ವಿಷ್ಣುಪ್ರಿಯ ಸಿನಿಮಾಕ್ಕೆ ಸಾಹಸ ದೃಶ್ಯ ಜೋಡಣೆ

ಹೆಸರಾಂತ ನಿರ್ಮಾಪಕ ಕೆ ಮಂಜು ನಿರ್ಮಾಣದ ನೂತನ ಚಿತ್ರ `ವಿಷ್ಣುಪ್ರಿಯ’. ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ರೋಮಾಂಚನಕಾರಿ ಸಾಹಸ ದೃಶ್ಯಗಳನ್ನು ಸಂಯೋಜಿಸಲಾಗಿದೆ. ‘ವಿಷ್ಣುಪ್ರಿಯ’ ಚಿತ್ರಕ್ಕಾಗಿ ಕಳೆದ 10 ದಿನಗಳಿಂದ ಸಾಹಸ ದೃಶ್ಯಗಳ ಜೊತೆ ಹಾಡಿನ ಚಿತ್ರೀಕರಣ ಕೂಡಾ ನಡೆಸಲಾಗಿದೆ.

ಮಲಯಾಳಂ ಚಿತ್ರಗಳಲ್ಲಿ ಹೆಸರು ಮಾಡಿರುವ, ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಈ ಚಿತ್ರದ ಕಥಾ ನಾಯಕಿ. ಕೊಚ್ಚಿಯ ‘ಆದ್ರಪಲ್ಲಿ’ ಜಲಪಾತದ ಸುತ್ತ ಮುತ್ತ ಒಂದು ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಮಹಾ ಗಣಿ ಅರಣ್ಯದ ಹಿನ್ನೆಲೆಯಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಸಾಹಸ ದೃಶ್ಯದಲ್ಲಿ 50 ಕ್ಕೂ ಹೆಚ್ಚು ಸಾಹಸ ಕಲಾವಿದರುಗಳು ಪಾಲ್ಗೊಂಡಿದ್ದರು. ಖ್ಯಾತ ಸಾಹಸ ನಿರ್ದೇಶಕ ವಿಕ್ರಮ್ ವಿನೂತನ ಶೈಲಿಯಲ್ಲಿ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಿರ್ದೇಶಕ ವಿ ಕೆ ಪ್ರಕಾಶ್ ಈ ‘ವಿಷ್ಣುಪ್ರಿಯ’ ಚಿತ್ರದ ನಿರ್ದೇಶಕರು. ಚಿತ್ರ ಈಗ ಕೊನೆಯ ಹಂತದ ಚಿತ್ರೀಕರಣಕ್ಕೆ ತಲುಪಿದೆ. ‘ಪಡ್ಡೆ ಹುಲಿ’ ನಂತರ ಶ್ರೇಯಸ್ ಅವರಿಗೆ ಇದು ಎರಡನೇ ಸಿನಿಮಾ, ಕನ್ನಡದಲ್ಲಿ ಮಲಯಾಳಿ ಚೆಲುವೆ ಪ್ರಿಯ ವಾರಿಯರ್ ಅವರಿಗೆ ಇದು ಮೊದಲ ಸಿನಿಮಾ.

‘ವಿಷ್ಣುಪ್ರಿಯ’ ಧಾರವಾಡದ ಸಿಂಧು ಅವರ ಕತೆಯಾಧಾರಿತ ಸಿನಿಮಾ. ಗೋಪಿ ಸುಂದರ್ ಸಂಗೀತ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ರವಿ ಶ್ರೀವತ್ಸ ಚಿತ್ರಕಥೆ ಮತ್ತು ಸಂಭಾಷಣೆ, ಸುರೇಶ್ ಅರಸ್ ಸಂಕಲನ, ಮೋಹನ್ ಪಂಡಿತ್ ಕಲಾ ನಿರ್ದೇಶನ, ವಿನೋದ್ ಭಾರತಿ ಛಾಯಾಗ್ರಹಣ ಚಿತ್ರಕ್ಕಿದೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಚಿತ್ಕಲಾ, ಅಶ್ವಿನಿ ಗೌಡ, ಸುಚೇಂದ್ರ ಪ್ರಸಾದ್, ನವೀನ್ ಪಡಿಯಾಲ್ ಹಾಗೂ ಇತರರು ಇದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!