ರಮೇಶ್ ಅರವಿಂದ್ ನೇತೃತ್ವದ ಹೊಸ ಧಾರಾವಾಹಿ “ಸುಂದರಿ”

ಜನೇವರಿ 11ರಿಂದ ಸೋಮವಾರದಿಂದ ಶನಿವಾರ ರಾತ್ರಿ 8ಕ್ಕೆ ಉದಯ ಟಿವಿ ಇಪ್ಪತ್ತೇಳನೇ ವಸಂತಕ್ಕೆ ಕಾಲಿಟ್ಟಿದ್ದು ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ.

ಕಸ್ತೂರಿ ನಿವಾಸ, ಸೇವಂತಿ, ಯಾರಿವಳು, ಆಕೃತಿ, ಹಾಗು ಮನಸಾರೆಯಂತಹ ಕೌಟುಂಬಿಕ ಧಾರಾವಾಹಿಗಳ ಜೊತೆಗೆ ಈಗ ಉದಯ ಟಿವಿ, ಹೊರಗೆ ಕಾಣುವ ದೇಹದ ಬಣ್ಣಕ್ಕಿಂತ ಮನಸ್ಸಿನ ಬಣ್ಣ ಮುಖ್ಯ ಎಂದು ಸಾರುವ “ಸುಂದರಿ” ಎಂಬ ಧಾರಾವಾಹಿಯನ್ನು ಹೊತ್ತು ತರುತ್ತಿದೆ.

ದಶಕದ ನಂತರ ಮತ್ತೆ ನಿಮ್ಮ ಮುಂದೆ ಬರ್ತಿರೋ ಈ ಸುಂದರಿ ಧಾರಾವಾಹಿಯು ಒಂದು ಪರಿಪೂರ್ಣ ಮನರಂಜನೆಯೆ ಜೊತೆಗೆ ಪರಿಶುದ್ಧ ಪ್ರೀತಿಯ ಸವಿಯನ್ನು ನಿಮ್ಮ ಮುಂದಿಡಲಿದೆ. ಹೊಸ ಕಲ್ಪನೆಯ ಜಗತ್ತಿನಲ್ಲಿ ಇಂದಿಗೂ ವರ್ಣಭೇದದ ವಿರುದ್ಧ ನಿಂತು ತನ್ನ ಕನಸಿನ ಹಾದಿಯನ್ನು ಹಿಂಬಾಲಿಸುವ ಕಥೆಯಾಗಿದ್ದು ನಾಯಕಿ ಸುಂದರಿ ಎಂಬ ಹುಡುಗಿಯ ಕರಾಳ ಕಾಲ್ಪನಿಕ ಕಥೆಯೇ ಸುಂದರಿ ಧಾರಾವಾಹಿ.

ಅಮ್ಮ, ಸುಂದರಿಯ ಮದುವೆ ಮಾಡುವ ಕನಸಿನ ನಡುವೆ ಐಎಎಸ್ ಅಧಿಕಾರಿಯಾಗಬೇಕೆನ್ನುವುದು ಇವಳ ಜೀವನದ ಮಹದಾಸೆ. ತನ್ನ ಜೀವನದ ಎಲ್ಲಾ ಏರಿಳಿತಗಳೊಂದಿಗೆ ತನ್ನ ಗುರಿಯನ್ನು ಸಾಧಿಸುವತ್ತ ಅವಳ ಪ್ರಯಾಣವು ಸಾಗುತ್ತದೆ.

ಹೊಸ ಹುರುಪಿನೊಂದಿಗೆ ʼಸ್ಲಿಂಗ್ ಶಾಟ್ʼ ನಿರ್ಮಾಣ ಸಂಸ್ಥೆಯಡಿ ರಮೇಶ್ ಅರವಿಂದ್ ನೇತೃತ್ವದಲ್ಲಿಈ ಧಾರಾವಾಹಿ ಮೂಡಿಬರುತ್ತಿದೆ. ಅನುಭವಿ ನಿರ್ದೇಶಕ ಗಣೇಶ್ ಶಾಸ್ತ್ರೀ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಈ ಹಿಂದೆ ಜನಪ್ರಿಯ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ನಿಪುಣ ಛಾಯಾಗ್ರಾಹಕ ಮನೋಹರ್ ಜೋಶಿ ಈ ತಂಡದಲ್ಲಿದ್ದಾರೆ. ಇನ್ನಷ್ಟು ನುರಿತ ತಂತ್ರಜ್ಞರನ್ನು ಒಳಗೊಂಡಿರುವ ಸುಂದರಿ ತಂಡವು ಜಬರ್ದಸ್ತ್ ಮನರಂಜನೆ ನೀಡುವ ಭರವಸೆಯಲ್ಲಿದೆ.

ನಾಯಕಿ ಸುಂದರಿ ಪಾತ್ರವನ್ನು ಹೆಸರಾಂತ ಪ್ರತಿಭೆ ಐಶ್ವರ್ಯಾ, ಕಥಾನಾಯಕ ಪಾತ್ರವನ್ನು ಸಮೀಪ್ ನಿರ್ವಹಿಸುತ್ತಿದ್ದಾರೆ. ಅಲ್ಲದೇ ನಂದಿನಿ ಧಾರಾವಾಹಿಯಲ್ಲಿ ಹೆಸರುವಾಸಿಯಾದ ನಟಿ ಕಾವ್ಯಾಶಾಸ್ತ್ರಿ,,ಹೆಸರಾಂತ ನಟ ಶ್ರೀಕಾಂತ ಹೆಬ್ಳೇಕರ್ ಸುಂದರಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ಸುಂದರಿ” ಇದೇ ಜನೇವರಿ 11ರಿಂದ ರಾತ್ರಿ 8ಕ್ಕೆ ಪ್ರತಿದಿನ ಸೋಮವಾರದಿಂದ ಶನಿವಾರ ಉದಯ ಟಿಯಲ್ಲಿ ಪ್ರಸಾರವಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!