ಕನ್ನಡ ಚಿತ್ರರಂಗದ ಹಿರಿಯ ನಟ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ನಿಂದಾಗಿ ನಿಧನರಾಗಿದ್ದಾರೆ.
ಹರೀಶ್ ರಾಯ್ ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗೆ ಕೆಜಿಎಫ್ ಸಿನಿಮಾ ಹೀರೋ ಯಶ್ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಹಸ್ತ ಚಾಚಿದ್ದರು. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹರೀಶ್ ರಾಯ್ ವಿಧಿವಶರಾಗಿದ್ದಾರೆ.
ಉಡುಪಿ ರಥ ಬೀದಿಯಲ್ಲಿ ಸ್ವಂತ ಚಿನ್ನದ ಜುವೆಲ್ಲರಿ ಹೊಂದಿದ್ದ ಹರೀಶ್ ರಾಯ್ ಅವರಿಗೆ ಸಿನಿಮಾದಲ್ಲಿ ಅಭಿನಯಿಸುವ ಗೀಳಿತ್ತು. ʻಓಂʼ ಸಿನಿಮಾದಲ್ಲಿ ಡಾನ್ ಪಾತ್ರದ ಮೂಲಕ ಖ್ಯಾತಿ ಪಡೆದರು. ಬಳಿಕ ತನ್ನ ಜ್ಯುವೆಲ್ಲರಿಯನ್ನು ಅಣ್ಣನಿಗೆ ಬಿಟ್ಟುಕೊಟ್ಟು ಚಿತ್ರರಂಗಕ್ಕೆ ಧುಮುಕಿದರು. 90ರ ದಶಕದಿಂದ ಸಕ್ರಿಯರಾಗಿದ್ದ ಅವರು ಓಂ, ಕೆಜಿಎಫ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದರು.
ರಾಜ್ ಬಹದ್ದೂರ್, ಜೋಡಿ ಹಕ್ಕಿ, ಸಂಜು ವೆಡ್ಸ್ ಗೀತಾ, ನನ್ನ ಕನಸಿನ ಹೂವೆ,ಮೀಂದುಮ್ ಒರು ಕಾದಲ್ ಕಧೈ, ತಾಯವ್ವ, ಅಂಡರ್ ವರ್ಲ್ಡ್, ನಲ್ಲ, ಸ್ವಯಂವರ, ಭೂಗತ ಸೇರಿದಂತೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ʻಕೆಜಿಎಫ್ʼ ಸರಣಿಯಲ್ಲಿ ʻಚಾಚಾʼ ಆಗಿ ಪ್ರಸಿದ್ದರಾದರು.
ಥೈರಾಯ್ಡ್ ಕ್ಯಾನ್ಸರ್ 4ನೇ ಹಂತದಲ್ಲಿ ಹೊಟ್ಟೆಗೆ ವ್ಯಾಪಿಸಿದಾಗ ಚಿಕಿತ್ಸೆಗೆ ಸುಮಾರು 70 ಲಕ್ಷಕ್ಕೂ ಹೆಚ್ಚು ರೂ.ಗಳ ಅಗತ್ಯ ಇತ್ತು. ಧ್ರುವ ಸರ್ಜಾ ಅವರು 11 ಲಕ್ಷ ರೂ.ಗಳ ಚೆಕ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗ ಸೇರಿದಂತೆ ಇನ್ನು ಹಲವಾರು ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು.
ಹರೀಶ್ ರಾಯ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.





Be the first to comment