ಇಂದು ನಾಲ್ಕು ಚಿತ್ರಗಳು ತೆರೆಗೆ

ಇಂದು ಕನ್ನಡದ ನಾಲ್ಕು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ಸಿಂಹರೂಪಿಣಿ:

ಮಾರಮ್ಮ ದೇವಿ ಕುರಿತಾದ ಕಥೆ ಹೊಂದಿರುವ ಭಕ್ತಿ ಪ್ರಧಾನ ಚಿತ್ರ ಸಿಂಹರೂಪಿಣಿ. ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀಚಕ್ರ ಫಿಲ್ಮ್ಸ್‌ ಲಾಂಛನದಲ್ಲಿ ನಿರ್ಮಿಸಿರುವ ಚಿತ್ರಕ್ಕೆ ಕಿನ್ನಾಳ್‌ ರಾಜ್ ನಿರ್ದೇಶನ ಮಾಡಿದ್ದಾರೆ.

‘ದೇವಿಯು ಮಹಾಲಕ್ಷ್ಮಿ ರೂಪದಲ್ಲಿ ಭೂಮಿಗೆ ಬರುತ್ತಾಳೆ. ಮುಂದೆ ಏಕೆ ಮಾರಮ್ಮ ಆಗುತ್ತಾಳೆ ಎಂಬುದಕ್ಕೆ ಚಿತ್ರದಲ್ಲಿ ಉತ್ತರ ನೀಡಲಾಗಿದೆ’ ಎಂದಿದ್ದಾರೆ ನಿರ್ದೇಶಕ ಕಿನ್ನಾಳ್‌ ರಾಜ್.

ಯಶ್ ಶೆಟ್ಟಿ, ಅಂಕಿತಾ ಗೌಡ, ದಿವ್ಯ ಆಲೂರು, ಸುಮನ್, ವಿಜಯ್ ಚೆಂಡೂರು, ದಿನೇಶ್ ಮಂಗಳೂರು, ಹರೀಶ್ ರಾಯ್ ಮುಂತಾದವರು ಚಿತ್ರದಲ್ಲಿದ್ದಾರೆ. ಆಕಾಶ್‌ಪರ್ವ ಸಂಗೀತ, ಕಿರಣ್ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಕರಣ ತನಿಖಾ ಹಂತದಲ್ಲಿದೆ:

ರಂಗಭೂಮಿ ಕಲಾವಿದರೇ ಸೇರಿ ನಿರ್ಮಿಸಿರುವ ಚಿತ್ರ ‘ಪ್ರಕರಣ ತನಿಖಾ ಹಂತದಲ್ಲಿದೆ’. ಸುಂದರ್.ಎಸ್ ನಿರ್ದೇಶನದ ಚಿತ್ರವನ್ನು ಚಿಂತನ್ ಕಂಬಣ್ಣ ನಿರ್ಮಾಣ ಮಾಡಿದ್ದಾರೆ.

”ಪ್ರಕರಣ ತನಿಖಾ ಹಂತದಲ್ಲಿದೆ’ ಕ್ರೈಂ ಕಥಾಹಂದರ ಹೊಂದಿರುವ ಚಿತ್ರ. ಒಂದು ಪ್ರಕರಣದ ತನಿಖೆಯ ಸುತ್ತಾ ಸಾಗುವ ಕಥೆ. ಸಿದ್ಧಸೂತ್ರದಾಚೆಗೆ ಏನೋ ಮಾಡಬೇಕೆಂಬ ಕನಸಿನೊಂದಿಗೆ ಚಿತ್ರ ತಯಾರಾಗಿದೆ’ ಎಂದಿದ್ದಾರೆ ಚಿತ್ರದ ನಿರ್ದೇಶಕ ಸುಂದರ್.ಎಸ್.

