ಧರ್ಮೇಂದ್ರ ನಿಧನದ ಸುಳ್ಳು ಸುದ್ದಿಗೆ ಆಕ್ರೋಶ

ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಪ್ರಸಾರದ ಬಗ್ಗೆ ಪತ್ನಿ,  ಸಂಸದೆ ಹೇಮಾ ಮಾಲಿನಿ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಮಾಧ್ಯಮಗಳು ಸುಳ್ಳು ಸುದ್ದಿ ಹೇಗೆ ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬಕ್ಕೆ ಮತ್ತು ಅದರ ಗೌಪ್ಯತೆಯ ಅಗತ್ಯಕ್ಕೆ ಗೌರವ ನೀಡಿ ಎಂದು ಹೇಮಾ ಮಾಲಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನನ್ನ ತಂದೆ ಧರ್ಮೇಂದ್ರ ಆರೋಗ್ಯವಾಗಿದ್ದಾರೆ. ಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ.” ಎಂದು ನಟಿ ಇಶಾ ಡಿಯೋಲ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಹೇಮಾ ಮಾಲಿನಿಯ ಟ್ವೀಟ್ ನಂತರ ಅಭಿಮಾನಿಗಳು ಮತ್ತು ಸಿನಿ ತಾರೆಯರು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾವೇದ್ ಅಖ್ತರ್ ಸೇರಿದಂತೆ ಕೆಲ ಬಾಲಿವುಡ್ ತಾರೆಯರು ಕೂಡ ಧರ್ಮೇಂದ್ರ ನಿಧನದ ಸುಳ್ಳು ವರದಿಗೆ ತುತ್ತಾಗಿ ತಾವು ಶೋಕ ಸಂದೇಶ ಹಂಚಿಕೊಂಡಿದ್ದರು. ನಂತರ ವಿಷಯ ತಿಳಿದುಕೊಂಡು ತಮ್ಮ ಟ್ವೀಟ್‌ಗಳನ್ನು ಅಳಿಸಿ ಸ್ಪಷ್ಟನೆ ನೀಡಿದ್ದಾರೆ.

ಧರ್ಮೇಂದ್ರ ಅವರ ಪುತ್ರರಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಪುತ್ರಿಯರಾದ ಇಶಾ ಡಿಯೋಲ್, ಅಹಾನಾ ಡಿಯೋಲ್,  ಪತ್ನಿ ಹೇಮಾ ಮಾಲಿನಿ ಆಸ್ಪತ್ರೆಗೆ ಆಗಮಿಸಿ ಅವರ ಆರೈಕೆಯಲ್ಲಿ ತೊಡಗಿದ್ದಾರೆ.

ಧರ್ಮೇಂದ್ರ  ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ವೆಂಟಿಲೇಟರ್ ಸಹಾಯದೊಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!