ಮತ್ತೊಂದು ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ ಆಗಿದೆ.
ದರ್ಶನ್ ತಮ್ಮ ಮೈಸೂರು ಫಾರಂ ಹೌಸ್ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದರು. ಈ ಬಗ್ಗೆ ಹಿಂದೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಟಿ. ನರಸೀಪುರ ನ್ಯಾಯಾಲಯದಿಂದ ಸಮನ್ಸ್ ಜಾರಿ ಆಗಿದೆ.
ಕೆಂಪಯ್ಯನ ಹುಂಡಿಯ ದರ್ಶನ್ ತೋಟದ ಮೇಲೆ ದಾಳಿ ಮಾಡಿದ್ದ ಅರಣ್ಯಾಧಿಕಾರಿಗಳು ವಿದೇಶಿ ಪ್ರಭೇದದ ಬಾತು ಕೋಳಿ ವಶಕ್ಕೆ ಪಡೆದಿದ್ದರು. ಪ್ರಕರಣದ ವಿಚಾರಣೆ ಮೈಸೂರು ಜಿಲ್ಲೆಯ ಟಿ.ನರಸೀಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಇದೀಗ ನ್ಯಾಯಾಲಯವು ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಸಮನ್ಸ್ ಜಾರಿ ಮಾಡಿ ಜುಲೈ 4 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ಬಾರ್ ಹೆಡೆಡ್ ಗೂಸ್ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು ಇವು ವಲಸೆ ಹಕ್ಕಿಗಳಾಗಿವೆ. ಈ ಹಕ್ಕಿಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಅಪರಾಧ ಎನಿಸಿಕೊಂಡಿದೆ. ಈ ಹಿಂದೆ ಪ್ರಕರಣ ದಾಖಲಾಗಿದ್ದಾಗ ಬಾತುಕೊಳಿಗಳನ್ನು ಸ್ನೇಹಿತರು ನೀಡಿದ್ದರು ಎಂದು ದರ್ಶನ್ ಸ್ಪಷ್ಟನೆ ನೀಡಿದ್ದರು. ಬಾತುಕೋಳಿಗಳನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳು ದರ್ಶನ್ ವಿರುದ್ಧ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಿಸಿದ್ದರು.
ದರ್ಶನ್ ಫಾರಂ ಹೌಸ್ನಲ್ಲಿ ಹಲವಾರು ಪ್ರಾಣಿಗಳು ಇವೆ. ಈ ಹಿಂದೆ ಯೂಟ್ಯೂಬರ್ ಒಬ್ಬ ದರ್ಶನ್ ಫಾರಂ ಹೌಸ್ನ ವಿಡಿಯೋ ಮಾಡಿದ್ದರು. ಆ ವಿಡಿಯೋ ಗಮನಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಫಾರಂ ಹೌಸ್ ಮೇಲೆ ದಾಳಿ ಮಾಡಿ ನಿಯಮಬಾಹಿರವಾಗಿ ಇರಿಸಿಕೊಂಡಿದ್ದ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದರು.
—–

Be the first to comment