ಎಮರ್ಜೆನ್ಸಿ

‘ಎಮರ್ಜೆನ್ಸಿ’ ಚಿತ್ರ ನಿಷೇಧಿಸಲು ತೆಲಂಗಾಣ ಸರ್ಕಾರ ಚಿಂತನೆ

ನಟಿ, ಲೋಕಸಭಾ ಸದಸ್ಯೆ ಕಂಗನಾ ರನೌತ್‌ ನಿರ್ದೇಶಿಸಿ, ನಟಿಸಿರುವ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಗೆ ನಿಷೇಧ ಹೇರಲು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಮಾಜಿ ಐಪಿಎಸ್ ಅಧಿಕಾರಿ ತೇಜ್‌ದೀಪ್ ಕೌರ್ ಮೆನನ್ ನೇತೃತ್ವದ ತೆಲಂಗಾಣ ಸಿಖ್ ಸೊಸೈಟಿಯ ನಿಯೋಗವು ಹೈದರಾಬಾದ್‌ನಲ್ಲಿ ಸರ್ಕಾರದ ಕಾನೂನು ಸಲಹೆಗಾರ ಮೊಹಮ್ಮದ್ ಅಲಿ ಶಬ್ಬೀರ್ ಅವರನ್ನು ಭೇಟಿಯಾಗಿ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದೆ.

‘ಎಮರ್ಜೆನ್ಸಿ’ ಚಿತ್ರದಲ್ಲಿ ಸಿಖ್ಖರನ್ನು ಭಯೋತ್ಪಾದಕರು ಮತ್ತು ದೇಶವಿರೋಧಿಗಳೆಂದು ಚಿತ್ರೀಕರಿಸಲಾಗಿದೆ. ಇದು ಆಕ್ಷೇಪಾರ್ಹ. ಇದರಿಂದ ಸಮುದಾಯದ ಘನತೆಗೆ ಹಾನಿಯುಂಟಾಗುತ್ತದೆ ಎಂದು ನಿಯೋಗದ ಸದಸ್ಯರು ದೂರಿದ್ದಾರೆ.

‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೆ ನಿಷೇಧಿಸುವುದಾಗಿ ರೇವಂತ್ ರೆಡ್ಡಿ ಅವರು ಸಿಖ್ ಸಮುದಾಯದ ನಾಯಕರಿಗೆ ಭರವಸೆ ನೀಡಿದ್ದಾರೆ. ಈ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸರ್ಕಾರದ ಕಾನೂನು ಸಲಹೆಗಾರ ಮೊಹಮ್ಮದ್ ಅಲಿ ಶಬ್ಬೀರ್ ಹೇಳಿದ್ದಾರೆ.

ತೆಲಂಗಾಣದಲ್ಲಿ ‘ಎಮರ್ಜೆನ್ಸಿ’ ಚಿತ್ರ ನಿಷೇಧಿಸುವ ಬಗ್ಗೆ ಸಿಎಂ ರೇವಂತ್ ರೆಡ್ಡಿ ಅವರಿಗೆ ಶಬ್ಬೀರ್ ಮನವಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ರೆಡ್ಡಿ, ಕಾನೂನು ಸಲಹೆ ಪಡೆದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಂಗನಾ ರನೌತ್‌ ನಿರ್ದೇಶಿಸಿ, ನಟಿಸಿರುವ ‘ಎಮರ್ಜೆನ್ಸಿ’ ಚಿತ್ರ ಸೆಪ್ಟೆಂಬರ್‌ 6ರಂದು ತೆರೆಕಾಣಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!