ಕರ್ನಾಟಕದ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳ ಸುತ್ತ ಈಗಾಗಲೇ ಹಲವು ಸಿನಿಮಾಗಳು ತೆರೆಗೆ ಬಂದು ಯಶಸ್ವಿಯಾಗಿವೆ. ಈಗ ಕರಾವಳಿ ಸೊಗಡಿನ ಅಂಥದ್ದೇ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಕ್ಷೇತ್ರಪಾಲ’.
ಕರಾವಳಿಯ ಪ್ರತೀತಿಯಂತೆ, ಪ್ರತಿ ಕ್ಷೇತ್ರದಲ್ಲೂ ಆ ಕ್ಷೇತ್ರದ ರಕ್ಷಣೆಗೆ ‘ಕ್ಷೇತ್ರಪಾಲ’ನಾಗಿ ದೈವವೊಂದು ಇರುತ್ತದೆ. ಆಯಾಯ ಕ್ಷೇತ್ರದಲ್ಲಿ ನ್ಯಾಯ, ನೀತಿ, ಧರ್ಮವನ್ನು ಪಾಲನೆ-ಪೋಷಣೆ ಮಾಡಿ ಜನರನ್ನು ‘ಕ್ಷೇತ್ರಪಾಲ’ ಕಾಪಾಡುತ್ತಾನೆ ಎಂಬುದು ಕರಾವಳಿ ಜನರ ಬಲವಾದ ನಂಬಿಕೆ. ಅಂಥದ್ದೇ ಒಂದು ನಂಬಿಕೆಯ ಕಥೆಯನ್ನು ಇಟ್ಟುಕೊಂಡು ‘ಕ್ಷೇತ್ರಪಾಲ’ ಚಿತ್ರ ತೆರೆಗೆ ಬರುತ್ತಿದೆ.
ಇನ್ನು ಈ ಸಿನಿಮಾದ ಹೆಸರು ‘ಕ್ಷೇತ್ರಪಾಲ’ ಅಂತಿದ್ದರೂ, ಇದು ಕೇವಲ ಕರಾವಳಿಯ ಯಾವುದೇ ದೈವದ ಕುರಿತಾದ ಸಿನಿಮಾವಲ್ಲ. ಆದರೆ, ಧಾರ್ಮಿಕ ಹಿನ್ನೆಲೆಯಲ್ಲಿ ಊರನ್ನು ರಕ್ಷಣೆ ಮಾಡುವ ವ್ಯಕ್ತಿಯೊಬ್ಬನ ಕಥೆ ಈ ಸಿನಿಮಾದಲ್ಲಿ ಇರಲಿದೆಯಂತೆ. ನ್ಯಾಯ, ನೀತಿ, ಧರ್ಮ, ನಂಬಿಕೆ, ಜೀವನ, ಹೋರಾಟ ಎಲ್ಲವೂ ‘ಕ್ಷೇತ್ರಪಾಲ’ ಸಿನಿಮಾದಲ್ಲಿ ಕಾಣಬಹುದು ಎಂಬುದು ಚಿತ್ರತಂಡದ ಒಕ್ಕೊರಲ ಮಾತು.

ಈಗಾಗಲೇ ಸದ್ದಿಲ್ಲದೆ ‘ಕ್ಷೇತ್ರಪಾಲ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.
