ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು

ಕನ್ನಡ ನಟ ನಾಗಭೂಷಣ ಕಾರು ದಂಪತಿಗೆ ಡಿಕ್ಕಿ ಹೊಡೆದು ಘಟನೆ ನಿನ್ನೆ ತಡರಾತ್ರಿ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದರು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಗಭೂಷಣ್‌ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರು: ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ನಟಿಸಿರುವ ಕನ್ನಡ ನಟ ನಾಗಭೂಷಣ್‌ ಅವರ ಕಾರು ದಂಪತಿಗೆ ಡಿಕ್ಕಿ ಹೊಡೆದ ಘಟನೆ ನಿನ್ನೆ ತಡರಾತ್ರಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ಬಳಿ ವರದಿಯಾಗಿದೆ. ರಾತ್ರಿ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ಬರುವಾಗ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ ದಂಪತಿ ವಾಕಿಂಗ್‌ ಮಾಡುತ್ತಿರುವ ಸಂದರ್ಭದಲ್ಲಿ ಘಟನೆ ನಡೆದಿದೆ. ವಸಂತನಗರ ಮುಖ್ಯರಸ್ತೆ ಬಳಿ ಈ ಘಟನೆ ನಡೆದಿದೆ. ಕೃಷ್ಣ ಮತ್ತು ಅವರ ಪತ್ನಿ ರಾತ್ರಿ ಎಂದಿನಂತೆ ವಾಕಿಂಗ್‌ ಮಾಡುತ್ತಿದ್ದರು. ಆ ಸಮಯದಲ್ಲಿ ಸ್ಯಾಂಡಲ್‌ವುಡ್‌ ನಟ ನಾಗಭೂಷಣ ಅವರ ಕಾರು ಡಿಕ್ಕಿಯಾಗಿದೆ. ಮೊದಲಿಗೆ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಫುಟ್‌ಪಾತ್‌ನಲ್ಲಿದ್ದ ದಂಪತಿ ಮೇಲೆ ಹರಿದಿದೆ.

ಅಪಘಾತದ ತೀವ್ರತೆಗೆ ಪತ್ನಿ ಪ್ರೇಮ ನಿಧನರಾಗಿದ್ದಾರೆ. ಪ್ರೇಮ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕೃಷ್ಣ ಅವರಿಗೆ ಬನ್ನೇರುಘಟ್ಟದಲ್ಲಿರುವ ಪೋರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪರಿಸ್ಥಿತ ಗಂಭೀರವಾಗಿದೆ ಎನ್ನಲಾಗಿದೆ.

ನಿನ್ನೆ ರಾತ್ರಿ ಸುಮಾರು 9.45 ಗಂಟೆಗೆ ಘಟನೆ ನಡೆದಿದೆ. ಈ ಕುರಿತು ದಂಪತಿ ಪುತ್ರ ಪಾರ್ಥ ಎಂಬವರು ಕುಮಾರಸ್ವಾಮಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ಪಾರ್ಥ ಕೆ ಅವರು ನೀಡಿದ ದೂರು ಈ ಮುಂದಿನಂತೆ ಇದೆ. “ನಾನು ಈ ಮೇಲ್ಕಂಡ ವಿಳಾಸದಲ್ಲಿ ತಂದೆ ತಾಯಿಯವರ ಜೊತೆ ವಾಸವಾಗಿದ್ದುಕೊಂಡು ನ್ಯೂಟ್ರಿನೋಸ್ ಕಂಪನಿಯಲ್ಲಿ ಪ್ರಾಡೆಕ್ಟ್ ಲೀಡ್ ಆಗಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಾವು ವಕ್ಕಲಿಗ ಜಾತಿಗೆ ಸೇರಿರುತ್ತೇವೆ ದಿನಾಂಕ:30-09-2023 ರಂದು ನಾನು ಕನಕಪುರ ರಸ್ತೆ ಹತ್ತಿರ ಇರುವಾಗ ನನ್ನ ಮೊಬೈಲ್ ನಂಬರ್‌ಗೆ ನಮ್ಮ ಅಪಾರ್ಟಮೆಂಟ್ ನಲ್ಲಿರುವವರು ನನಗೆ ಕರೆ ಮಾಡಿ ನಮ್ಮ ತಂದೆ ಶ್ರೀ.ಕೃಷ್ಣ ಬಿ. 58ವರ್ಷ ಮತ್ತು ನಮ್ಮ ತಾಯಿ ಶ್ರೀಮತಿ, ಪ್ರೇಮ ಎಸ್ 48ವರ್ಷರವರಿಗೆ ವಸಂತಪುರ ರಸ್ತೆಯಲ್ಲಿರುವ ನಮ್ಮ ಅಪಾರ್ಟಮೆಂಟ್ ಮುಂದೆ ಕಾರು ಡಿಕ್ಕಿ ಮಾಡಿದ್ದು ನಮ್ಮ ತಂದೆ ತಾಯಿಗೆ ಇಬ್ಬರಿಗೂ ಜಾಸ್ತಿ ಏಟಾಗಿದ್ದು ಇಬ್ಬರನ್ನು ಚಿಕಿತ್ಸೆಗೆ ಅಸ್ಟಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ನನಗೆ ತಿಳಿಸಿದ್ದು ನಾನು ಕೂಡಲೇ ಅಲ್ಲೇ ಹತ್ತಿರದಲ್ಲಿದ್ದ ಅಸ್ಟ್ರಾ ಆಸ್ಪತ್ರೆಯ ಏಮರ್ಜನ್ಸಿಗೆ ಹೋಗಿ ನೋಡಲಾಗಿ ನಮ್ಮ ತಾಯಿಗೆ ಮುಖ ಮತ್ತು ತಲೆಗೆ ತೀವ್ರ ರಕ್ತಗಾಯವಾಗಿ ಕಿವಿ ಮತ್ತು ಮೂಗು ಹಾಗೂ ಬಾಯಿಯಿಂದ ರಕ್ತ ಬಂದು ಚಿಕಿತ್ಸೆಗೆ ಬರುವ ದಾರಿಯ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ನನಗೆ ವೈದ್ಯರು ತಿಳಿಸಿದರು”

