ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ‘ವಿಕಲ್ಪ’ ಬಿಡುಗಡೆಗೆ ಸಜ್ಜಾಗಿದೆ.
ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾವನ್ನು ಸೆನ್ಸಾರ್ ಮಂಡಳಿಗೆ ಸಲ್ಲಿಸಲಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ.
ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವರ್ಚ್ಯುವಲ್ ಆಗಿ ‘ವಿಕಲ್ಪ’ ಟೀಸರ್ ಅನಾವರಣಗೊಳಿಸಿದರು. ಲೇಖಕ ಜೋಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದರು.
ಪೃಥ್ವಿರಾಜ್ ಪಾಟೀಲ್ ಅವರು ನಿರ್ದೇಶನದ ಜೊತೆಗೆ ಸಿನಿಮಾದಲ್ಲಿ ನಾಯಕ ಪಾತ್ರವನ್ನೂ ನಿರ್ವಹಿಸಿದ್ದಾರೆ. ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಸಂಧ್ಯಾ ವಿನಾಯಕ್, ಪೂಜಾ ಬಚ್ಚ್ ಕಲಾಬಳಗ ಚಿತ್ರದಲ್ಲಿದೆ. ಹರಿಣಿ ಶ್ರೀಕಾಂತ್ ಅವರು ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾನವನ ಮನಸ್ಸಿನ ಒಳಗಿನ ಸುಪ್ತ ಭಾವನೆಗಳು ಮತ್ತು ಮಾನಸಿಕ ತಲ್ಲಣಗಳನ್ನು ತೆರೆಮೇಲೆ ತರುವ ಪ್ರಯತ್ನ ಈ ಸಿನಿಮಾದಲ್ಲಿದೆ. ಹವ್ಯಾಸಿ ರಂಗಭೂಮಿಯ ಅನುಭವ ಹೊಂದಿರುವ ಪೃಥ್ವಿರಾಜ್ ಪಾಟೀಲ್ ಅವರ ಪರಿಕಲ್ಪನೆಯಲ್ಲಿ ಸಿನಿಮಾ ಮೂಡಿ ಬಂದಿದೆ.
‘ಸುರೂಸ್ ಟಾಕೀಸ್’ ಮೂಲಕ ಇಂದಿರಾ ಶಿವಸ್ವಾಮಿ ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ. ‘ವಿಕಲ್ಪ’ ಸಿನಿಮಾಗೆ ಅಭಿರಾಮ್ ಗೌಡ ಛಾಯಾಗ್ರಹಣ, ಸುರೇಶ್ ಆರುಮುಗಮ್ ಸಂಕಲನ, ಸಂವತ್ಸರ ಸಂಗೀತ ನೀಡಿದ್ದಾರೆ.





Be the first to comment