ಕಿರುನಗೆ

ಶೀರ್ಷಿಕೆ ಅನಾವರಣ ಮಾಡಿ ‘ಕಿರುನಗೆ’ ಬೀರಿದ ಚಿತ್ರತಂಡ

ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ ಅವರು ನಿರ್ಮಿಸಿರುವ ಹಾಗೂ ಅಶೋಕ್ ಕಡಬ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಚಿತ್ರಕ್ಕೆ “ಕಿರುನಗೆ” ಎಂದು ಹೆಸರಿಡಲಾಗಿದೆ. ಡಾ||ರಾಜಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು ಹಾಗೂ ಅಳಿಯ ಎಸ್ ಎ ಗೋವಿಂದರಾಜು ಅವರು ಶೀರ್ಷಿಕೆ ಅನಾವರಣ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್.ಕೆ ವಿಶ್ವನಾಥ್, ನಟ ಷಣ್ಮುಖ ಹಾಗೂ ಯುವ ಕಾಂಗ್ರೆಸ್ ಮುಖಂಡ ಅಶೋಕ್ ಭೀಮಾನಾಯಕ್ ಅವರು ಸಹ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಕಿರುನಗೆ

“ಕಿರುನಗೆ” ನನ್ನ ನಿರ್ದೇಶನದ ಆರನೇ ಚಿತ್ರ. ಇದೊಂದು ಲವ್ ಜಾನರ್ ನ ಚಿತ್ರ. ಆದರೆ ತಂದೆ – ತಾಯಿಗಾಗಿ ಮಕ್ಕಳೇ ಪ್ರೀತಿಯನ್ನು ತ್ಯಾಗ ಮಾಡುವ ಕಥಾಹಂದರ ಹೊಂದಿರುವ ಚಿತ್ರವೂ ಹೌದು. ಚಿತ್ರದ ಮೊದಲರ್ಧದ ಕಥೆ ಮದುವೆಮನೆಯಲ್ಲೇ ನಡೆಯುತ್ತದೆ. ನಿರ್ಮಾಪಕಿ ಲತಾಶ್ರೀ ಅವರೆ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಬೆಂಗಳೂರು, ಉಡುಪಿ, ವಿಜಾಪುರ, ಮುಂಬೈ ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ. ನೂತನ ಪ್ರತಿಭೆಗಳಾದ ವಿಜಯ್ ರಾಜ್ ಹಾಗೂ ಖುಷ್ಬು ಈ ಚಿತ್ರದ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟಿ ಶೃತಿ, ಖ್ಯಾತ ನಟ ಅನುಪಮ್ ಖೇರ್ ಸಹೋದರ ರಾಜು ಖೇರ್, ಸಂಗೀತ, ಮೂಗು ಸುರೇಶ್, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಶ್ರೀಶ ಅವರು ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್ ರೆಹಮಾನ್ ಅವರ ಬಳಿ ಕಾರ್ಯ ನಿರ್ವಹಿಸಿರುವ ಸುಕೃತ್ ಸಂಗೀತ ನಿರ್ದೇಶನ ಹಾಗೂ ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿರುವ ಈ ಚಿತ್ರದ ಹಾಡುಗಳನ್ನು ನಾಗಾರ್ಜುನ ಶರ್ಮ ಬರೆದಿದ್ದಾರೆ ಎಂದು ನಿರ್ದೇಶಕ ಅಶೋಕ್ ಕಡಬ “ಕಿರುನಗೆ” ಕುರಿತು ಮಾಹಿತಿ ನೀಡಿದರು.

ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಅವರ ಆಶೀರ್ವಾದ ಹಾಗೂ ನನ್ನ ತಂದೆ ಮಾಜಿ ಶಾಸಕರಾದ ದೇವಾನಂದ್ ಚವ್ಹಾಣ್ ಅವರ ಸಹಕಾರದಿಂದ ಈ ಚಿತ್ರ ನಿರ್ಮಾಣವಾಗಿದೆ. ನಿರ್ದೇಶಕರು ಹೇಳಿದ ಹಾಗೆ ಇದೊಂದು ಲವ್ ಜಾನರ್ ನ ಚಿತ್ರವಾಗಿದರೂ, ಪ್ರೀತಿಯನ್ನು ನಮ್ಮ ಚಿತ್ರದಲ್ಲಿ ತೋರಿಸಿರುವ ರೀತಿಯೇ ಬೇರೆ. ಹೆಣ್ಣುಮಗಳೊಬ್ಬಳ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. ಹಾಗಂತ ಇದು ಮಹಿಳಾ ಪ್ರಧಾನ ಚಿತ್ರವಲ್ಲ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಉತ್ತಮ ಮನೋರಂಜನೆಯುಳ್ಳ ಚಿತ್ರ ಎಂದು ನಿರ್ಮಾಪಕಿ ಹಾಗೂ ಕಥೆ ಬರೆದಿರುವ ಲತಾಶ್ರೀ ಡಿ.ಸಿ ತಿಳಿಸಿದರು.

ಕಿರುನಗೆ

ಚಿತ್ರದ ಕಥೆ ಬಹಳ ಚಿನ್ನಾಗಿದೆ. ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನನಗೆ ನಾಯಕನಾಗಿ ಇದು ಮೊದಲ ಚಿತ್ರ ಎಂದು ನಾಯಕ ವಿಜಯ್ ರಾಜ್ ಹೇಳಿದರು.

ಅವಕಾಶ ನೀಡಿದವರಿಗೆ ಧನ್ಯವಾದ ತಿಳಿಸಿ ತಮ್ಮ ಪಾತ್ರದ ಬಗ್ಗೆ ನಾಯಕಿ ಖುಷ್ಬು ಹಾಗೂ ಪ್ರಮುಖಪಾತ್ರಧಾರಿ ಶ್ರೀಶ ಮಾಹಿತಿ ನೀಡಿದರು.

ಸಂಗೀತ ನಿರ್ದೇಶಕ ಸುಕೃತ್, ಛಾಯಾಗ್ರಾಹಕ ಸಿದ್ದು ಕಂಚನಹಳ್ಳಿ, ಹಾಡುಗಳನ್ನು ಬರೆದಿರುವ ನಾಗಾರ್ಜುನ ಶರ್ಮ ಹಾಗೂ ಕಲಾವಿದರಾದ ಸಂಗೀತ, ಮೂಗು ಸುರೇಶ್ ಮುಂತಾದವರು “ಕಿರುನಗೆ” ಯ ಕುರಿತು ‌ಮಾತನಾಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!