ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘666 ಆಪರೇಷನ್ ಡ್ರೀಮ್ ಥಿಯೇಟರ್’. ಪೋಸ್ಟರ್ , ಡೈರೆಕ್ಟರ್ ಹಾಗೂ ತಾರಾಬಳಗದ ಮೂಲಕವೇ ಈ ಚಿತ್ರ ಕುತೂಹಲ ಹೆಚ್ಚಿಸಿದೆ. ಶಿವರಾಜ್ಕುಮಾರ್ ಹಾಗೂ ಧನಂಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಒರೈಯನ್ ಮಾಲ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಈ ವೇಳೆ ಶಿವರಾಜ್ ಕುಮಾರ್ ಮಾತನಾಡಿ, ಹೇಮಂತ್ ವರ್ಡರ್ ಫುಲ್ ಡೈರೆಕ್ಟರ್. ವೈಶಾಖ್ ನನ್ನ ಅಭಿಮಾನಿ. ಈಗ ಅವರು ನನ್ನ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧನಂಜಯ್ ಅವರ ಜೊತೆ ನಾನು ಮೂರನೇ ಸಿನಿಮಾ. ಪ್ರಿಯಾಂಕಾ ಅವರ ಜೊತೆ ಎರಡನೇ ಚಿತ್ರ. ಒಂದೊಳ್ಳೆ ತಂಡ. ಚರಣ್ ರಾಜ್ ಟಾಪ್ ಮ್ಯೂಸಿಕ್ ಡೈರೆಕ್ಟರ್. ನನಗೆ ಸಿನಿಮಾ ಎಂದರೆ ಪ್ರೀತಿ. ಯಾವುದನ್ನು ಬಿಡಲ್ಲ. ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಒಂದೊಳ್ಳೆ ಅನುಭವ ಕೊಟ್ಟಿದೆ. ಆ ವೇಷ ಹಾಕಿದಾಗ ಆ ಅಟಿಡ್ಯೂಡ್, ಸ್ವಾಗ್ ಎಲ್ಲಾ ಬರುತ್ತೆ. ವೈಶಾಖ್ ಸಕ್ಸಸ್ ಫುಲ್ ಪ್ರೊಡ್ಯೂಸರ್ ಆಗ್ತಾರೆ ಎಂದ ಅವರು ತಮ್ಮ ಪಾತ್ರದ ಬಗ್ಗೆಯೂ ಮಾಹಿತಿ ನೀಡಿದರು. ಬಾಂಡ್ ಸಿನಿಮಾಗಳಲ್ಲಿ ಈಜುಕೊಳ ಇರುತ್ತದೆ. ಅದರಲ್ಲಿ ಐದಾರು ಹುಡುಗಿಯರು ಇರ್ತಾರೆ. ನಡುವೆ ಬಾಂಡ್ ಇರ್ತಾರೆ. ಆದರೆ, 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ನಾನು ಆ ರೀತಿಯ ಬಾಂಡ್ ಅಲ್ಲ. ನಾನು ಈ ಚಿತ್ರದಲ್ಲಿ ಡಿಸೆಂಟ್ ಬಾಂಡ್ ಆಗಿದ್ದೇನೆ. ಎಲ್ಲರನ್ನೂ ಬಾಂಡಿಂಗ್ ಮಾಡುವ ಬಾಂಡ್ ಆಗಿದ್ದೇನೆ ಎಂದರು.
ಡಾಲಿ ಧನಂಜಯ್ ಮಾತನಾಡಿ, ವೈಶಾಖ್ ಸ್ಯಾಂಡಲ್ ವುಡ್ ಗೆ ಸ್ವಾಗತ. ಅವರು ಸಿನಿಮಾದ ಬಗ್ಗೆ ಕಲಿತು, ಜೀವಿಸಿ, ಯಾರ್ ಜೊತೆ ಕೆಲಸ ಮಾಡಬೇಕು ಎಲ್ಲವನ್ನೂ ತಿಳಿದುಕೊಂಡು ಬಂದಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ನಿರ್ಮಾಪಕ ಆಗುವ ಶಕ್ತಿ ಅವರಲ್ಲಿದೆ. ಡಿಸ್ಟಿಬ್ಯೂಟರ್ ಆಫೀಸ್ ನಲ್ಲಿ ಕುಳಿತು ಹೇಮಂತ್ ನನ್ನ ಸಿನಿಮಾ ಮಾಡಲು ಕರೆಯುತ್ತಿಲ್ಲವಲ್ಲ ಎಂದ ಒಂದು ವಾರಕ್ಕೆ ಮೀಟ್ ಮಾಡಬೇಕು ಎಂದರು. ಒಳ್ಳೆ ಟೀಂ ಸೇರಿಕೊಂಡು ಈ ಚಿತ್ರ ಮಾಡಿದ್ದೇವೆ. ಮಗು ರಚ್ಚೆ ಹಿಡಿದು ಕೆಲಸ ಮಾಡಿಸಿಕೊಳ್ಳುವ ರೀತಿ ಹೇಮಂತ್ ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರಿಂದ ತುಂಬಾ ಕಲಿತಿದ್ದೇನೆ. ಶಿವಣ್ಣ ನನಗೆ ದೊಡ್ಡ ಶಕ್ತಿ. ಇದು ಟೀಸರ್ ಅಷ್ಟೇ. ಚಿತ್ರದಲ್ಲಿ ಬಹಳ ಸರ್ ಪೈಸ್ ಇದೆ. ಇಡೀ ತಂಡ ಅದ್ಭುತವಾಗಿ ದುಡಿಸಿಕೊಂಡಿದೆ ಎಂದು ಹೇಳಿದರು.

