“ಬಾನ ದಾರಿಯಲಿ” ಚಿತ್ರದ ಟ್ರೇಲರ್ ಗೆ ಪ್ರಶಂಸೆಯ ಮಹಾಪೂರ

ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ ಹಾಗೂ ಶ್ರೀವಾರಿ ಟಾಕೀಸ್ ನಿರ್ಮಾಣದ “ಬಾನ ದಾರಿಯಲಿ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು.

ಇದು ನಾನು ಈವರೆಗೂ ಮಾಡಿರದ ಪಾತ್ರ ಎಂದು ಮಾತು ಆರಂಭಿಸಿದ ನಾಯಕ ಗಣೇಶ್, “ಬಾನ ದಾರಿಯಲಿ” ಪ್ರೀತಿಯ ಬಗೆಗಿನ ಚಿತ್ರ. ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ್ದ ಈ ಯಶಸ್ವಿ ಹಾಡಿಗೂ ನಮ್ಮ ಸಿನಿಮಾ ಕಥೆಗೆ ಹೊಂದಾಣಿಕೆಯಾಗುತ್ತದೆ. ಹಾಗಾಗಿ “ಬಾನ ದಾರಿಯಲಿ” ಶೀರ್ಷಿಕೆ ಇಟ್ಟಿದ್ದೇವೆ. ಪ್ರೀತಂ ಗುಬ್ಬಿ ನಾನು ಮುಂಚಿನಿಂದ ಸ್ನೇಹಿತರು. ನಮ್ಮ ಕಾಂಬಿನೇಶನ್ ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ಈ ಚಿತ್ರ ಎಲ್ಲರ ಮನಸ್ಸಿಗೂ ಬಹಳ ಹತ್ತಿರವಾಗುತ್ತದೆ. ಕೀನ್ಯಾ, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಅಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ನಮ್ಮ ತಂತ್ರಜ್ಞರ ಶ್ರಮವನ್ನು ಮೆಚ್ಚಲೇಬೇಕು. ಚಿತ್ರದ ನಾಯಕಿಯರು, ರಂಗಾಯಣ ರಘು ಅವರು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. “ಬಾನ ದಾರಿಯಲಿ” ಸೆಪ್ಟೆಂಬರ್ 28 ರಂದು k R G ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌. ನೋಡಿ ಹಾರೈಸಿ ಎಂದರು.

ಈ ಚಿತ್ರದಲ್ಲಿ ನನ್ನದು ನಾಯಕಿಯ ತಂದೆಯ ಪಾತ್ರ. ಗಣೇಶ್ ಬಗ್ಗೆ ಹೇಳಬೇಕೆಂದರೆ, ನೀವು ಇಷ್ಟು ದಿನ ನೋಡಿರುವ ಗಣೇಶ್ ಬೇರೆ. ಈ ಚಿತ್ರದಲ್ಲಿ ನೋಡುವ ಗಣೇಶ್ ಬೇರೆ. ಅಂತಹ ವಿಭಿನ್ನ ಪಾತ್ರ ಎನ್ನಬಹುದು. ಕೀನ್ಯಾದಲ್ಲಿ ಚಿತ್ರೀಕರಣ ಮಾಡುವಾಗ ಬರುತ್ತಿದ್ದ ಪ್ರಾಣಿಗಳನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ ಎಂದು ರಂಗಾಯಣ ರಘು ತಿಳಿಸಿದರು.

ನಾನು ಲೀಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ನಾನು ಈ ಚಿತ್ರಕ್ಕಾಗಿ ಸರ್ಫಿಂಗ್ ಕಲಿತ್ತಿದ್ದೇನೆ ಎಂದರು ನಾಯಕಿ ರುಕ್ಮಿಣಿ ವಸಂತ್.

ಕಾದಂಬರಿ ನನ್ನ ಪಾತ್ರದ ಹೆಸರು. ‌ಈ ಚಿತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ ಎನ್ನುತ್ತಾರೆ ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ.

ಶ್ರೀವಾರಿ ಟಾಕೀಸ್ ಪರವಾಗಿ ಗೋಪಿ, ಸಂಭಾಷಣೆ ಬರೆದಿರುವ ಮಾಸ್ತಿ, ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ , ಆನಂದ್ ಆಡಿಯೋ ಶ್ಯಾಮ್ ಹಾಗೂ K R G ಸ್ಟುಡಿಯೋಸ್ ನ ಯೋಗಿ ಜಿ ರಾಜ್ ಮುಂತಾದವರು “ಬಾನ ದಾರಿಯಲಿ” ಚಿತ್ರದ ಕುರಿತು ಮಾತನಾಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!