ಸನಾತನ ಕಾಲದಿಂದಲೂ ಗಾದೆ ಎಂದಿಗೂ ಸುಳ್ಳಾಗಿಲ್ಲ. ಈ ಪೈಕಿ ಹೊಸಬರ ತಂಡವೊಂದು ’ವಿನಾಶ ಕಾಲೆ ವಿಪರೀತ ಬುದ್ದಿ’ ಗಾದೆಯಲ್ಲಿ ಬರುವ ’ವಿನಾಶ ಕಾಲೆ’ ಎಂಬ ಎರಡು ಪದಗಳನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದೆ. ಗಣರಾಜ್ಯೋತ್ಸವ ದಿನದಂದು ರಾಜಾಜಿನಗರದ ಕೈಗಾರಿಕಾ ಕೇಂದ್ರದಲ್ಲಿರುವ ’ಮದ್ದುರಮ್ಮ ದೇವಿ ಮತ್ತು ಯಲ್ಲಮ್ಮ ದೇವಿ’ ಅಮ್ಮನ ಸನ್ನಿದಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು.
ಮಾಜಿ ಅಧ್ಯಕ್ಷರಾದ ಬಾ.ಮ.ಹರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ಡಾಗ್ ಸತೀಶ್, ಮಲ್ಲಮ್ಮ, ಕರಿಬಸಪ್ಪ ಹಾಜರಿದ್ದರು. ಶಕ್ತಿ ಫಿಲಿಂಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ತುಮಕೂರು ಮೂಲದ ಎಸ್.ಕಿರಣ್ಕುಮಾರ್ ಕಳೆದ ಐದು ವರ್ಷಗಳಿಂದ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡು ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ತಾರಾಗಣದಲ್ಲಿ ಪಾವನಿಸಿರಿ, ರಿಷಿಕಗೌಡ, ವೈಷ್ಣವಿ, ಶ್ರೀನಿಧಿ, ರಚನಾ. ಉಳಿದಂತೆ ಮಾಂತ್ರಿಕಳಾಗಿ ಶೋಭ, ಅಘೋರಿಯಾಗಿ ಮಂಡ್ಯಸಿದ್ದು, ಬಿಗ್ ಬಾಸ್ ಮಲ್ಲಮ್ಮ, ಪ್ರವಲಿಕ, ದಿಶಾ ಮುಂತಾದವರು ನಟಿಸುತ್ತಿದ್ದಾರೆ. ಐದು ಹುಡುಗಿಯರು ಆಯ್ಕೆಯಾಗಿದ್ದು, ಮಿಕ್ಕಂತೆ ಹುಡುಗರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆ. ಮಾರ್ಚ್ ತಿಂಗಳಿಂದ ಮೂವತ್ತು ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ.

ಮೂರು ಹಾಡುಗಳಿಗೆ ಸಾಹಿತ್ಯ-ಸಂಗೀತ ಮಂಜುಕವಿ, ಛಾಯಾಗ್ರಹಣ ವಿನಯ್ಗೌಡ, ಸಂಕಲನ ಜೀವನ್, ಹಿನ್ನಲೆ ಶಬ್ದ ವಿನುಮನಸು, ನೃತ್ಯ ಜಗ್ಗು-ಬಾಲು, ಪ್ರಚಾರಕಲೆ ದೇವು ಅವರದಾಗಿದೆ.
ಪೂಜೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಿರ್ದೇಶಕರು, ಇದು ಅಗಲಿದ ಗೆಳಯನ ಜೀವನದಲ್ಲಿ ನಡೆದಂತ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ಅಳವಡಿಸಿದ್ದೇನೆ. ಕಡಿಮೆ ಅವದಿಯಲ್ಲಿ ದುಡ್ಡು ಮಾಡಬೇಕೆಂಬ ದುರಾಸೆಯಿಂದ ದೈವ ಸಂಬಂದಕ್ಕೆ ಕೈ ಹಾಕಿದರೆ ಏನೇನು ಅನಾಹುತಗಳು ನಡೆಯುತ್ತದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಐದು ಹುಡುಗರು ಮತ್ತು ಹುಡುಗಿಯರು ಉದ್ಯೋಗ ಅರಸಿಕೊಂಡು ಸಿಟಿ ಬರುತ್ತಾರೆ. ಕಡಿಮೆ ಸಂಬಳ ಸಾಕಾಗುತ್ತಿರುವುದಿಲ್ಲ.
ಇದರಿಂದ ದಿಡೀರ್ ಶ್ರೀಮಂತರಾಗಲು ಕೆಟ್ಟ ಹಾದಿಗೆ ಹೋಗುತ್ತಾರೆ. ಆಗ ಮುಂದಾಗ ಬಹುದಾದ ಘಟನೆಗಳಿಂದ ಯಾವ ರೀತಿ ತತ್ತರಿಸಿ ಹೋಗುತ್ತಾರೆ ಎಂಬುದನ್ನು ಹಾರರ್ ಥ್ರಿಲ್ಲರ್ ಮಾದರಿಯಲ್ಲಿ ಹಾಗೂ ಧಾರ್ಮಿಕತೆಯ ನೆರಳಲ್ಲಿ ತೋರಿಸಲಾಗುತ್ತಿದೆ. ಒಂದು ಹಂತದಲ್ಲಿ ಅಘೋರಿ, ಮಾಂತ್ರಿಕನ ಸನ್ನಿವೇಶ ತೆರೆದುಕೊಳ್ಳುತ್ತದೆ ಎಂದು ಕಿರಣ್ಕುಮಾರ್.ಎಸ್ ಮಾಹಿತಿ ಬಿಚ್ಚಿಟ್ಟರು.






Be the first to comment