ಸುಹಾನ ಸೈಯ್ಯದ್ ನಟನೆಯ “ನಿರ್ಭಯ 2” ಚಿತ್ರಕ್ಕೆ ಚಾಲನೆ

ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯ್ಯದ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ “ನಿರ್ಭಯ 2” ಚಿತ್ರದ ಮುಹೂರ್ತ ಸಮಾರಂಭ  ತುಮಕೂರಿನ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು.

ಬಾಲಕೃಷ್ಣ ಕೆ.ಆರ್ ನಿರ್ಮಾಣ, ರಾಜು ಕುಣಿಗಲ್ ನಿರ್ದೇಶನದ ಈ ಚಿತ್ರಕ್ಕೆ ಸಂಸದ ಜಿ.ಎಸ್ ಬಸವರಾಜ್ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ನಿರ್ದೇಶಕ ರಾಜು ಕುಣಿಗಲ್, “ನಾ‌ನು ಆರುವರ್ಷಗಳ ಹಿಂದೆ ಈ ಕಥೆ ಸಿದ್ದಮಾಡಿಕೊಂಡಿದ್ದೆ. ನಿರ್ಮಾಪಕರು ಸಿಗದ ಕಾರಣ ಚಿತ್ರ ನಿರ್ಮಾಣ ವಿಳಂಬ ವಾಯಿತು. ಕಥೆ ಕೇಳಿದ ಬಾಲಕೃಷ್ಣ ಅವರು ನಿರ್ಮಾಣಕ್ಕೆ ಮುಂದಾದರು. ಇದೇ ಹದಿನೇಳರಿಂದ ತುಮಕೂರು, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆʼʼ ಎಂದರು.

“ಸಮಾಜದಲ್ಲಿ ನಡೆಯುತ್ತಿರುವ ಕೊಲೆ, ಅತ್ಯಾಚಾರ ಮುಂತಾದ ವಿಷಯಗಳನ್ನಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆದಿದ್ದೇನೆ. ನಾನೇ ಕಥೆ, ಚಿತ್ರಕಥೆ ಬರೆದಿದಿದ್ದೇನೆ. ನುರಿತ ತಂತ್ರಜ್ಞರು ಹಾಗೂ ಗಾಯಕಿ ಸುಹಾನ ಸೈಯದ್ ಸೇರಿದಂತೆ ನೂತನ ಪ್ರತಿಭೆಗಳ ಸಂಗಮದಲ್ಲಿ “ನಿರ್ಭಯ 2” ನಿರ್ಮಾಣವಾಗಲಿದೆ. ಈ ಚಿತ್ರದ ಬಿಡುಗಡೆ ನಂತರ “ನಿರ್ಭಯ 1″ ಚಿತ್ರ ಸಹ ನಿರ್ಮಾಣ ಮಾಡುತ್ತೇವೆ. ಎಲ್ಲರೂ ಮೊದಲು ಭಾಗ ಒಂದನ್ನು ನಿರ್ಮಾಣ ಮಾಡಿ, ನಂತರ ಎರಡನ್ನು ತೆರೆಗೆ ತರುತ್ತಾರೆ. ಆದರೆ ನಾವು ಮೊದಲು ಭಾಗ ಎರಡನ್ನು ಬಿಡುಗಡೆ ಮಾಡಿ ಆಮೇಲೆ ಒಂದನ್ನು ನಿರ್ಮಾಣ ಮಾಡುತ್ತೇವೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದರು.

ನಿರ್ಮಾಪಕ ಬಾಲಕೃಷ್ಣ ಕೆ.ಆರ್. ಮಾತನಾಡಿ, “ನಾನೊಬ್ಬ ರೈತ. ಕುಣಿಗಲ್ ಊರಿನವನು. ಸಮಾಜಕ್ಕೆ ಉತ್ತಮ ಚಿತ್ರ ನೀಡಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ.‌ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ” ಎಂದು ಕೋರಿದರು.

“ಈ ಚಿತ್ರದಲ್ಲಿ ನೆಗೆಟಿವ್ ಶೆಡ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ” ಎಂದು ನಾಯಕ ಅರ್ಜುನ್ ಕೃಷ್ಣ ತಮ್ಮ ಪಾತ್ರ ವಿವರಣೆ ನೀಡಿದರು.  ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹರೀಶ್ ಹಾಗೂ ಕುಸುಮ  ತಮ್ಮ‌ ಪಾತ್ರಗಳ ಬಗ್ಗೆ ಮಾತನಾಡಿದರು.

ಚಿತ್ರಕ್ಕೆ ಸಂಗೀತ ನೀಡುತ್ತಿರುವ ಆಕಾಶ್ ಪರ್ವ, ಛಾಯಾಗ್ರಹಕ ಗುಂಡ್ಲುಪೇಟೆ ಸುರೇಶ್ ಇದ್ದರು.


Be the first to comment

Leave a Reply

Your email address will not be published. Required fields are marked *

Translate »
error: Content is protected !!