ನಿರ್ಮಾಪಕ ವೈಶಾಖ್ ಮಾತನಾಡಿ, ನಾನು 12 ವರ್ಷದವನಿದ್ದಾಗಲೂ ನನ್ನದು ಒಂದು ಪ್ರೊಡಕ್ಷನ್ ಹೌಸ್ ಶುರು ಮಾಡಬೇಕು ಎಂದು ಕನಸು ಕಾಣುತ್ತಾ ಬಂದಿದ್ದೆ. ಆ ಪ್ರೊಡಕ್ಷನ್ ನಲ್ಲಿ ನನಗೆ ಇಷ್ಟವಾಗುವ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಆ ಕನಸು ಈಗ ನನಸಾಗಿದೆ. ಮೊದಲ ಚಿತ್ರದಲ್ಲಿಯೇ ಒಂದೊಳ್ಳೆ ತಂಡ ಸಿಕ್ಕಿರುವುದು ನನ್ನ ಅದೃಷ್ಟ. ನನ್ನ ಅಚ್ಚುಮೆಚ್ಚಿನ ನಟ ಶಿವಣ್ಣ ಜೊತೆ ಚಿತ್ರ ಮಾಡಿರುವುದು ಖುಷಿ. ನಾನು ಚಿಕ್ಕ ವಯಸ್ಸಿನಿಂದ ಅವರ ದೊಡ್ಡ ಅಭಿಮಾನಿ. ಅವರ ಪ್ರತಿ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೆ. ವೇದ ಸಿನಿಮಾ ಶೂಟಿಂಗ್ ಸಮಯದಲ್ಲಿ ನನ್ನ ಫಸ್ಟ್ ಚಿತ್ರ ನಿಮ್ಮ ಜೊತೆ ಮಾಡಬೇಕು ಎಂದು ಕೇಳಿದೆ. ಬಜೆಟ್, ಕಥೆ, ಡೈರೆಕ್ಟರ್ ಏನು ಕೇಳಲಿಲ್ಲ. ಒಳ್ಳೆ ಕಥೆ ಮಾಡಿಕೊಂಡು ಬಾ ಬೇಗ ಶುರು ಮಾಡೋಣ ಎಂದಿದ್ದರು. ಇವತ್ತಿನ ಕಾಲದಲ್ಲಿ ಏನೂ ಯೋಚನೆ ಮಾಡದೆ ಕಥೆ ಕೇಳಿ ಸಿನಿಮಾ ಮಾಡುವ ಸೂಪರ್ ಸ್ಟಾರ್ ಶಿವಣ್ಣ. ಧನಂಜಯ್ ಅವರು ಈ ಚಿತ್ರದ ಮೂಲಕ ಪರಿಚಯವದವರು. ಈ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರ ವೃತ್ತಿ ಜೀವನದ ಅತ್ಯುತ್ತಮ ನಟನೆ ಈ ಚಿತ್ರದಲ್ಲಿ ಇದೆ. ಅವರ ಟ್ಯಾಲೆಂಟ್, ಹಾರ್ಡ್ ವರ್ಕ್ ಗೆ ಈ ಚಿತ್ರ ಅವರ ವೃತ್ತಿ ಜೀವನದ ಮೈಲಿಗಲ್ಲು ಆಗಲಿ. 90 ದಿನ ಶೂಟಿಂಗ್ ನಡೆಸಿದರೆ. 100 ದಿನ ಸೆಟ್ ವರ್ಕ್ ಮಾಡಿದ್ದೇವೆ. ವಿಶ್ವಾಸ್ ಅದ್ಬುತ ಸೆಟ್ ನಿರ್ಮಿಸಿದ್ದಾರೆ. ಚರಣ್ ಮ್ಯೂಸಿಕ್, ಅದ್ವೈತ್ ಕ್ಯಾಮೆರಾ ವರ್ಕ್ ಸೂಪರ್ ಆಗಿದೆ.ಚಿತ್ರದ ಮತ್ತೊಬ್ಬ ಹೀರೋ ಹೇಮಂತ್. ಕಳೆದ ಐದು ವರ್ಷಗಳಿಂದ ಬೇರೆ ಇಂಡಸ್ಟ್ರಿಯಿಂದ ಕಾಲ್ ಬಂದರೂ ಅವರು ನನ್ನ ಜೊತೆ ನಿಂತರು ಎಂದರು.
