ಕರೊನಾ ಅಘಾತ, ಮಾನಸಿಕ ಖಿನ್ಮತೆಯ ಸುತ್ತ “ಟೈಮ್‌ಲಿ ಟ್ರಾನ್ಸ್‌ಕ್ರಿಪ್ಷನ್” ಕೃತಿ!!

ವಿಶ್ವದ ಅತ್ಯಂತ ಜನಪ್ರಿಯ ಲೇಖಕರ ಪೈಕಿ ಡಾ.ಮಾರ್ಷಲ್ ಗೋಲ್ಡ್ ಸ್ಮಿತ್ ಒಬ್ಬರು. ಇವರ ಜನಪ್ರಿಯತೆಗೆ ಕಾರಣ ಟೈಮ್ಸ್ # 1 ಟ್ರಿಗರ್ಸ್, ಮೊಜೋ ಮತ್ತು ವಾಟ್ ಗಾಟ್ ಯು ಹಿಯರ್ ವೊಂಟ್ ಗೆಟ್ ಯು ದೇರ್ ಕೃತಿಗಳು. ಇಂಥ ಜನಪ್ರಿಯ ಲೇಖಕರಿಂದ ಮತ್ತೊಬ್ಬ ಲೇಖಕರ ನೈಜ ಬರವಣಿಗೆಯ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸುವುದು ಅಷ್ಟು ಸುಲಭದ ಪ್ರಯತ್ನವಲ್ಲ. ಅಂಥ ಪ್ರಶಂಸೆಗೆ ಒಳಗಾಗಿರುವವರೆ ಉದಯೋನ್ಮುಖ ಲೇಖಕಿ ಪ್ರಿಯಾಂಕಾ ಎಸ್ ರಾಜು!

“ಟೈಮ್‌ಲಿ ಟ್ರಾನ್ಸ್‌ಕ್ರಿಪ್ಷನ್” ಎಂಬ ಕೃತಿಯ ಕಾರಣಕರ್ತೆಯಾದ ಇವರ ಬಗ್ಗೆ ಡಾ. ಗೋಲ್ಡ್ ಸ್ಮಿತ್ ಅವರ ಹೇಳಿಕೆಯೇ ಇವರು ಎಂಥ ಪ್ರಬುದ್ಧ ವಿಚಾರವಂತೆ ಎಂಬುದು ಮನವರಿಕೆಯಾಗುತ್ತದೆ. ಅಂದರೆ ಲೇಖಕಿ ಪ್ರಿಯಾಂಕಾ ರಾಜು ತಮ್ಮ ಬರಹದಲ್ಲಿ ಕಷ್ಟದ ಜೀವನ ನಡೆಸುವ ಸಂದರ್ಭಗಳಲ್ಲಿ ಘಟಿಸುವಂಥ ವಾಸ್ತವಿಕ ಬಿಕ್ಕಟ್ಟಿನ ಬಗ್ಗೆ ತಮ್ಮ ಬರಹದಲ್ಲಿ ಬಿಚ್ಚಿಡುವ ಇವರ ಕಥಾಹಂದರದ ರಚನೆಯೇ ಇದಕ್ಕೆ ಸಾಕ್ಷಿ ಎಂಬುದು ಈ ಕೃತಿಯಲ್ಲಿ ವ್ಯಕ್ತವಾಗಿದೆ.

ಪ್ರಿಯಾಂಕಾ ರಾಜು ಅವರ “ಟೈಮ್‌ಲಿ ಟ್ರಾನ್ಸ್‌ಕ್ರಿಪ್ಷನ್” ಎಂಬ ಪುಸ್ತಕದಲ್ಲಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ನಾವು ಮೊದಲೇ ಎಚ್ಚರಿಕೆಯಿಂದ ಇರುವುದಿಲ್ಲ. ಅಲ್ಲದೆ ಸಂಭವಿಸುವ ವಿರುದ್ಧವಾದ ಘಟನೆಗಳ ಬಗ್ಗೆ ಮುನ್ನೆಚ್ಚರಿಕೆಯಿಂದ ಸೂಕ್ತ ವಾದ ರಕ್ಷಣೆ ಮಾಡಿಕೊಳ್ಳುವುದಕ್ಕೆ ಕೇವಲ ಗಮನಹರಿಸುತ್ತೇವೆಯೇ ಹೊರತು ಅದರಿಂದ ರಕ್ಷಿಸಿಕೊಳ್ಳುವುದಕ್ಕೆ ಮನಸ್ಸು ಮಾಡುವುದಿಲ್ಲ. ಈ ಮೂಲಕ ಅದರ ಮಹತ್ವವನ್ನು ನಿರ್ಲಕ್ಷ್ಯ ಮಾಡುವುರಿಂದ ಕೆಳಮುಖವಾಗಿ ಹೋಗಿ ಬಿಕ್ಕಟ್ಟಿನ ಸುರುಳಿಯಲ್ಲಿ ಸಿಲುಕಿಕೊಳ್ಳುತ್ತೇವೆ ಎಂಬ ಬಗ್ಗೆ ಹೇಳಿರುವುದನ್ನು ಗಮನಿಸಿದರೆ ಪ್ರಸ್ತುತ ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ಬಗ್ಗೆ ಈ ಕೃತಿ ವಾರೆನೋಟ ಬೀರಿದೆ.

