‘ಜಿಗ್ರಿ ದೋಸ್ತ ಜಿಗ್ರಿ ದೋಸ್ತ’, ‘ಹುಟ್ಟಿಬಂದೆ ಹುಲಿಬೀರನಾಗಿ’ ಹಾಡುಗಳ ಮೂಲಕ ಸೌಂಡ್ ಮಾಡುತ್ತಿರುವ ಚಿತ್ರ ‘ಹುಲಿಬೀರ’ ಅಕ್ಟೋಬರ್ 2 ರಂದು ತೆರೆಕಾಣುತ್ತಿದೆ.
ಚಿತ್ರದ ಟ್ರೈಲರನ್ನು ಸುಪ್ರೀಂ ಹೀರೋ ಶಶಿಕುಮಾರ್ ಬಿಡುಗಡೆ ಮಾಡಿದರು. ನಿರ್ದೇಶಕ ಎಪಿ.ಅರ್ಜುನ್ ಅತಿಥಿಗಳಾಗಿ ಆಗಮಿಸಿದ್ದರು. ಮದರಂಗಿ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ‘ಯರ್ರಾಬಿರ್ರಿ’ ಖ್ಯಾತಿಯ ರೂರಲ್ ಅಂಜನ್ ನಾಯಕನಾಗಿ ನಟಿಸಿದ್ದಾರೆ. ಚೈತ್ರ ತೋಟದ, ವನು ಪಾಟೀಲ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಟ್ರೈಲರ್ ರಿಲೀಸ್ ಮಾಡಿದ ಶಶಿಕುಮಾರ್ ಮಾತನಾಡಿ, ‘ಟ್ರೈಲರ್ ನೋಡಿದಾಗ ರಾ ಕಂಟೆಂಟ್ ಇದೆ ಅನ್ನಿಸುತ್ತೆ. ಜನರೇಶನ್ ಚೇಂಜ್ ಆದಂತೆ ಅವರ ಯೋಚನೆ ಬೇರೆ ಇರುತ್ತೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಯಾವುದೇ ಆದರೂ ಕಲೆ, ಕಲಾವಿದ ಒಂದೇ. ಮಾತಾಡುವ ಶೈಲಿ ಬೇರೆ ಇರುತ್ತೆ ಅಷ್ಟೇ. ಕಂಟೆಂಟ್ ಬೇಸ್ ಸಿನಿಮಾ ಯಾವತ್ತೂ ಸೋತಿಲ್ಲ. ಹಳೆಯದನ್ನಿಟ್ಟುಕೊಂಡೇ ಹೊಸ ಸಿನಿಮಾ ಮಾಡುತ್ತ ಹೋಗಿ’ ಎಂದು ಹೇಳಿದರು.
ನಿರ್ಮಾಪಕ ದಾವಲ್ ಸಾಹೇಬ ಹುಣಶೀಮರದ ಮಾತನಾಡಿ ‘ಟ್ರೈಲರ್ ನೋಡುವಾಗ ನನ್ನ ಕಣ್ಣಲ್ಲಿ ನೀರು ಬಂತು. ಇಷ್ಟೊಂದು ಜನ ಮೆಚ್ಚಿಕೊಂಡಿದ್ದಾರೆ. ನಾವೀಗಾಗಲೇ ಸಕ್ಸಸ್ ಆಗಿಬಿಟ್ಟಿದ್ದೇವೆ’ ಎಂದರು.
ಮತ್ತೊಬ್ಬ ನಿರ್ಮಾಪಕ ಅಶೋಕ್ ಮಾತನಾಡಿ ‘ಈ ಚಿತ್ರ ನಮ್ಮ ಸಾಯಿಸ್ಟಾರ್ ಸಿನಿಮಾಸ್ ಚೊಚ್ಚಲ ಕಾಣಿಕೆ. ಸಿನಿಮಾ ಖಂಡಿತ ಜನರಿಗೆ ಇಷ್ಟವಾಗುತ್ತೆ’ ಎಂದರು.
ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, ‘ಟ್ರೈಲರ್ ಒಂದು ಸಿನಿಮಾದ ಆಮಂತ್ರಣ ಪತ್ರಿಕೆ ಇದ್ದಹಾಗೆ. ಉತ್ತರ ಕರ್ನಾಟಕದ ಸೊಗಡನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಹಾಡುಗಳನ್ನು ಈಗಾಗಲೇ ಇಷ್ಟಪಟ್ಟಿದ್ದೀರಿ. ಚಿತ್ರವನ್ನೂ ಗೆಲ್ಲಿಸಿ’ ಎಂದರು.
ಉತ್ತರ ಕರ್ನಾಟಕದ ಸೊಗಡಿನ ಈ ಚಿತ್ರಕ್ಕೆ ವೀರಸಮರ್ಥ ಸಂಗೀತ ಸಂಯೋಜನೆ ಮಾಡಿದ್ದಾರೆ. ಸನಾತನ ಕ್ಯಾಮೆರಾ ವರ್ಕ್ ನಿಭಾಯಿಸುದ್ದಾರೆ. ಹಿರಿಯನಟ ರಂಗಾಯಣ ರಘು ಗ್ರಾಮದ ಹಿರಿಯನ ಪಾತ್ರ ಮಾಡಿದ್ದಾರೆ.
ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ. ಧರ್ಮ ವಿಶ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
—-





Be the first to comment