“ನಮ್ಮ ತಂದೆಗೆ ಎರಡು ಕಾಲು, ಹೊಟ್ಟೆ ಹಾಗೂ ಬೆನ್ನು ಮತ್ತು ತಲೆಗೆ ರಕ್ತಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ನಾನು ಅಲ್ಲಿದ್ದ ಜನರನ್ನು ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ಅವರ ನನಗೆ ತಿಳಿಸಿದ್ದೇನೆಂದರೆ ದಿನಾಂಕ:30-09-2023 ರಂದು ರಾತ್ರಿ ಸುಮಾರು 09-45 ಗಂಟೆಯ ಸಮಯದಲ್ಲಿ ನಮ್ಮ ತಂದೆ ಶ್ರೀ.ಕೃಷ್ಣ ಬಿ 58ವರ್ಷ ಹಾಗೂ ನಮ್ಮ ತಾಯಿ ಶ್ರೀಮತಿ, ಪ್ರೇಮ ಎಸ್ 48 ವರ್ಷರವರು ವಸಂತಪುರ ಮುಖ್ಯರಸ್ತೆಯ ನಮ್ಮ ಅಪಾರ್ಟಮೆಂಟ್ ಹತ್ತಿರ ಪಟ್ ಪಾತ್ ಮೇಲೆ ನಡೆದುಕೊಂಡು ಕೋಣನಕುಂಟೆ ಕ್ರಾಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅದೇಸಮಯಕ್ಕೆ ಹಿಂದಿನಿಂದ ಅಂದರೆ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಬಂದ ಒಬ್ಬ ಕಾರಿನ ಚಾಲಕ ತನ್ನ ವಾಹನವನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ನಮ್ಮ ತಂದೆ ಹಾಗು ತಾಯಿಗೆ ಡಿಕ್ಕಿ ಮಾಡಿ ನಂತರ ಪುಟ್ ಪಾತ್ ನಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಮಾಡಿರುವುದಾಗಿ ಮತ್ತು ಡಿಕ್ಕಿ ಮಾಡಿದ ಕಾರಿನ ಚಾಲಕ ಅಪಘಾತ ನಡೆದ ಸ್ಥಳದಲ್ಲಿದ್ದು ಈತ ಚಲನಚಿತ್ರ ನಟನಾಗಿದ್ದು (ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ನಟಿಸಿರುವ) ಆತನ ಹೆಸರು ನಾಗಭೂಷನ್ ಎನ್.ಎಸ್ ಬಿನ್ ಶಿವಕುಮಾರ್ ಎನ್.ಪಿ 37ವರ್ಷ ನಂ.1700 17ನೇ ಎ ಮುಖ್ಯರಸ್ತೆ 7ನೇ ಕ್ರಾಸ್ ಜೆ ಪಿ ನಗರ ಬೆಂಗಳೂರು ನಗರ ನಿವಾಸಿ ಎಂದು ಅಪಘಾತ ನೋಡಿದ ನನ್ನ ತಂಗಿ ಕುಮಾರಿ.ಯಶಸ್ವಿನಿ ಕೆ 26ವರ್ಷ ಹಾಗೂ ನಮ್ಮ ಅಪಾರ್ಟಮೆಂಟ್ ವಾಸಿಯಾದ ಶ್ರೀ.ಅಕ್ಷಯ್ ಜೆ 28ವರ್ಷರವರು ನನಗೆ ತಿಳಿಸಿದರು. ನಂತರ ಆಸ್ಪತ್ರೆಗೆ ಸಂಚಾರ ಪೊಲೀಸರು ಬಂದರು ನಾವು ಅವರಿಗೆ ಅಪಘಾತದ ವಿಷಯವನ್ನು ತಿಳಿಸಿ ಅಪಘಾತ ನಡೆದ ಸ್ಥಳಕ್ಕೆ ಬಂದು ನೋಡಲಾಗಿ ಡಿಕ್ಕಿ ಮಾಡಿದ ಕಾರು ಅಪಘಾತ ನಡೆದ ಸ್ಥಳದಲ್ಲಿಯೇ ನಿಂತಿದ್ದು ಕಾರ್ ನಂಬ‌ ನೋಡಲಾಗಿ ಕೆಎ-09-ಎಂಜಿ-5335 ಆಗಿದ್ದು ಇದರ ಮುಂಭಾಗ ಜಖಂಗೊಂಡಿತ್ತು. ನಮ್ಮ ತಂದೆ ಅಸ್ವಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬನ್ನೇರಘಟ್ಟ ರಸ್ತೆಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕಾರ್ ನಂಬರ್ ಕೆಎ09-ಎಂಜಿ-5335ರ ಚಾಲಕನ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿಕೊಳ್ಳುತ್ತೇನೆ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!