ಫಾರೆವರ್

ಲೂಸ್ ಮಾದ ಯೋಗಿ ಅಭಿನಯದ 51ನೇ ಚಿತ್ರ ‘ಫಾರೆವರ್’

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಲೂಸ್ ಮಾದ ಯೋಗಿ ಅಭಿನಯದ 51 ನೇ ಚಿತ್ರ “ಫಾರೆವರ್”. ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ವೆಂಕಟನಾರಾಯಣ್(ಠಾಗೋರ್ ಕೃಷ್ಣ) ನಿರ್ಮಾಣದ, “ಚಂದ್ರಿಕ” ಖ್ಯಾತಿಯ ಯೋಗೇಶ್ ಎಂ ನಿರ್ದೇಶಿಸುತ್ತಿರುವ “ಫಾರೆವರ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆರಂಭ ಫಲಕ ತೋರಿದರು. ಶಾಸಕ ಕೃಷ್ಣಪ್ಪ ಅವರು ಕ್ಯಾಮೆರಾ ಚಾಲನೆ ಮಾಡಿದರು. “ನಾಗರಹಾವು” ಚಿತ್ರದ ನಿರ್ಮಾಪಕ‌ ಸಾಜಿದ್ ಖುರೇಶಿ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಿದರು. ಗಣ್ಯರೆಲ್ಲರು ಸೇರಿ ಟ್ಯಾಂಕರ್ ಮೇಲಿದ್ದ ಶೀರ್ಷಿಕೆಯನ್ನು ಅನಾವರಣ ಮಾಡಿದ್ದು ವಿಶೇಷವಾಗಿತ್ತು. ಚಿತ್ರರಂಗ ಸಾಕಷ್ಟು ಗಣ್ಯರು ಹಾಗೂ ಸಹಸ್ರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಹಾಗೂ ಧ್ರುವ ಸರ್ಜಾ ಒಂದೇ ಸ್ಕೂಲ್ ನಲ್ಲಿ ಓದಿದವರು. ಮೆಚ್ಚಿನ ಗೆಳೆಯ ಅವರು. ಅವರು ಬಂದು ನಮ್ಮ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಖುಷಿಯಾಗಿದೆ. ಸುಮಾರು ಎರಡು ವರ್ಷಗಳ ನಂತರ ನಾನು ನಾಯಕನಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ನಡೆಯುತ್ತಿದೆ. ಬಹಳ ಅದ್ದೂರಿಯಾಗಿಯೇ ನಡೆದಿದೆ.‌ ಚಿತ್ರ ಕೂಡ ಇಷ್ಟೇ ಅದ್ದೂರಿಯಾಗಿರುತ್ತದೆ. ನಿರ್ದೇಶಕರು ಒಂದೊಳ್ಳೆ ಕಥೆ ಬರೆದಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಫಸ್ಟ್ ಲುಕ್ ಪೋಸ್ಟರ್ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಅಲ್ಲದೆ ಮತ್ತೊಂದು ಇದೆ. ಅದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇವೆ. ನಾನು ತುಂಬಾ ಬೈಕ್ ಇಷ್ಟ ಪಡುತ್ತೇನೆ. ಬೈಕ್‌ ರೈಡರ್ ಕೂಡ. ಈ ಕಥೆ ಅದಕ್ಕೆ ಹತ್ತಿರವಾಗಿರುವುದು ಮತ್ತಷ್ಟು ಇಷ್ಟವಾಯಿತು. ಬೆಂಗಳೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುವುದಾಗಿ ಹೇಳಿರುವ ನಿರ್ಮಾಪಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ ಎಂದರು ನಾಯಕ‌ ಲೂಸ್ ಮಾದ ಯೋಗಿ.

ಫಾರೆವರ್

ನಾನು ಮೂರು ವರ್ಷಗಳಲ್ಲಿ ಅತೀ ಹೆಚ್ಚು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದ್ದೇನೆ. ವಿಮಾನ ಹತ್ತಿದ ತಕ್ಷಣ ಮೊಬೈಲ್ ಪಕ್ಕಕ್ಕೆ ಇಟ್ಟು ಈ ಚಿತ್ರದ ಕಥೆ ಬರೆಯುತ್ತಿದೆ. ಪ್ರತಿಬಾರಿ ಯೋಗಿ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುವಾಗ ಈ ವರ್ಷದ ಹುಟ್ಟುಹಬ್ಬಕ್ಕೆ ಚಿತ್ರ ಆರಂಭ‌ ಮಾಡೋಣ ಅಂತ ಹೇಳುತ್ತಿದ್ದೆ. ಕಾಲ ಈಗ ಕೂಡಿ ಬಂದಿದೆ. ಇತ್ತೀಚೆಗಷ್ಟೇ ಯೋಗಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲೇ ಮುಹೂರ್ತ ನಡೆದಿರುವುದು ಖುಷಿಯಾಗಿದೆ. ನಮ್ಮ ಚಿತ್ರಕ್ಕೆ “ಯುಗ ಮರೆಯದ ಪ್ರೇಮ ಕಥೆ” ಎಂಬ ಅಡಿಬರಹವಿದೆ. ಹಾಗಾಗಿ ಇದೊಂದು ಪ್ರೇಮಕಥೆ. ಆದರೆ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ವಿಶೇಷವಾದ್ದದ್ದು ಮತ್ತೊಂದಿದೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ನಿರ್ದೇಶಕ ಯೋಗೇಶ್ ಮುನಿಸಿದ್ದಪ್ಪ ಹೇಳಿದರು.

ನಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಎಂ. ವೆಂಕಟನಾರಾಯಣ (ಟಾಗೂರ್ ಕೃಷ್ಣ).

ಒಂದು ತುಳು ಚಿತ್ರದಲ್ಲಿ ನಟಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ ಎಂದು ನಾಯಜಿ ಆಕಾಂಕ್ಷ ರಾವ್ ತಿಳಿಸಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರದ್ಯೂತನ್ ಮಾಹಿತಿ ನೀಡಿದರು. ಛಾಯಾಗ್ರಾಹಕ ಸಂಕೇತ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಾರೆವರ್

Be the first to comment

Leave a Reply

Your email address will not be published. Required fields are marked *

Translate »
error: Content is protected !!