕಾಲ ನಿರ್ಧರಿಸಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!