ಶೀಘ್ರದಲ್ಲೇ ‘ಶಾಂತಿ ಕ್ರಾಂತಿ’ ರೀ-ರಿಲೀಸ್

ರವಿಚಂದ್ರನ್‌ ಅವರ ಬೃಹತ್‌ ಬಜೆಟ್‌ನ ಸಿನಿಮಾ ʻಶಾಂತಿ ಕ್ರಾಂತಿʼ ಸಿನಿಮಾ ರೀ-ರಿಲೀಸ್‌ ಬಗ್ಗೆ  ಮಾತುಕತೆ ನಡೀತಾ ಇದೆ ಎಂದು ವಿಕ್ರಮ್‌ ರವಿಚಂದ್ರನ್‌  ಮಾಧ್ಯಮಗಳಿಗೆ ಹೇಳಿದ್ದಾರೆ.

‘ನನಗಿಂತ ನನ್ನ ಅಣ್ಣ ಮನೋರಂಜನ್‌ ಈ ಸಿನಿಮಾವನ್ನ ರೀ-ರಿಲೀಸ್‌ ಮಾಡಬೇಕು ಅಂತ ತುಂಬಾ ಆಸೆ ಪಟ್ಟರು. ನಾವು ನಮ್ಮ ಆಸ್ತಿ ಅಂತ ಹೇಳೋದು ಸಿನಿಮಾ ಮತ್ತು ಜನರ ಪ್ರೀತಿ. ಡ್ಯಾಡಿ ನಮಗೆ ಹೇಳಿದ್ದು, ‘ಇಷ್ಟೊಂದು ಜನ ಆಸೆ ಪಡ್ತಾ ಇದ್ದಾರೆ, ನೋಡಿ ಏನ್‌ ಮಾಡ್ತೀಯ?’ ಅಂತ. ರೀ-ರಿಲೀಸ್‌ ಬಗ್ಗೆ ನನಗೆ ಗ್ರೀನ್‌ ಸಿಗ್ನಲ್‌ ಬಂದಿದೆ’  ಎಂದು ತಿಳಿಸಿದ್ದಾರೆ.

“ ಈ ಸಿನಿಮಾ ರಿಲೀಸ್‌ ಆಗಿದ್ದು, ಸೆಪ್ಟೆಂಬರ್‌ 19, 1991ರಂದು. ಸಿನಿಮಾ ಬಗ್ಗೆ ತುಂಬಾ ವಿಷಯ ಆಡಿಯನ್ಸ್‌ ಮಾತನಾಡ್ತಿದ್ದಾರೆ. 10 ಕೋಟಿ ಸಿನಿಮಾ ಅಂತಿದ್ದಾರೆ. ಆದರೆ ಸಿನಿಮಾದ ಬಜೆಟ್‌ ಅದಕ್ಕಿಂತ ಜಾಸ್ತಿ ಅನ್ನೋದು ಅವರಿಗೆ ಗೊತ್ತಿಲ್ಲ.  ಅವರ ಮಗನಾಗಿರೋದಕ್ಕೆ ಹೆಮ್ಮೆ ಇದೆ. ಅವರ ಮಗ ಅನ್ನೋದಕ್ಕಿಂತ ಹೆಚ್ಚಾಗಿ ನಾನು ಅವರಿಗೆ ಬಿಗ್‌ ಫ್ಯಾನ್. ಜನರ ಒತ್ತಾಯದ ಮೇರೆಗೆ ಎಲ್ಲವೂ ಸರಿಯಾಗಿ ಆದರೆ ರೀ-ರಿಲೀಸ್‌ ಆಗುತ್ತದೆ” ಎಂದು ಹೇಳಿದ್ದಾರೆ.

ರವಿಚಂದ್ರನ್ ತುಂಬಾ  ವರ್ಷಗಳವರೆಗೆ ತಮ್ಮ ಅತ್ಯಮೂಲ್ಯ ಕ್ಷಣಗಳನ್ನು ವಿನಿಯೋಗಿಸಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಿರ್ಮಿಸಿದ ಚಿತ್ರ ‘ಶಾಂತಿ ಕ್ರಾಂತಿ’. ಆದರೆ ಆ ಸಿನಿಮಾ ಅವರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿ ಗಳಿಸಿದ್ದನ್ನೆಲ್ಲ ಕಳೆದುಕೊಳ್ಳುವಂತೆ ಮಾಡಿತ್ತು.

ಈಗ  ರವಿಚಂದ್ರನ್ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ʻಶಾಂತಿ ಕ್ರಾಂತಿʼ ಸಿನಿಮಾ  ಮತ್ತೆ ಬೆಳ್ಳಿಪರದೆಯ ಮೇಲೆ ತರುವಂತೆ   ರವಿಚಂದ್ರನ್ ಅವರಿಗೆ ಟ್ಯಾಗ್ ಮಾಡಿ ಅಭಿಯಾನ ನಡೆಸುತ್ತಿದ್ದಾರೆ. ಮೂರು ದಶಕಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಸದ್ದು ಮಾಡ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!