BHIMA KOREGAON Movie :ಸತ್ಯಘಟನೆ ಆಧಾರಿತ “ಭೀಮಾ ಕೋರೇಗಾಂವ” ಶೀರ್ಷಿಕೆ ಅನಾವರಣ

ಇತ್ತೀಚೆಗಷ್ಟೇ ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಚಾಲನೆ ನೀಡಿದ್ದ ನಿರ್ದೇಶಕ ನಾಗಶೇಖರ್, ಅದರ ಬೆನ್ನಲ್ಲೇ ಮತ್ತೊಂದು ಬಿಗ್ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ರೆವಲ್ಯೂಷನರಿ ಸಬ್ಜೆಕ್ಟ್ ಇಟ್ಟುಕೊಂಡು ನೈಜ ಘಟನೆಯನ್ನು ತೆರೆಯ ಮೇಲೆ ಹೇಳಹೊರಟಿದ್ದಾರೆ. ಅದಕ್ಕೆ ಕೊಟ್ಟಿರುವ ಹೆಸರು ಭೀಮಾ ಕೋರೇಗಾಂವ.

ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಹು ಸೂಕ್ಷ್ಮ ವಿಚಾರ ಇಟ್ಟುಕೊಂಡು ಮಾಡುತ್ತಿರುವ ಚಲನಚಿತ್ರ ಇದಾಗಿದ್ದು, ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಬಿಡುಗಡೆ ಮಾಡಿದರು.
ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡುತ್ತ ಸಂಜು ವೆಡ್ಸ್ ಗೀತಾ ಚಿತ್ರದ ಬಗ್ಗೆ ಚರ್ಚೆ ನಡೆಸುವಾಗ ಈ ವಿಷಯ ಪ್ರಸ್ತಾಪಕ್ಕೆ ಬಂತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದರು.

ನಂತರ ನಾಗಶೇಖರ್ ಮಾತನಾಡಿ 1818 ರ ಜ.1 ರಂದು ನಡೆದ ರೆವಲ್ಯೂಷನರಿ ಸಬ್ಜೆಕ್ಟ್. ಶೋಷಿತರ ಬದುಕಿಗೆ ಬೆಳಕು ಹಚ್ಚುವ ಕೆಲಸಕ್ಕೆ ದೀಪ ಹಚ್ಚುವ ಮೂಲಕ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ಇದು ಬಹಳ ದೊಡ್ಡ ವಿಚಾರವಾಗಿದೆ ಎಂದರು.
ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡುತ್ತ ಪೂನಾ ನದಿಯ ದಡದಲ್ಲಿ ಡಿ.31ರಿಂದ ಜ.1ರವರೆಗೆ ಸ್ವಾಭಿಮಾನಿ ಬದುಕಿಗೋಸ್ಕರ. ನಡೆದ ಘನಘೋರ ಯುದ್ಧ. 2ನೇ ಬಾಜೀರಾಯನ ಘೋರ ಕೃತ್ಯಗಳನ್ನು ವಿರೋಧಿಸಿ ಮೆಹರ್ ಸೈನಿಕರು ನಡೆಸಿದ ಯುದ್ದ, ಭಾರತದ ನೆಲದಲ್ಲಿ ಬಾಜೀರಾಯ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಂಡಿದ್ದ, ಯಾವರೀತಿ ನೋಡಿಕೊಂಡಿದ್ದ ಯಾವ ಉದ್ದೇಶಕ್ಕೆ ಈ ಯುದ್ದ ನಡೆಯಿತು ಅನ್ನೋದನ್ನು ಈ ಸಿನಿಮಾದಲ್ಲಿ ದಾಖಲು ಮಾಡಲಾಗುತ್ತೆ ಎಂದರು.

ಮುಖ್ಯ ಅತಿಥಿಯಾಗಿದ್ದ ಚಿಂತಕ ಗೋಪಾಲ್ ಮಾತನಾಡುತ್ತ ಅಸಮಾನತೆಯ ವಿರುದ್ದ ನಡೆದ ಹೋರಾಟವಿದು. 500 ಜನ ಸೈನಿಕರು 30 ಸಾವಿರ ಪೇಶ್ವೆ ಬಾಜೀರಾಯನ ಸೈನಿಕರನ್ನು 12 ಗಂಟೆಗಳಲ್ಲಿ ಧ್ವಂಸ ಮಾಡಿದ ಘಟನೆ. ಮೆಹರ್ಸ್ ಅಂದರೆ ಗುಲಾಮರು. ಬಾಜೀರಾಯ ಅಸ್ಪೃಶ್ಯರ ವಿರುದ್ದ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದ. ಇದನ್ನು ವಿರೋಧಿಸಿ ನಡೆದ ಯುದ್ದವಿದು. ಹಾಲಿವುಡ್ ಶೈಲಿಯ ಸಿನಿಮಾ ಆಗಲಿದೆ‌ ಎಂದರು. ಉಳಿದಂತೆ ನೆಹರು ಓಲೇಕಾರ್, ಚಕ್ರವರ್ತಿ ಚಂದ್ರಚೂಡ್, ಈ ಘಟನೆಯ ಬಗ್ಗೆ ಒಂದಷ್ಟು ಮಾಹಿತಿ‌ ನೀಡಿದರು.

ಕೊನೆಯಲ್ಲಿ ಮಾತು ಮುಂದುವರೆಸಿದ ನಾಗಶೇಖರ್, ಈ ಸಿನಿಮಾ ಮಾಡುವಂತೆ ನನಗೆ ಪ್ರೇರೇಪಿಸಿದ್ದು ರೈಟರ್ ಚಂದ್ರಚೂಡ್, ಜಾಸ್ತಿ ಬಂಡವಾಳ ಕೇಳುತ್ತೆ. ಚಿತ್ರದ ಬಜೆಟ್ 120 ಕೋಟಿ ಆಗಬಹುದು. ನಿರ್ಮಾಪಕ ಕುಮಾರ್ ಎಷ್ಟೇ ಆದರೂ ಖರ್ಚು ಮಾಡಲು ರೆಡಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ಒಬ್ಬರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರನ್ನು ನಾಯಕಿ ಪಾತ್ರಕ್ಕೆ ಕರೆತರುವ ಉದ್ದೇಶವಿದೆ. 54 ಕೋಟಿ ಶೋಷಿತರಿಗೆ ಬೆಳಕಾಗುವ ಕಥಾನಕವಿದು. ಚಂದ್ರಚೂಡ್ ನೇತೃತ್ವದಲ್ಲಿ ಬರಹಗಾರರ ತಂಡ ಕಟ್ಟಿ ಭಾಗ-1, ಭಾಗ-2 ಮಾಡುವ ಯೋಚನೆಯಿದೆ. ಪ್ರೀ ಪ್ರೊಡಕ್ಷನ್ ಗೆ 365 ದಿನ ತೆಗೆದುಕೊಂಡಿದ್ದೇನೆ. ಈ ಕಥೆಯನ್ನು ಕಣ್ಣಿಗೆ ಕಟ್ಟುವ ಹಾಗೆ ಮನಸಿಗೆ ಮುಟ್ಟುವ ಹಾಗೆ ಕಟ್ಟಿಕೊಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!