ಆಲ್ಬಮ್

ವಕೀಲರ ವೃತ್ತಿ ಬದುಕಿಗೆ ಗೌರವ ಸಲ್ಲಿಸುವ ಆಲ್ಬಮ್ ಬಿಡುಗಡೆ

ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ನ್ಯಾಯಾಂಗ ವ್ಯವಸ್ಥೆಯ ಪಾತ್ರ ದೊಡ್ಡದು. ಆ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತು, ಸತ್ಯ ಮತ್ತು ನ್ಯಾಯಕ್ಕಾಗಿ ಹಗಲಿರುಳು ಶ್ರಮಿಸುವ ವಕೀಲರ ವೃತ್ತಿ ಬದುಕನ್ನು ಆಧರಿಸಿದ ವಿಶೇಷ ಆಲ್ಬಮ್ ಗೀತೆ “ನ್ಯಾಯ ಅನ್ಯಾಯ” ಇಂದು (ಫೆಬ್ರವರಿ 23) ರಿಲೀಸ್‌ ಆಗಿದೆ. ಭಾರತೀಯ ಸಂಗೀತ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ವಕೀಲರ ವೃತ್ತಿಗೆ ಅರ್ಪಿತವಾದ ಗೀತೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಒಬ್ಬ ವಕೀಲನು ಕೇವಲ ಕಪ್ಪು ಕೋಟು ಧರಿಸಿದ ವ್ಯಕ್ತಿಯಲ್ಲ; ಆತ ತನ್ನ ಮೇಲೆ ನಂಬಿಕೆ ಇಟ್ಟ ಕಕ್ಷಿದಾರರ ಪಾಲಿನ ಆಶಾಕಿರಣ. ಕೋರ್ಟ್ ಮೆಟ್ಟಿಲುಗಳಲ್ಲಿ, ಕಡತಗಳ ಮಧ್ಯೆ ತನ್ನ ವೈಯಕ್ತಿಕ ಬದುಕನ್ನು ಮರೆತು, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಅಗ್ರಸ್ಥಾನದಲ್ಲಿ ನಿಂತು ಅಹೋರಾತ್ರಿ ಹೋರಾಡುತ್ತಾನೆ. ವಕೀಲರ ಈ ನಿಸ್ವಾರ್ಥ ಸೇವೆ, ಧೈರ್ಯ ಮತ್ತು ತ್ಯಾಗವನ್ನು ಈ ಹಾಡಿನ ಮೂಲಕ ಸಮಾಜಕ್ಕೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.

ಕರ್ನಾಟಕ ರಾಜ್ಯದ ಹೆಸರಾಂತ ವಕೀಲರಾದ ಶ್ರೀ ನಾರಾಯಣಸ್ವಾಮಿ. ಜಿ ಅವರು ಈ ವಿಶಿಷ್ಟ ಪರಿಕಲ್ಪನೆಯನ್ನು ಜನರೆದುರು ತರುತ್ತಿದ್ದಾರೆ. ವೃತ್ತಿ ಬಾಂಧವರ ಮೇಲಿರುವ ಗೌರವದಿಂದ ಅವರು ಈ ಸಾಹಸಕ್ಕೆ ಕೈಹಾಕಿದ್ದಾರೆ. ಅಷ್ಟೇ ಅಲ್ಲೀ ಹಾಡಿನಲ್ಲಿಯೂ ನಾರಾಯಣಸ್ವಾಮಿ ಅವರು ಕಾಣಿಸಿಕೊಂಡಿದ್ದಾರೆ.

ಜನಪ್ರಿಯ ಸಂಗೀತ ಸಂಯೋಜಕಿ ಮಾನಸ ಹೊಳ್ಳ ಅವರು ಈ ಹಾಡಿಗೆ ಶಕ್ತಿ ತುಂಬಿದ್ದಾರೆ. ಅಂದರೆ, ಮ್ಯೂಸಿಕ್‌ ಕಂಪೋಸಿಂಗ್‌ನ ಜವಾಬ್ದಾರಿ ಅವರದ್ದು. ನ್ಯಾಯದ ಗಾಂಭೀರ್ಯ ಮತ್ತು ಹೋರಾಟದ ಕಿಚ್ಚು ಎರಡನ್ನೂ ಒಳಗೊಂಡಂತೆ ಸಂಗೀತ ಸಂಯೋಜಿಸಲಾಗಿದೆ. ಈ ಹಾಡಿಗೆ ಸಾಹಿತ್ಯ ಬರೆಯುವುದರ ಜೊತೆಗೆ ಧ್ವನಿ ನೀಡಿದ್ದಾರೆ ಕರಿಬಸವ ತಡಕಲ್. ಅನುಭವಿ ನಿರ್ದೇಶಕ ಜೀವನ್ ಹಳ್ಳಿಕಾರ್ ಅವರು ಈ ಹಾಡಿಗೆ ಆಕ್ಷನ್ ಕಟ್ ಹೇಳಿದ್ದು, ವಕೀಲರ ವೃತ್ತಿ ಬದುಕಿನ ಸವಾಲುಗಳನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ನ್ಯಾಯ, ನೀತಿ ಮತ್ತು ಕಾನೂನಿನ ಮಹತ್ವವನ್ನು ಕೇವಲ ಒಂದು ಗೀತೆಯಲ್ಲಿ ಸಾರುವ ಪ್ರಯತ್ನ ಇದಾಗಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ವಕೀಲರು ಪಡುವ ಶ್ರಮದ ಜೊತೆಗೆ, ಕಾನೂನು ಪಾಲನೆಯ ಅನಿವಾರ್ಯತೆಯನ್ನು ಈ ಹಾಡು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲಿದೆ.

“ವಕೀಲರ ವೃತ್ತಿಜೀವನವು ಒತ್ತಡ ಮತ್ತು ಸವಾಲುಗಳಿಂದ ಕೂಡಿದ್ದರೂ, ನ್ಯಾಯ ಸಿಕ್ಕಾಗ ಆಗುವ ಸಂತೋಷ ದೊಡ್ಡದು. ನಮ್ಮ ಸಮುದಾಯದ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡಲು ಮತ್ತು ಸಾರ್ವಜನಿಕರಲ್ಲಿ ವಕೀಲರ ಬಗ್ಗೆ ಗೌರವ ಹೆಚ್ಚಿಸಲು ಈ ‘ನ್ಯಾಯ ಅನ್ಯಾಯ’ ಆಲ್ಬಮ್ ಹೊರತರುತ್ತಿದ್ದೇವೆ.” ಎಂಬುದು ಶ್ರೀ ನಾರಾಯಣಸ್ವಾಮಿ. ಜಿ ಅವರ ಮಾತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!