‘ಕಾಂತಾರ’ ಚಿತ್ರದ ಗೀತ ರಚನೆಕಾರ, ನ್ಯಾಯವಾದಿ ಶಶಿರಾಜ್ ಕಾವೂರು ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ.
ಶಶಿರಾಜ್ ಕಾವೂರು ಮೊದಲ ಬಾರಿಗೆ ನಿರ್ದೇಶಕರಾಗಿ ಕೈಗೆತ್ತಿಕೊಂಡಿರುವ ಕನ್ನಡ ಚಿತ್ರ ‘ವಾದಿರಾಜ ವಾಲಗ ಮಂಡಳಿ’. ಕಥೆ, ಚಿತ್ರಕಥೆ, ಸಂಭಾಷಣೆ ಶಶಿರಾಜ್ ಕಾವೂರು ಬರೆದಿದ್ದು, ಚಿತ್ರವನ್ನು ಎಂ.ಎನ್.ಆರ್ ಪ್ರೊಡಕ್ಷನ್ ನಿರ್ಮಿಸುತ್ತಿದೆ. ‘ವಾದಿರಾಜ ವಾಲಗ ಮಂಡಳಿ’ ಸಿನಿಮಾ ಹಾಸ್ಯ ಪ್ರಧಾನವಾಗಿದ್ದು, ಸಮಾಜಕ್ಕೆ ಸಂದೇಶವನ್ನೂ ಒಳಗೊಂಡಿದೆ.
ಚಿತ್ರದಲ್ಲಿ ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್ ಹಾಗೂ ಮೈಮ್ ರಾಮದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆ.
ಕ್ಯಾಮರಾ ಚಂದ್ರಶೇಖರನ್, ಸಂಕಲನ ನಿತಿನ್ ಶೆಟ್ಟಿ, ಕಲಾ ನಿರ್ದೇಶನ ರಾಜೇಶ್ ಬಂದ್ಯೋಡ್, ಸಂಗೀತ ಮಣಿಕಾಂತ ಕದ್ರಿ ಅವರದ್ದು. ಸಹ ನಿರ್ಮಾಪಕರಾಗಿ ಜಯಪ್ರಕಾಶ ತುಂಬೆ, ಕಾರ್ಯಕಾರಿ ನಿರ್ಮಾಪಕರಾಗಿ ಸಂತೋಷ್ ಶೆಟ್ಟಿ ಕಾರ್ಯ ನಿರ್ವಹಿಸಲಿದ್ದಾರೆ.
”ಕನ್ನಡ ಸಿನಿಮಾವನ್ನು ನಿರ್ದೇಶಿಸುವುದು ನನ್ನ ಹಳೆಯ ಕನಸು. ನಾಟಕ ಮತ್ತು ತುಳು ಸಿನಿಮಾಗಳ ಮೂಲಕ ಪಡೆದ ಅನುಭವ ಈಗ ಉಪಯೋಗವಾಗುತ್ತಿದೆ. ಡಿಸೆಂಬರ್ 3ರಿಂದ 40 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ನಿರ್ದೇಶಕರಾಗಿ ಇದು ನನಗೆ ದೊಡ್ಡ ಸವಾಲು” ಎಂದು ನಿರ್ದೇಶಕ ಶಶಿರಾಜ್ ಕಾವೂರು ಹೇಳಿದ್ದಾರೆ.
ಶಶಿರಾಜ್ ಕಾವೂರು ಅವರು, ‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ ಚಿತ್ರಗಳ ಜನಪ್ರಿಯ ಹಾಡುಗಳಾದ “ವರಾಹ ರೂಪಂ”, “ಗೊತ್ತಿಲ್ಲಾ ಶಿವನೇ ಭಕ್ತಿದಾರಿಯು” ಹಾಡುಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.
—–





Be the first to comment