ಇವರ ಕೃತಿಯಲ್ಲಿ ಎದ್ದು ಕಾಣುತ್ತಿರುವ ಮುಖ್ಯ ಅಂಶವೆಂದರೆ ಕೊರೊನಾ ಮತ್ತು ಮಾನಸಿಕ ಖಿನ್ನತೆ. ಪ್ರಸ್ತುತ ಇಡೀ ಜಗತ್ತಿನ ಜನ ಕೊರೊನಾ ಎಂಬ ದುಷ್ಟ ರೋಗಕ್ಕೆ ತುತ್ತಾಗಿ ತಮ್ಮ ಜೀವನವೇ ಹೇಗೆ ಅಲ್ಲೋಲ ಕಲ್ಲೋಲಕ್ಕೆ ಒಳಗಾಗಿದೆ.. ಎಷ್ಟೋ ಜನರು ಸೇವಿಸಲು ಆಹಾರವಿಲ್ಲದೆ ಅಸುನಿಗುತ್ತಿದ್ದಾರೆ…ಉದ್ಯೋಗವಿಲ್ಲದೆ ಹೇಗೆ ಪರಿತಪಿಸುತ್ತಿದ್ದಾರೆ….ಕೋಟಿ ಕೋಟಿ ಇದ್ದರೂ ಕೊರೊನಾ ಕಾಟದಿಂದ ತಪ್ಪಿಸಿಕೊಳ್ಳಲು ಯಾವುದೇ ಪರಿಹಾರ ಸಿಗದಿರುವ ಬಗ್ಗೆ, ಆಕಾಶದಲ್ಲಿ ಹಕ್ಕಿಗಳು ಮುಕ್ತವಾಗಿ ಸಂಚಾರ ಸ್ವಾತಂತ್ರ್ಯವನ್ನು ಹೊಂದಿರುವಂತೆ, ಮಾನವ ಭುವಿಯ ಮೇಲೆ ಮಾತ್ರವಲ್ಲ ಗಗನದಲ್ಲೂ ಹಕ್ಕಿಯಂತೆ ಮುಕ್ತವಾಗಿ ಸಂಚರಿಸಲು ಸಾಧ್ಯವಾಗದೇ ಗೃಹಬಂಧನದಲ್ಲಿ ಬಂಧಿಯಾಗಿರುವ ಬಗ್ಗೆ ಓದುಗರ ಮನಸ್ಸುಗಳು ಮಮ್ಮಲ ಮರುಗುವಂತೆ ಬರವಣಿಗೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅದರಲ್ಲೂ ಮೊನ್ನೆ ಮೊನ್ನೆ ಬಾಲಿವುಡ್ ನಟ ಸುಶಾಂತ್ ಸಿಂಗ್ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವವನ್ನೇ ತೆತ್ತಿದ್ದು, ಅದಕ್ಕೆ ಕಾರಣಗಳು. ಇಂಥ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಇತರರು ಹೇಗೆ ಹೊರಬಂದು ಜೀವ ಉಳಿಸಿಕೊಳ್ಳುವ ಪರಿಹಾರ ಮಾರ್ಗಗಳನ್ನು ಹುಡುಕಿಕೊಳ್ಳುವ ಬಗ್ಗೆ ಮನಮುಟ್ಟುವಂತೆ ಅನಾವರಣಗೊಳಿಸಿದ್ದಾರೆ ಪ್ರಿಯಾಂಕಾ ರಾಜು ಅವರ ದೃಷ್ಟಿಕೋನದಲ್ಲಿ ಇಂಥ ಕೆಳಮುಖ ಸುರುಳಿಗೆ ಸಿಲುಕಿಕೊಳ್ಳುವ ಮಿಲಿಯನ್ ಗಟ್ಟಲೆ ಅಂಶಗಳಲ್ಲಿ “ಸಂಭಾಷಣೆಗಳು” ಪ್ರಮುಖವಾಗಿ ಎದ್ದು ಕಾಣುತ್ತವೆ.