ನಿರ್ದೇಶಕ ಹೇಮಂತ್ ಎಂ ರಾವ್ ಮಾತನಾಡಿ, ಪ್ರೊಡ್ಯೂಸರ್ ಗೆ ಎಷ್ಟು ಹುಡುಕಿದ್ದೇನೆ? ಎಷ್ಟು ಒದ್ದಾಡಿದ್ದೇನೆ ಎಂದರೆ ನನಗೆ ಗೊತ್ತು. ಹತ್ತು ವರ್ಷ ಕರೆಕ್ಟ್ ಪ್ರೊಡ್ಯೂಸರ್ ಸಿಕ್ಕಿರಲಿಲ್ಲ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಮಾಡುವಾಗ ಅಪ್ಪನ ಸಹಾಯ ತೆಗೆದುಕೊಂಡೆ. ನನ್ನ ಜೊತೆ ಇನ್ನೊಬ್ಬರು ಸಿಕ್ಕಿದರು. ಈ ಚಿತ್ರದಿಂದ ನನ್ನ ಕೆರಿಯರ್ ಕಟ್ಟುಕೊಂಡೆ. ಅಷ್ಟು ವರ್ಷ ಓಡಾಡಿದ್ದಕ್ಕೆ ಈ ರೀತಿ ಒಳ್ಳೆ ನಿರ್ಮಾಪಕರು ಸಿಕ್ಕಿದ್ದಾರೆ. ಸಿನಿಮಾ ಆರ್ಟ್, ಫೋಟೋಗ್ರಫಿ, ಮ್ಯೂಸಿಕ್ ಎಲ್ಲದರ ಮಿಶ್ರಣ. ಸಿನಿಮಾವನ್ನು ಒಬ್ಬರ ಕೈಯಲ್ಲಿ ಮಾಡಲು ಆಗುವುದಿಲ್ಲ. ಇಡೀ ಊರು ಬೇಕು. ನಮಗೆ ಆನೆಬಲ ರೀತಿ ಶಕ್ತಿ ಇರುವುದು ಶಿವಣ್ಣ. ಅವರ ನೋಡಿರುವ ಸಕ್ಸಸ್, ಮಾಡದ ಚಿತ್ರಗಳು ಇಲ್ಲ. ನಮ್ಮ ಸೆಟ್ ಗೆ ಬಂದಾಗ ಅವರು ನಡೆದುಕೊಳ್ಳುವ ರೀತಿ ನಮ್ಮ ಕೆಲಸದ ಮೇಲಿನ ಆಸಕ್ತಿ ಹೆಚ್ಚು ಮಾಡುತ್ತದೆ. ಧನು, ಅದಿತಿ, ಪ್ರಿಯಾಂಕಾ ಅದ್ಭುತ ಕಲಾವಿದರು. ತುಂಬಾ ಜನ ಹೊಸಬರು ಚಿತ್ರದಲ್ಲಿ ಇದ್ದಾರೆ. ನಮ್ಮಚಿತ್ರದ ಸಣ್ಣ ಭಾಗವನ್ನು ಬಿಟ್ಟಿದ್ದೇವೆ ಅದನ್ನು ವೀಕ್ಷಕರು ಮುಂದೆ neevu ತೆಗೆದುಕೊಂಡು ಹೋಗಬೇಕು ಎಂದರು.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಏಜೆಂಟ್ ಪ್ರಕಾಶ್ ಎಂಬ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಏಜೆಂಟ್ ಶಂಕರ್ ಪಾತ್ರದಲ್ಲಿ ಧನಂಜಯ್ ಬಣ್ಣ ಹಚ್ಚಿದ್ದಾರೆ. ಪ್ರಿಯಾಂಕ ಮೋಹನ್, ಅದಿತಿ ಬಾಲನ್, ಸುಖ್ವಿಂದರ್ ಸಿಂಗ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ‘ಸಪ್ತಸಾಗರದಾಚೆ ಎಲ್ಲೊ’ ಸರಣಿ ಸಿನಿಮಾಗಳ ಬಳಿಕ ಹೇಮಂತ್ ಎಂ ರಾವ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಕುತೂಹಲ ಮೂಡಿದೆ. ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕಿದೆ. ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.






Be the first to comment