ಬೆತ್ತಲೆ ಫೋಟೋ ತಿದ್ದಲಾಗಿದೆ ಎಂದ ರಣವೀರ್

ಬೆತ್ತಲೆ ಫೋಟೊಗಳಲ್ಲಿ ಒಂದನ್ನು ದುರುದ್ದೇಶದಿಂದ ತಿದ್ದಲಾಗಿದೆ ಎಂದು ಬಾಲಿವುಡ್ ನಟ ರಣವೀರ್ ಸಿಂಗ್ ಹೇಳಿದ್ದಾರೆ.

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮುಂಬೈ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ರಣವೀರ್ ಸಿಂಗ್ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಸರ್ಕಾರೇತರ ಸಂಸ್ಥೆಯೊಂದರ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಮೇಲೆ ಕಳೆದ ಜುಲೈನಲ್ಲಿ ಚೆಂಬೂರು ಪೊಲೀಸ್ ಠಾಣೆಯಲ್ಲಿ ಸಿಂಗ್ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಅಶ್ಲೀಲತೆ ಮತ್ತು ಮಹಿಳೆಯರ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ದೂರುದಾರರು, ನಟ ತಮ್ಮ ನಗ್ನ ಫೋಟೊಗಳ ಮೂಲಕ ‘ಸಾಮಾನ್ಯ ಮಹಿಳೆಯರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ’ ಎಂದು ಹೇಳಿದ್ದರು.

ಬಳಿಕ ತನಿಖೆಗೆ ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ರಣವೀರ್ ಸಿಂಗ್ ಅವರು ಆಗಸ್ಟ್ 29 ರಂದು ಪೊಲೀಸರ ಮುಂದೆ ಹಾಜರಾಗಿದ್ದರು.ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.

ಫೋಟೋವನ್ನು ತಿದ್ದಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಛಾಯಾಚಿತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸಿಂಗ್ ಅವರ ಖಾಸಗಿ ಭಾಗಗಳು ಒಂದು ಛಾಯಾಚಿತ್ರದಲ್ಲಿ ಗೋಚರಿಸುತ್ತದೆ ಎಂಬ ಕಾರಣಕ್ಕಾಗಿ ಎಫ್‌ಐಆರ್ ದಾಖಲಾಗಿರುವುದರಿಂದ ಫೋಟೊವನ್ನು ತಿದ್ದಲಾಗಿದೆ ಎಂದು ತಿಳಿದುಬಂದರೆ ಅವರಿಗೆ ಕ್ಲೀನ್ ಚಿಟ್ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!