21 ವರ್ಷದ ಕನ್ನಡತಿ ಕರೆನ್ ಕ್ಷಿತಿ ಸುವರ್ಣ ಇದೀಗ ʻಸೆಪ್ಟೆಂಬರ್ 21ʼ ಹೆಸರಿನ ಬಾಲಿವುಡ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ನರ್ಸ್ವೊಬ್ಬಳ ನಡುವಿನ ಕಥೆಯನ್ನು ಹೊಂದಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಪತ್ರಕರ್ತ, ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು ಈ ಹಿಂದೆ “ಹೈಡ್ ಅಂಡ್ ಸೀಕ್” ಅನ್ನೋ ಕಿರು ಚಿತ್ರವನ್ನು ನಿರ್ದೇಶಿಸಿದ್ದೆ. ಈ ಕಿರು ಚಿತ್ರ ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡಿತ್ತು. ಈಗ “ಸೆಪ್ಟೆಂಬರ್ 21” ಚಿತ್ರವನ್ನು ನಿರ್ದೇಶಿಸಿತ್ತಿದ್ದೇನೆ. ಈ ಕಥೆಯನ್ನು ಪಿ.ರಾಜಶೇಖರ್ ಅವರು ಮಲಯಾಳಂ ನಲ್ಲಿ ಬರೆದಿದ್ದಾರೆ. ಆಲ್ಝೈಮರ್ ರೋಗದ ಸುತ್ತಲ್ಲಿನ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಪ್ರಿಯಾಂಕ ಉಪೇಂದ್ರ, ಪ್ರವೀಣ್ ಕುಮಾರ್ ಸಿಂಗ್ ಸಿಸೋಡಿಯಾ, ಜರೀನಾ ವಹಾಬ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ತಿಳಿಸಿದರು.
ನನಗೆ ಬಹಳ ಖುಷಿಯಾಗಿದೆ. ಏಕೆಂದರೆ ಇದೇ ಮೊದಲ ಬಾರಿಗೆ ಕಿರಿಯ ವಯಸ್ಸಿನ ನಿರ್ದೇಶಕಿಯ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಆಲ್ಝೈಮರ್ ರೋಗದಿಂದ ಬಳಲುತ್ತಿರುವ ರೋಗಿಯನ್ನು ಶುಶ್ರೂಷೆ ಮಾಡುವ ಕೇರ್ ಟೇಕರ್ ಪಾತ್ರವನ್ನು ನಿರ್ವಹಿಸಿಸುತ್ತಿದ್ದೇನೆ. ಕಮಲಾ ನನ್ನ ಪಾತ್ರದ ಹೆಸರು. ನನ್ನ ತಂದೆ ಉತ್ತರ ಪ್ರದೇಶದವರು. ಹಾಗಾಗಿ ನನಗೆ ಹಿಂದಿ ಮಾತನಾಡಲು ಹಾಗೂ ಓದಲು ಬರುತ್ತದೆ. ಚಿತ್ರಕ್ಕೆ ಚಾಲನೆ ನೀಡಿದ ಇಂದ್ರಜಿತ್ ಅವರಿಗೆ ಧನ್ಯವಾದ ಎಂದರು ನಟಿ ಪ್ರಿಯಾಂಕ ಉಪೇಂದ್ರ.
ಈ ಚಿತ್ರದ ಕಥೆ ಚೆನ್ನಾಗಿದೆ. ಖಿನ್ನತೆಯಿಂದ ಬಳಲುತ್ತಿರುವ ಹಾಗೂ ಸ್ಮರಣಾಶಕ್ತಿ ಕಳೆದುಕೊಂಡಿರುವ 60 ವರ್ಷ ವಯಸ್ಸಿನ ರೋಗಿಯ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ನಟ ಪ್ರವೀಣ್ ಸಿಂಗ್ ಸಿಸೋಡಿಯಾ ಹೇಳಿದರು.
ಕನ್ನಡದ ಸಂಗೀತ ನಿರ್ದೇಶಕ ವಿನಯ್ ಚಂದ್ರ, ಛಾಯಾಗ್ರಾಹಕ ಅನಿಲ್ ಕುಮಾರ್ ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು ಚಿತ್ರದ ಕುರಿತು ಮಾತನಾಡಿದರು.
“ಸೆಪ್ಟೆಂಬರ್ 21” ಚಿತ್ರವನ್ನು ಬೆಲ್ಜಿಯಂ ಮೂಲದ ನಿರ್ಮಾಣ ಸಂಸ್ಥೆ ಜಂಟಿ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿದೆ. ರಿಲಯನ್ಸ್ ಎಂಟರ್ಟೈನ್ಮೆಂಟ್ನಲ್ಲಿ ಮಾರ್ಕೆಟಿಂಗ್ ಉಪಾಧ್ಯಕ್ಷ ಅಮಿತ್ ಅವಸ್ಥಿ ಮತ್ತು “ಫಾಕ್ಸ್ ಆನ್ ಸ್ಟೇಜ್”ನ ಫ್ರೆಡ್ರಿಕ್ ಡಿ ವೋಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Be the first to comment