ಭಾರೀ ಸಂಚಲನ ಉಂಟು ಮಾಡಿದ್ದ ಚಿತ್ರನಟ ದರ್ಶನ್ ಅವರ ಮ್ಯಾನೇಜರ್ ಮಲ್ಲಿಕಾರ್ಜುನ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದಿದ್ದು, ಸ್ವತಃ ಮಲ್ಲಿಕಾರ್ಜುನ ಮಾಧ್ಯಮಗಳ ಮುಂದೆ ಹಾಜರಾಗಿ ಅಚ್ಚರಿ ಉಂಟು ಮಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾದ ನಂತರ ಕೆಲವು ವರ್ಷಗಳಿಂದ ನಾಪತ್ತೆ ಆಗಿದ್ದ ಮ್ಯಾನೇಜರ್ ಮಲ್ಲಿಕಾರ್ಜುನ ಅವರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಗಳು ಕೇಳಿ ಬಂದಿದ್ದವು. ಈಗ ಮಲ್ಲಿಕಾರ್ಜುನ ಅವರು ಪ್ರತ್ಯಕ್ಷ ಆಗುವ ಮೂಲಕ ಈ ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ.
ಇಂಜಿನಿಯರ್ ಶಿಕ್ಷಣ ಪಡೆದ ಬಳಿಕ ನಿರ್ದೇಶಕನಾಗಿದ್ದ ಮಲ್ಲಿಕಾರ್ಜುನ ದರ್ಶನವರ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅಲ್ಲದೆ ಹೋಟೆಲ್ ಉದ್ಯಮದಲ್ಲಿ ಕೂಡ ಕೆಲಸ ಮಾಡಿದರೂ ಯಶಸ್ವಿ ಆಗಲಿಲ್ಲ. ಸಾಲ ಭಾದೆಯಿಂದ ತೀವ್ರ ನಿರಾಶೆಗೆ ಒಳಗಾಗಿ ಸಾಯುವ ನಿರ್ಧಾರಕ್ಕೆ ಬಂದಿದ್ದೆ. ಆನಂತರ ನಿರ್ಧಾರದಿಂದ ಹಿಂದೆ ಸರಿದು ಹಲವು ನಗರಗಳಿಗೆ ತೆರಳಿ ಜೀವನ ನಿರ್ವಹಣೆ ಮಾಡುವ ಯತ್ನ ಕಾಡಿದೆ ಎಂದು ಅವರು ಹೇಳಿದ್ದಾರೆ.
ನಾನು ಬದುಕಿದ್ದಾಗಿ ಪತ್ನಿ ಮತ್ತು ತಾಯಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ತಂದೆ ತಾಯಿ ಮೃತಪಟ್ಟಾಗ ಅವರ ಅಂತ್ಯಕ್ರಿಯೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಶನಿ ದೋಷ ಮುಗಿದ ನಂತರ ಸತ್ಯ ಒಪ್ಪಿಕೊಳ್ಳಬೇಕು ಎಂಬ ಭಾವನೆ ಮೂಡಿ ಈಗ ಮರಳಿದ್ದೇನೆ ಎಂದರು.
ದರ್ಶನ್ ಅವರಿಂದ ಒಂದು ಕೋಟಿ ರೂಪಾಯಿ ಸಾಲ ಪಡೆದಿದ್ದೇನೆ. ಮತ್ತೆ ಅವರಿಂದ ಸಾಲ ಕೇಳಲು ಮನಸಾಗಲಿಲ್ಲ. ನಾನು ಎಲ್ಲಿದ್ದೇನೆ ಎಂದು ಅವರಿಗೆ ಗೊತ್ತಿರಲಿಲ್ಲ. ತೂಗುದೀಪ ಪ್ರೊಡಕ್ಷನ್ ಅನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ದರ್ಶನ್ ಅವರ ಮೇಲಿನ ಗೌರವದಿಂದ ಅವರನ್ನು ಎದುರಿಸಲು ಸಾಧ್ಯವಾಗದೆ ಊರು ಬಿಟ್ಟು ಹೋಗುವಂತೆ ಮಾಡಿತು ಎಂದು ಹೇಳಿದ್ದಾರೆ.
ಸಾಲ ನೀಡಿದವರನ್ನು ಭೇಟಿಯಾಗಿ ಸೋತಿದ್ದೇನೆ, ಆದರೆ ಸತ್ತಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಜೀವನಕ್ಕೆ ಮರಳಿ ಕೆಲಸ ಆರಂಭಿಸುವುದಾಗಿ ಹೇಳಿದ್ದಾರೆ.
ನಾಪತ್ತೆ ಪ್ರಕರಣದ ಬಗ್ಗೆ ಅಗತ್ಯವಿದ್ದರೆ ತನಿಖೆಗೆ ಸಹಕರಿಸುವುದಾಗಿ ಅವರು ಹೇಳಿದ್ದಾರೆ.
ದಿಢೀರ್ ಮಲ್ಲಿಕಾರ್ಜುನ ಅವರು ಸಾರ್ವಜನಿಕವಾಗಿ ಪ್ರತ್ಯಕ್ಷವಾಗಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ.





Be the first to comment