ಜೋಡೆತ್ತು

ಮೈಸೂರಲ್ಲಿ ‘ಜೋಡೆತ್ತು’ ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್

ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ ಜೋಡೆತ್ತು ಚಿತ್ರ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಚಿಕ್ಕಣ್ಣ, ಸುನಿಲ್ (ತೆಲುಗು) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ‘ಜೋಡೆತ್ತು’ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಮೈಸೂರಿನ ಹೊರ ಭಾಗದ ಇಮ್ಮಾವು ಬಳಿ ಅದ್ದೂರಿಯಾಗಿ ನಡೆಯುತ್ತಿದೆ. ಅಲ್ಲಿ ಛಾಯಾಗ್ರಾಹಕ ಕಮ್ ನಿರ್ದೇಶಕ ಸುಧಾಕರ್ ಈ ರೋಮಾಂಚನಕಾರಿ ಎತ್ತಿನಗಾಡಿ ಚೇಸಿಂಗ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು‌. ಸುಮಾರು ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಮತ್ತು ನೂರಾರು ಎತ್ತಿನ ಗಾಡಿಗಳನ್ನು ಬಳಸಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿತ್ತು.

ಈ ರೇಸ್ ನಲ್ಲಿ ಅದ್ಭುತ ಫೈಟ್ ಕೂಡ ಕಂಪೋಸ್ ಮಾಡಲಾಯಿತು. ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಕರ್ತರನ್ನು ಮೈಸೂರಿಗೆ ಆಹ್ವಾನಿಸಿತ್ತು. ಈ ವೇಳೆ ರೇಸ್ ನಲ್ಲಿ ಗೆದ್ದ ನಂದಿ (ಚಿಕ್ಕಣ್ಣ)ಯನ್ನು ಹೆಗಲಮೇಲೆ ಹೊತ್ತು ಗ್ರಾಮಸ್ಥರೆಲ್ಲ ಸಂಭ್ರಮಿಸುತ್ತಿದ್ದರು.

ವಿರಾಮದ ವೇಳೆ ನಡೆದ ಮಾಧ್ಯಮದ ಮುಂದೆ ಕಲಾವಿದರು, ತಂತ್ರಜ್ಞರು ಮಾಹಿತಿ ಹಂಚಿಕೊಂಡರು. ಚಿಕ್ಕಣ್ಣ ಮಾತನಾಡುತ್ತ ‘ಕಳೆದ ಒಂದು ವಾರದಿಂದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುತ್ತಿದ್ದೇವೆ‌. ಇದರೊಂದಿಗೆ ಟಾಕಿ ಪೋರ್ಷನ್ ಮುಕ್ತಾಯವಾಗಿದ್ದು, ಎರಡು ಹಾಡು ಮಾತ್ರ ಬಾಕಿಯಿದೆ. ಈ ರೇಸ್ ಗಾಗಿ ನಿರ್ಮಾಪಕರು ಸುತ್ತಮುತ್ತಲ ಊರುಗಳಿಂದ ಎತ್ತಿನ ಗಾಡಿಗಳನ್ನು ತರಿಸಿದ್ದರು. ಇನ್ನೆರಡು ಗೀತೆಗಳನ್ನು ಮುಂದಿನ ತಿಂಗಳು ಶೂಟ್ ಮಾಡುತ್ತೇವೆ’ ಎಂದರು.

ಜೋಡೆತ್ತು

ನಿರ್ದೇಶಕ ಸುಧಾಕರ್ ಮಾತನಾಡಿ,’ನಮ್ಮ ಚಿತ್ರದ 95% ಶೂಟಿಂಗ್ ಮುಕ್ತಾಯವಾಗಿದೆ. ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರನ್ನು ಬಳಸಿ ಕ್ಲೈಮ್ಯಾಕ್ಸ್ ಸೀನ್ ಮಾಡಿದ್ದೇವೆ. ಚಿತ್ರದ ಎಲ್ಲಾ ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ನಿರ್ಮಾಪಕರು ಯಾವುದಕ್ಕೂ ಕೊರತೆ ಮಾಡದೆ ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೈಸೂರು, ಮಂಡ್ಯ,ಮದ್ದೂರು, ಚನ್ನಪಟ್ಟಣ ಮುಂತಾದ ಕಡೆ ನೈಜವಾಗಿ ಶೂಟ್ ಮಾಡಲಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮುಗಿದಿದ್ದು, ಇನ್ನೆರಡು ಬಾಕಿ ಸಾಂಗ್ ಬಾಕಿಯಿದೆ. ಜೋಡೆತ್ತು ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, 1990-95ರ ಕಾಲಘಟ್ಟದಲ್ಲಿ ಕಥೆ ನಡೆಯಲಿದೆ. ಚಿತ್ರದಲ್ಲಿ ಎಮೋಷನ್, ಕಾಮಿಡಿ, ಲವ್, ಸೆಂಟಿಮೆಂಟ್ ಜತೆ ಗ್ರಾಮೀಣ ಸೊಗಡಿನ ಅದ್ಭುತವಾದ ಕಥೆಯಿದೆ’ ಎಂದು ಮಾಹಿತಿ ನೀಡಿದರು.

