ಸಿದ್ಧರಾಮಯ್ಯ ಬಯೋಪಿಕ್ ಗೆ ಸಿದ್ಧತೆ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೀವನಗಾಥೆ ಯನ್ನು ತೆರೆಗೆ ತರುವ ಯತ್ನ ನಡೆದಿದೆ.

ಸಿದ್ದರಾಮಯ್ಯ ಪಾತ್ರವನ್ನು ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕನಕಗಿರಿ ಮಾಜಿ ಶಾಸಕ ಶಿವರಾಜ ತಂಗಡಗಿ ಮತ್ತು ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮೈಸೂರಿನ ನಾಗರಾಜು ಎಂಬವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬಯೋಪಿಕ್ ಮಾಡಲು ಅನುಮತಿ ನೀಡಬೇಕೆಂದು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ಗಮನಿಸಿದ ಬಳಿಕ ಬಯೋಪಿಕ್‌ ಬಗ್ಗೆ ತಿಳಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದೂ ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ನನ್ನ ಬಯೋಪಿಕ್‌ನ ಸಿನಿಮಾ ಮಾಡುತ್ತೇನೆ ಎಂದು ಕನಕಗಿರಿ ಕ್ಷೇತ್ರದವರು ಬಂದಿದ್ದರು. ನಾನು ಚಿತ್ರದಲ್ಲಿ ನಟಿಸಲ್ಲ, ನನಗೆ ನಟನೆ ಬರಲ್ಲ’ ಎಂದಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿರುವ ತಂಗಡಗಿ, ‘ಸಿದ್ದರಾಮಯ್ಯ ಅವರ ಬಯೋಪಿಕ್‌ ನ್ನು ತೆರೆ ಮೇಲೆ ತರಬೇಕೆಂಬ ಆಸೆಯಿಂದ ನನ್ನ ಕ್ಷೇತ್ರದ ಕೆಲವು ಯುವಕರು ನನ್ನನ್ನು ಸಂಪರ್ಕಿಸಿದ್ದರು.‌ ಈ ಉದ್ದೇಶದಿಂದ ಅವರು ‘ಎಂ.ಎಸ್‌ ಕ್ರಿಯೇಷನ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನೂ ನೋಂದಾಯಿಸಿಕೊಂಡಿದ್ದಾರೆ. ನಿರ್ದೇಶಕ ಸತ್ಯರತ್ನ ಹೊಸಬ. ನಾವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ. ಅವರು ಸಮಯ ಕೇಳಿದ್ದಾರೆ. ಅವರ ಅನುಮತಿ ಪಡೆಯಲು ಮತ್ತೊಮ್ಮೆ ಭೇಟಿ ಮಾಡುತ್ತೇವೆ’ ಎಂದಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!