ಮಹೀನ್ ಕುಬೇರ್, ಮುತ್ತುರಾಜ್.ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಮುಂತಾದವರ ತಾರಾಗಣವಿದೆ. ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ ಛಾಯಾಗ್ರಹಣ, ಶಿವೋಂ ಸಂಗೀತ ನಿರ್ದೇಶನ,  ನಾನಿಕೃಷ್ಣ ಸಂಕಲನ  ಚಿತ್ರಕ್ಕಿದೆ.

ಮರ್ಫಿ:

ಪ್ರಭು ಮುಂಡ್ಕೂರ್, ರೋಶಿನಿ ಪ್ರಕಾಶ್‌ ಜೋಡಿಯಾಗಿ ನಟಿಸಿರುವ ಚಿತ್ರ ಮರ್ಫಿ. ಬಿ.ಎಸ್.ಪ್ರದೀಪ್‌ ವರ್ಮಾ ಚಿತ್ರವನ್ನು ನಿರ್ದೇಶಿಸಿರುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.

‘ಚಿತ್ರದಲ್ಲಿ ಪ್ರೀತಿ, ಭಾವನೆ, ನೆನಪುಗಳ ಸುತ್ತ ಸಾಗುವ ರೋಮ್ಯಾಂಟಿಕ್‌ ಪ್ರೇಮಕಥಾಹಂದರವಿದೆ’ ಎಂದು ಬಿ.ಎಸ್.ಪ್ರದೀಪ್‌ ವರ್ಮಾ ಹೇಳಿದ್ದಾರೆ.

ಇಳಾ ವೀರಮಲ್ಲ, ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹಿರೇಮಠ, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರ ತಾರಾಗಣವಿದೆ. ಮಹೇಶ ತೊಗಟ ಸಂಕಲನ, ಆದರ್ಶ ಆರ್ ಛಾಯಾಗ್ರಹಣವಿದೆ. ಅರ್ಜುನ್ ಜನ್ಯ, ರಜತ್ ಹೆಗಡೆ, ಕೀರ್ತನ್ ಹೊಳ್ಳ ಮತ್ತು ಸಿಲ್ವೆಸ್ಟರ್ ಪ್ರದೀಪ್ ಸಂಗೀತ ನಿರ್ದೇಶನ ಮಾಡಿದ್ದು, ಸಿಲ್ವೆಸ್ಟರ್ ಪ್ರದೀಪ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

ಮಾಂತ್ರಿಕ:

ಆತ್ಮದ ಕಥೆಯನ್ನು ಹೊಂದಿರುವ   ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾ  ‘ಮಾಂತ್ರಿಕ’. ವ್ಯಾನವರ್ಣ ಜಮ್ಮುಲ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುವುದರ ಜೊತೆಗೆ ಬಂಡವಾಳ, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಇದೊಂದು ಆತ್ಮ, ದೆವ್ವದ ಹುಡುಕಾಟದ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥೆ. ದೆವ್ವ ಎಂಬುದು ಇದೆಯೋ, ಇಲ್ಲವೋ ಅಥವಾ ಅದೆಲ್ಲ ನಮ್ಮ ಭ್ರಮೆಯೋ ಎಂಬ ವಿಷಯದ ಮೇಲೆ ಈ ಚಿತ್ರ ಸಾಗುತ್ತದೆ’ ಎಂದಿದ್ದಾರೆ ನಿರ್ದೇಶಕ ವ್ಯಾನವರ್ಣ ಜಮ್ಮುಲ.

ರಾಧಿಕಾ ಮಾಲಿ ಪಾಟೀಲ,  ಮೈಥಿಲಿ ನಾಯಕ್ ಚಿತ್ರದ ನಾಯಕಿಯರು. ಸ್ಟಾಲಿನ್ ಸಂಗೀತ, ಅನಿಲ್ ಆಂಟೋನಿ ಹಾಗೂ ರಮೇಶ್ ಮರ‍್ರಿಪಲ್ಲಿ ಛಾಯಾಗ್ರಹಣ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!