ತೆಲುಗು ನಟ ಸುನಿಲ್ ಮಾತನಾಡುತ್ತ ಗ್ರಾಮೀಣ ಸೊಗಡಿನ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುತ್ತಿದ್ದೇನೆ‌. ಸೀರಿಯಸ್ ಜತೆ ಕಾಮಿಡಿಯಾಗಿ ಸಾಗುವ ಪಾತ್ರ. ಇದೊಂದು ಸಂಪೂರ್ಣ ಫ್ಯಾಮಿಲಿ ಎಅಮಡರ್ ಟೈನರ್ ಎಂದು ಹೇಳಿದರು.

ನಾಯಕನ ತಾಯಿ ಪಾತ್ರ ಮಾಡುತ್ತಿರುವ ನಟಿ ಕಲ್ಯಾಣಿ ಮಾತನಾಡಿ ‘ಕಥೆಯಲ್ಲಿ ಮುಖ್ಯವಾದ ಪಾತ್ರ ನನ್ನದು. ಸುಧಾಕರ್ ಅವರ ಜೊತೆ ಈ ಮೊದಲು ‘ಕಾಟೇರ’ ಚಿತ್ರದಲ್ಲಿ ಕೆಲಸ ಮಾಡಿದ್ದೆ. ನನಗೆ ಮಂಡ್ಯ ಭಾಷೆ ಅಷ್ಟಾಗಿ ಬರ್ತಿರಲಿಲ್ಲ. ಚಿಕ್ಕಣ್ಣ ನನಗೆ ಹೇಳಿಕೊಟ್ಟರು’ ಎಂದು ಶೂಟಿಂಗ್ ಅನುಭವ ಹಂಚಿಕೊಂಡರು.

ಜೋಡೆತ್ತು

ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ಮಾತನಾಡಿ, ‘ನಾನೀ ಕಥೆಯನ್ನು ಹಲವು ನಟರಿಗೆ ಹೇಳಿದಾಗ, ಎಲ್ಲರೂ ಕಥೆ ಚನ್ನಾಗಿದೆ ಎಂದರು, ಆದರೆ ಯಾರೂ ಅಭಿನಯಿಸಲು ಸಿದ್ದರಿರಲಿಲ್ಲ. ಕೊನೆಗೆ ಚಿಕ್ಕಣ್ಣ ಕಥೆಯನ್ನು ತುಂಬಾ ಇಷ್ಟಪಟ್ಟು ನಟಿಸಲು ಒಪ್ಪಿದರು. ನಂತರ ಸುನಿಲ್ ನಮ್ಮ ತಂಡಕ್ಕೆ ಸೇರಿದರು’ ಎಂದು ಹೇಳಿದರು. ಈ ಚಿತ್ರದಲ್ಲಿ ಚಿಕ್ಕಣ್ಣ ರೈತನಾಗಿ ಅಭಿನಯಿಸಿದ್ದಾರೆ. ವೇದಿಕೆಯಲ್ಲಿ ಫೈಟ್ ಮಾಸ್ಟರ್ ಅರ್ಜುನ್ ರಾಜ್, ‘ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಎತ್ತಿನಗಾಡಿ ಚೇಸ್ ದೃಶ್ಯವನ್ನು ಯಾರೂ ಮಾಡಿಲ್ಲ. ಆ ದೃಷ್ಟಿಯಿಂದ ನಾವೇ ಮೊದಲಿಗರು’ ಎಂದರು.

ಇದೇ ವೇಳೆ ಸುನಿಲ್ ಅವರ ಪತ್ನಿ ಪಾತ್ರ ಮಾಡುತ್ತಿರುವ ಜಯಶ್ರೀ, ಕಲಾವಿದರಾದ ಉಗ್ರಂ ಮಂಜು, ಕುರಿ ಪ್ರತಾಪ್, ಶಿವರಾಜ್ ಕೆ.ಆರ್.ಪೇಟೆ, ಹುಲಿ ಕಾರ್ತಿಕ್ ಇವರೆಲ್ಲ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!