ಈ ಕೃತಿಯ ಲೇಖಕಿ ಪ್ರಿಯಾಂಕಾ ರಾಜು ಅವರದ್ದು ವೃತ್ತಿ ಉದ್ಯಮ ಕ್ಷೇತ್ರದಲ್ಲಾದರು ಪ್ರವೃತ್ತಿ ಬರವಣಿಗೆ. ಅನನ್ಯ ಜೀವನದ ಅನುಭವಗಳ ಅಮೃತತ್ವವನ್ನು ಓದುಗರಿಗೆ ಧಾರೆ ಎರೆಯುತ್ತಿರುವುದು ಸಾರ್ಥಕವಾದ ಕಾಯಕ. ದೇಶ ನೋಡು ಇಲ್ಲ ಕೋಶ ಓದು ಎಂಬ ಈ ಎರಡು ಮಾತುಗಳಿಗೆ ಅನ್ವರ್ಥವಾಗಿರುವ ಪ್ರಿಯಾಂಕಾ ರಾಜು ಅಧ್ಯಯನದ ಚಾಳಿಯ ಮೂಲಕ ಮನಸ್ಸಿನ ವೈಶಾಲತೆಯನ್ನು ವಿಸ್ತರಿಸಿಕೊಂಡು, ಪ್ರಯಾಣದ ಮೂಲಕ ನವನವೀನ ದೃಷ್ಠಿಕೋನಗಳನ್ನು ತಂದುಕೊಂಡು ಆವುಗಳನ್ನು ಬರವಣಿಗೆ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಮೂರು ಅಂಶಗಳ ಮೇಲೆ ತಮ್ಮ ವಿಶ್ವಪಯಣ ಮಾಡಿ ವಿವಿಧ ಸಂಸ್ಕೃತಿಯ ಜನ ಸಮುದಾಯವನ್ನು ಭೇಟಿ ಮಾಡಿದ್ದಾರೆ.

ಇವರ ಅಧ್ಯಯನದ ಆಸಕ್ತಿಯ ಪರಾಕಾಷ್ಠೆಯು ಮಾನವರ ನೈಜ ಜೀವನದ ಸನ್ನಿವೇಶಗಳನ್ನು ಮತ್ತು ಅವರ ನಡವಳಿಕೆಗಳನ್ನು ವಿಮರ್ಶಾತ್ಮಕ ಸಂಭಾಷಣೆಗಳ ಮೂಲಕ ತಮ್ಮ ಜೀವನದ ಅನುಭವವನ್ನು ಪರಿವರ್ತಿಸುವ ಶಕ್ತಿಯೊಂದಿಗೆ ಜನರನ್ನು ಪ್ರೇರೇಪಿಸುವ ಮತ್ತು ಚಲಿಸುವ ಹೋರಾಟವೇ ಆಗಿದೆ ಎಂಬುದು ಈ ಕೃತಿಯ ಮುಖ್ಯ ಉದ್ದೇಶಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಈ ಲೇಖಕಿಯ “ಸಮಯೋಚಿತ ಪ್ರತಿಲೇಖನಗಳು” ಆ ದೃಷ್ಟಿಯ ಪರಾಕಾಷ್ಠೆಯೂ ಸಹ ಆಗಿದೆ.

ಒಟ್ಟಾರೆ ವಾಸ್ತವ ದೃಷ್ಟಿಕೋನದಿಂದ ಹೇಳ ಬೇಕಾದರೆ ಪ್ರಿಯಾಂಕಾ ರಾಜುರವರ ಈ ಚೊಚ್ಚಲ ಕೃತಿಯು ಸಂಭಾಷಣೆಯ ಶಕ್ತಿಯ ಬಗ್ಗೆ ಮತ್ತು ಅವುಗಳಿಂದ ಉಂಟಾಗುವ ವಿನಾಶಕಾರಿ ಪರಿಣಾಮಗಳನ್ನು ನಿರಾಕರಿಸುವ ಮಹತ್ವದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ಅಲ್ಲದೇ ಸಂಭಾಷಣೆಗಳಿಂದ ಉಂಟಾಗುವ ವಿನಾಶಕಾರಿ ಪರಿಣಾಮಗಳನ್ನು ನಿರಾಕರಿಸುವ ಪ್ರಮುಖ ಚಿಂತನೆಯು “ಟೈಮ್‌ಲಿ ಟ್ರಾನ್ಸ್‌ಕ್ರಿಪ್ಷನ್” ಕೃತಿಯ ಅನಾವರಣವೂ ಆಗಿದೆ.
ಪ್ರತಿಗಳಿಗಾಗಿ ಸಂಪರ್ಕಿಸಿ:
Authorpriyankaraju@gmail.com

Be the first to comment

Leave a Reply

Your email address will not be published. Required fields are marked *

Translate »
error: Content is protected !!