“ಕನ್ನೇರಿ” ಚಿತ್ರದ ಹಾಡನ್ನ ಬಿಡುಗಡೆ ಮಾಡಿದ ಶಾಸಕ ಸತೀಶ್ ಜಾರಕಿಹೊಳಿ

ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಕನ್ನೇರಿ ಮಾರ್ಚ್ 4ರಂದು ಬಿಡುಗಡೆಯಾಗಿ ಪ್ರೇಕ್ಷಕರೆದುರು ಬರಲು ರೆಡಿಯಾಗಿದೆ. ರಿಲೀಸ್ ಗೆ ರೆಡಿಯಾಗಿರೋ ಕನ್ನೇರಿಯ ಒಂದೊಂದೇ ಝಲಕ್ ಗಳನ್ನ ಸಿನೆಮಾ ತಂಡ ರಿಲೀಸ್ ಮಾಡ್ತ ಸಿನೆಮಾ ಮೇಲಿನ ಕ್ಯೂರಿಯಾಸಿಟಿಯನ್ನ ಇಮ್ಮಡಿಯಾಗಿಸುತ್ತಿದೆ.’ ಕನ್ನೇರಿ’ ಸಿನಿಮಾದ ಮಗದೊಂದು ಹಾಡು ‘ಈ ಗಾಳಿ ತಂಗಾಳಿ’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಕಾಂಗ್ರೇಸ್ ಶಾಸಕರಾದ ಸತೀಶ್ ಜಾರಕಿಹೊಳಿ ಈ ಹಾಡನ್ನು ಮೆಚ್ಚಿ ಲೋಕಾರ್ಪಣೆ ಗೊಳಿಸಿದ್ದಾರೆ.

ಈ ಹಿಂದೆ ಚಿತ್ರದಿಂದ ಮೂರು ಹಾಡುಗಳು ಹಾಗು ಅಫಿಶಿಯಲ್ ಟ್ರೇಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನವನ್ನ ತನ್ನತ್ತ ಹರಿಸಿಕೊಂಡಿದ್ದ ಕನ್ನೇರಿ ಸಿನಿಮಾ ನೋಡಲೇ ಬೇಕೆನ್ನುವ ಇಂಗಿತವನ್ನು ಚಿಗುರಿಸಿತ್ತು. ಇದೀಗ ಮತ್ತೊಂದು ಬಹು ನಿರೀಕ್ಷಿತ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಪ್ರೇಕ್ಷಕರನ್ನು ಮತ್ತಷ್ಟು ಹಿಡಿದಿಡೋ ಪ್ರಯತ್ನ ಮಾಡಿದೆ ಚಿತ್ರತಂಡ ಎಂದರೆ ತಪ್ಪಾಗಲ್ಲ. ವಿ ರಘು ಶಾಸ್ತ್ರಿ ಬರೆದಿರುವ ‘ಈ ಗಾಳಿ ತಂಗಾಳಿ’ ಹಾಡಿಗೆ ಶ್ವೇತ ಪ್ರಭು ಧ್ವನಿಯಾಗಿದ್ದು, , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮತ್ತೊಮ್ಮೆ ಮೋಡಿ ಮಾಡಿದೆ. ಶಾಸಕರಾದ ಸತೀಶ್ ಜಾರಕಿಹೊಳಿ ಈ ಹಾಡನ್ನು ಕೇಳಿ ಮೆಚ್ಚಿಕೊಂಡಿದ್ದು, ಹಾಡನ್ನ ರಿಲೀಸ್ ಮಾಡಿ ಚಿತ್ರತಂಡದ ಪ್ರಯತ್ನ ಯಶಸ್ವಿಯಾಗಲೆಂದು ಶುಭ ಹಾರೈಸಿದ್ದಾರೆ.

ಈ ಮೊದಲೇ ಹೇಳಿದಂತೆ ‘ಕನ್ನೇರಿ’ ಮಹಿಳಾ ಪ್ರಧಾನ ಹಾಗು ನೈಜ ಘಟನೆಯಾಧಾರಿತ ಚಿತ್ರ. . ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಚಿತ್ರದಲ್ಲಿ ಬಳಸಿಕೊಂಡು ಕಥೆ ಹೆಣೆಯಲಾಗಿದೆ.ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು. ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ.

ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರದ ಕಥೆಯ ಜವಾಬ್ದಾರಿ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ಸಾರಥ್ಯವನ್ನು ನೀಸಾಸಂ ಮಂಜು ವಹಿಸಿಕೊಂಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತರು ಪಾತ್ರಗಳಿಗೆ ಜೀವ ತುಂಬಿದ್ದಾರೆ.

ನೈಜತೆಗೆ ಹೆಚ್ಚು ಒತ್ತು ನೀಡಿರುವ ಚಿತ್ರತಂಡ ಬುಡಕಟ್ಟು ಜನರನ್ನೂ ಕೂಡ ಚಿತ್ರದಲ್ಲಿ ತೊಡಗಿಸಿಕೊಂಡಿದೆ ಎನ್ನುವುದು ಕನ್ನೇರಿಯ ಮತ್ತೊಂದು ಹೈಲೇಟ್ ಬೆಂಗಳೂರು. ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಿದ್ದು, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಸ್ಯಾಂಪಲ್ ಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ಕನ್ನೇರಿ ಸಿನಿಮಾ ಮಾರ್ಚ್ 4ರಂದು ರಾಜ್ಯಾದ್ಯಂತ ಎಲ್ಲರ ಮನಸೆಳೆಯಲು ಥಿಯೇಟರ್ ಗೆ ಎಂಟ್ರಿಕೊಡ್ತಿದೆ. ಸಿನೆಮಾ ರಿಲೀಸ್ ಆದ್ಮೇಲೆ ಪ್ರೇಕ್ಷಕ ಪ್ರಭು ಏನಾಂತಾರೆ ಅನ್ನೋದು ಮಾತ್ರ ಬ್ಯಾಲೆನ್ಸ್ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!