ಭಾರತೀಯ ಚಿತ್ರರಂಗದಲ್ಲಿ ಸದ್ಯ ಭಾರೀ ಕುತೂಹಲ ಕೆರಳಿಸಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ನಾಗಬಂಧಂ’ ನಿರ್ಮಾಣದ ಹಂತದಲ್ಲಿಯೇ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸುತ್ತಿದೆ. ಖ್ಯಾತ ನಿರ್ದೇಶಕ ಅಭಿಷೇಕ್ ನಾಮಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಎನ್.ಐ.ಕೆ ಸ್ಟುಡಿಯೋಸ್ ಲಾಂಛನದಡಿಯಲ್ಲಿ ಕಿಶೋರ್ ಅನ್ನಪೂರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ನಿರ್ಮಿಸುತ್ತಿದ್ದಾರೆ. ಭಾರತೀಯ ಸಿನಿಮಾದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಗುರಿ ಹೊಂದಿರುವ ಈ ಚಿತ್ರವು, ತನ್ನ ವಿಶಿಷ್ಟ ಕಥಾಹಂದರ ಹಾಗೂ ತಾಂತ್ರಿಕ ಶ್ರೀಮಂತಿಕೆಯಿಂದ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ.
ಈ ಸಿನಿಮಾದ ಮಹತ್ವದ ಮೈಲಿಗಲ್ಲಾಗಿ, ಚಿತ್ರದ ಮೊದಲ ಸಿಂಗಲ್ ಹಾಡು ‘ನಮೋ ರೇ’ ಇದೇ ಮಾರ್ಚ್ 15 ರಂದು ಬೆಳಗ್ಗೆ 11:11 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಭಗವಾನ್ ಶ್ರೀಮನ್ನಾರಾಯಣನಿಗೆ ಭಕ್ತಿಯ ಸಮರ್ಪಣೆಯಾಗಿ ಮೂಡಿಬಂದಿರುವ ಈ ಗೀತೆಯು ಚಿತ್ರದ ಆಳವಾದ ಆಧ್ಯಾತ್ಮಿಕ ಸತ್ವವನ್ನು ಪ್ರತಿಬಿಂಬಿಸುತ್ತದೆ. ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಈ ಹಾಡು ಪ್ರೇಕ್ಷಕರಲ್ಲಿ ದೈವಿಕ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಲಿದೆ ಎಂದೇ ಹೇಳಬಹುದು.
‘ನಮೋ ರೇ’ ಗೀತೆಯ ಅತಿದೊಡ್ಡ ಹೈಲೈಟ್ ಎಂದರೆ, ಇದರಲ್ಲಿ ಸುಮಾರು 1,000 ನೃತ್ಯ ಕಲಾವಿದರು ಭಾಗವಹಿಸಿರುವುದು. ಭಾರತದ ವಿವಿಧ ನೃತ್ಯ ಪ್ರಕಾರಗಳ ವೈವಿಧ್ಯತೆ ಮತ್ತು ಏಕತೆಯನ್ನು ಸಾರುವ ಸಲುವಾಗಿ ಈ ಬೃಹತ್ ನೃತ್ಯ ಸಂಯೋಜನೆಯನ್ನು ಮಾಡಲಾಗಿದೆ. ಖ್ಯಾತ ನೃತ್ಯ ಸಂಯೋಜಕರಾದ ಗಣೇಶ್ ಆಚಾರ್ಯ ಮತ್ತು ಸೃಷ್ಟಿ ವರ್ಮಾ ಅವರ ಉಸ್ತುವಾರಿಯಲ್ಲಿ ಮೂಡಿಬಂದಿರುವ ಈ ಅದ್ಭುತ ನೃತ್ಯ ಪ್ರದರ್ಶನವು ಪ್ರೇಕ್ಷಕರ ಕಣ್ಣಿಗೆ ಹಬ್ಬದಂತಹ ಮತ್ತು ಎಂದಿಗೂ ಮರೆಯಲಾಗದ ದೃಶ್ಯ ವೈಭವವನ್ನು ಉಣಬಡಿಸಲಿದೆ.
ಸಂಗೀತದ ವಿಷಯಕ್ಕೆ ಬಂದರೆ, ಪ್ರತಿಭಾವಂತ ಜೋಡಿ ಜುನೈದ್ ಕುಮಾರ್ ಮತ್ತು ಅಭೆ ಅವರು ಈ ಹಾಡಿಗೆ ಭಕ್ತಿ ಮತ್ತು ಆಧ್ಯಾತ್ಮ ಮೇಳೈಸಿದ ಸುಮಧುರ ಸಂಗೀತ ನೀಡಿದ್ದಾರೆ. ಮಾಧುರಿ ಶೇಷಾದ್ರಿ ಅವರು ಬರೆದಿರುವ ಸ್ಫೂರ್ತಿದಾಯಕ ಸಾಹಿತ್ಯವು ಹಾಡಿನ ಆತ್ಮದಂತೆ ಕೆಲಸ ಮಾಡಿದ್ದರೆ, ಖ್ಯಾತ ಗಾಯಕಿ ಸಿಂಧೂಜಾ ಶ್ರೀನಿವಾಸನ್ ತಮ್ಮ ಶಕ್ತಿಯುತ ಕಂಠದಾನದ ಮೂಲಕ ಈ ಗೀತೆಗೆ ಜೀವ ತುಂಬಿದ್ದಾರೆ. ಈ ಹಾಡು ಕೇಳುಗರನ್ನು ಒಂದು ದೈವಿಕ ಲೋಕಕ್ಕೆ ಕರೆದೊಯ್ಯುವ ಭರವಸೆಯನ್ನು ಚಿತ್ರತಂಡ ನೀಡಿದೆ.
ತಾಂತ್ರಿಕವಾಗಿಯೂ ‘ನಾಗಬಂಧಂ’ ಅತ್ಯಂತ ಬಲಿಷ್ಠವಾದ ತಂಡವನ್ನು ಹೊಂದಿದೆ. ಸೌಂದರ್ ರಾಜನ್ ಎಸ್ ಅವರ ಅಮೋಘ ಛಾಯಾಗ್ರಹಣ ಹಾಗೂ ಆರ್.ಸಿ ಪ್ರಣವ್ ಅವರ ಚುರುಕಾದ ಸಂಕಲನ ಕಾರ್ಯವು ಚಿತ್ರದ ಸಿನಿಮಾಟೋಗ್ರಫಿಗೆ ಹೊಸ ಆಯಾಮ ನೀಡಿದೆ. ಕಲಾ ನಿರ್ದೇಶಕ ಅಶೋಕ್ ಕುಮಾರ್ ಅವರು ಈ ಕಥೆಗೆ ಪೂರಕವಾದ ಅದ್ಧೂರಿ ಮತ್ತು ಕಲಾತ್ಮಕ ಲೋಕವನ್ನೇ ಸೃಷ್ಟಿಸಿದ್ದು, ನಿರ್ಮಾಣ ವಿನ್ಯಾಸದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಪ್ರತಿಯೊಂದು ಅಂಶವೂ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಪೂರಕವಾಗಿವೆ.





Be the first to comment