ಸುಮಾರು ಒಂದೂವರೆ ದಶಕಗಳ ಕಾಲ ಮಾಧ್ಯಮ ಲೋಕದಲ್ಲಿ ಕೆಲಸ ಮಾಡಿದ ಅನುಭವವಿರುವ ಜಗದೀಶ್ ಮಂಜಣ್ಣ ‘ಕ್ಷೇತ್ರಪಾಲ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಕೆಲ ಸಿನಿಮಾಗಳಲ್ಲಿ ಸಹ ನಟನಾಗಿ ಕಾಣಿಸಿಕೊಂಡಿರುವ ರಾಘವ ಪೂಜಾರಿ ‘ಕ್ಷೇತ್ರಪಾಲ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಬಲರಾಜ್ ವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ಅದ್ವಿಕಾ ಶೆಟ್ಟಿ, ರಾಘು ರಾಮನಕೊಪ್ಪ, ಗೌತಮಿ ಗೌಡ, ನಮಿತಾ ಕಿರಣ್ ಮೊದಲಾದ ಕಲಾವಿದರು ‘ಕ್ಷೇತ್ರಪಾಲ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕನ್ನಡಪರ ಹೋರಾಟಗಾರ ನಿಂಗೇಗೌಡ, ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್ನಾರ್ಕೆ ವಿಶ್ವನಾಥ್, ನಟ ರಾಘು ರಾಮನಕೊಪ್ಪ ಮೊದಲಾದ ಗಣ್ಯರ ಸಮ್ಮುಖದಲ್ಲಿ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಬಿಡುಗಡೆಯಾಯಿತು.
ಇದೇ ವೇಳೆ ಮಾತನಾಡಿದ ‘ಕ್ಷೇತ್ರಪಾಲ’ನ ನಿರ್ದೇಶಕ ಜಗದೀಶ್ ಮಂಜಣ್ಣ, ‘ಇದೊಂದು ಕರಾವಳಿ ಸೊಗಡಿನ ಕಥೆಯ ಸಿನಿಮಾ. ಇದರಲ್ಲಿ ಸಸ್ಪೆನ್ಸ್, ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಥರದ ಎಂಟರ್ಟೈನ್ಮೆಂಟ್ ಅಂಶಗಳಿವೆ. ಎರಡು ಎಳೆಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಕರಾವಳಿಯ ಸಂಪ್ರದಾಯ, ಸೌಂದರ್ಯದ ಜೊತೆಗೆ ಊಹಿಸಲಾಗದ ರೋಚಕ ಅಂಶಗಳು ಈ ಸಿನಿಮಾದ ಹೈಲೈಟ್ಸ್. ಆದಷ್ಟು ಬೇಗ ಹೊಸರೂಪದಲ್ಲಿ ‘ಕ್ಷೇತ್ರಪಾಲ’ನನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂದರು.
‘ಕ್ಷೇತ್ರಪಾಲ’ನ ಬಗ್ಗೆ ಮಾತನಾಡಿದ ಕುಂದಾಪುರ ಮೂಲದ ನಾಯಕ ನಟ ರಾಘವ ಪೂಜಾರಿ, ‘ಈಗಾಗಲೇ ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಈಗ ಕರಾವಳಿಯ ಕಥೆಯೊಂದರ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ. ನಮ್ಮ ಊರಿನ ಕಥೆಯೊಂದನ್ನು ಈ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರಲು ಖುಷಿಯಾಗುತ್ತಿದೆ. ಇದರಲ್ಲಿ ನಮ್ಮ ಆಚರಣೆ, ಸಂಸ್ಕೃತಿಯ ಜೊತೆಗೆ ಒಂದು ಸಂದೇಶ ಕೂಡ ಇದೆ. ಸದ್ಯ ಸಿನಿಮಾದ ಕೆಲಸಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ’ ಎಂದರು.
‘ಮುತ್ತಮ್ಮ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ಕ್ಷೇತ್ರಪಾಲ’ ಚಿತ್ರಕ್ಕೆ ಕೆ. ನವೀನ್ ಸುವರ್ಣ ಛಾಯಾಗ್ರಣ, ಗಿರೀಶ್ ಕುಮಾರ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಯತೀಶ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಉಡುಪಿ, ಕುಂದಾಪುರ ಸುತ್ತಮುತ್ತ ‘ಕ್ಷೇತ್ರಪಾಲ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಸುಮಾರು 10 ದಿನಗಳ ಕಾಲ ‘ಕ್ಷೇತ್ರಪಾಲ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಜುಲೈ ಅಂತ್ಯದಿಂದ ಸುಮಾರು 40 ದಿನಗಳ ಕಾಲ ಎರಡನೇ ಹಂತದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ.





ತುಂಬಾ ಧನ್ಯವಾದಗಳು 🙏