ಕನಸೊಂದು ಶುರುವಾಗಿದೆ

ಮಾರ್ಚ್ 7ಕ್ಕೆ ‘ಕನಸೊಂದು ಶುರುವಾಗಿದೆ’ ಚಿತ್ರ ರಿಲೀಸ್

ಸಹಾರಾ ಸಿನಿಮಾ ಮೂಲಕ ಚಂದವನಕ್ಕೆ ಹೆಜ್ಜೆ ಇಟ್ಟಿದ್ದ ನಿರ್ದೇಶಕ ಮಂಜೇಶ್ ಈಗ ಕನಸೊಂದು ಶುರುವಾಗಿದೆ ಚಿತ್ರದ ಮೂಲಕ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ರೆಡಿಯಾಗಿದ್ದಾರೆ. ಮಾರ್ಚ್ 7ರಂದು ತೆರೆಗೆ ಬರುತಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ನಿನ್ನೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಟರಾದ ಡಾರ್ಲಿಂಗ್ ಕೃಷ್ಣ, ಲೂಸ್ ಮಾದಯೋಗಿ, ಸಾಹಸ ನಿರ್ದೇಶಕರ ಥ್ರಿಲರ್ ಮಂಜು ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ತಂಡಕ್ಕೆ ಸಾಥ್ ಕೊಟ್ಟರು.

ಡಾರ್ಲಿಂಗ್ ಕೃಷ್ಣ ಮಾತನಾಡಿ, ಟೈಟಲ್ ತುಂಬಾ ಇಷ್ಟವಾಯ್ತು. ‘ಕ’ ಡಿಸೈನ್ ಮಾಡಿರುವ ರೀತಿ ತುಂಬಾ ಚೆನ್ನಾಗಿದೆ. ಮಂಜೇಶ್ ಅವರಿಗೆ ಒಳ್ಳೆಯದಾಗಲಿ. ಇದು ಅವರ ಎರಡನೇ ಚಿತ್ರ. ಇನ್ನೂ ಹೆಚ್ಚು ಒಳ್ಳೆ ಸಿನಿಮಾ ಮಾಡಲಿ . ನಿರ್ಮಾಪಕರಿಗೂ ಕೂಡ ಒಳ್ಳೆದಾಗಲಿ. ಸಂತು ಲೀಡ್ ಆಕ್ಟಿಂಗ್ ಮಾಡಿದ್ದಾರೆ. ಇದು ದೊಡ್ಡ ಜವಾಬ್ದಾರಿ. ಸಿನಿಮಾ ನಿಲ್ಲಿಸುವುದು ಕಷ್ಟದ ಕೆಲಸ. ಮಾರ್ಚ್ 7ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿಯೇ ಕನಸೊಂದು ಶುರುವಾಗಿದೆ ಸಿನಿಮಾವನ್ನು ನೋಡಿ ಹಾರೈಸಿ ಎಂದು ತಿಳಿಸಿದರು.

ನಟ ಲೂಸ್ ಮಾದಯೋಗಿ ಮಾತನಾಡಿ, ಇಡೀ ಚಿತ್ರತಂಡಕ್ಕೆ ಒಳ್ಳೆದಾಗ್ಲಿ. ಚಿಕ್ಕ ಸಿನಿಮಾ ದೊಡ್ಡ ಸಿನಿಮಾ ಮ್ಯಾಟರ್ ಅಲ್ಲ. ಜನ ನೋಡಬೇಕು. ಚಿಕ್ಕದೋ? ದೊಡ್ಡದೋ? ಅವರು ಡಿಸೈಡ್ ಮಾಡ್ತಾರೆ. ಇವತ್ತಿನ ಪರಿಸ್ಥಿತಿಗೆ ಸಿನಿಮಾ ಮಾಡೋದುವುದು ಸುಲಭ. ಆದರೆ ಅದನ್ನು ತಲುಪಿಸುವುದು ಕಷ್ಟ. ಅದೊಂದು ಫೋಕಸ್ ಆಗಿ ಮಾಡಿ. ಜನರಿಗೆ ರೀಚ್ ಆದರೆ ಸಾಕು. ಆ ಕೆಲಸ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿರ್ದೇಶಕರಾದ ಮಂಜೇಶ್ ಭಾಗವತ್ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ಚಿಕ್ಕ ಕಥೆಯಿಂದ ಶುರುವಾದ ಜರ್ನಿ ಇದು. ಅಂದುಕೊಂಡ ಬಜೆಟ್ ಗಿಂತ ಸ್ವಲ್ಪ ಜಾಸ್ತಿ ಬಜೆಟ್ ಆಯ್ತು. ನಿರ್ಮಾಪಕರು ಕೂಡ ಸಾಥ್ ಕೊಟ್ಟರು. ಕನಸೊಂದು ಶುರುವಾಗಿದೆ ಎಂದರೆ ಅಪ್ಪು ಸರ್ ನೆನಪು ಬರ್ತಾರೆ. ಅವರ ಸಿನಿಮಾದ ಹಾಡಿನಲ್ಲಿ ಬರುವ ಲೈನ್ ಇಟ್ಕೊಂಡು ಟೈಟಲ್ ಇಟ್ಟಿದ್ದೇವೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವೀ. ನೈಜ ಘಟನೆ ಇಟ್ಕೊಂಡು ಸಿನಿಮಾ ಮಾಡಲಾಗಿದೆ ಎಂದು ಹೇಳಿದರು.

ಕನಸೊಂದು ಶುರುವಾಗಿದೆ

KKR ಮೀಡಿಯಾ ಬ್ಯಾನರ್ ನಡಿ ಲಕ್ಷ್ಮೀ ಕಾಂತ್ ರೆಡ್ಡಿ ನಿರ್ಮಿಸಿರುವ ‘ಕನಸೊಂದು ಶುರುವಾಗಿದೆ’ ಚಿತ್ರದ ಮೂಲಕ ಸಂತೋಷ್ ಬಿಲ್ಲವ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಜೋಡಿಯಾಗಿ ನಟಿ ಸಾತ್ವಿಕಾ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಮಂಜು, ಕುರಿ ಸುನಿಲ್ , ರಶ್ಮಿ, ರಾಜು ಕಾಲ್ಕುಣಿ, ಕೃಷ್ಣಮೂರ್ತಿ ಕನಕಪುರ, ನಾಗರತ್ನ ಭಟ್ ತಾರಾಬಳಗದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಕನಸೊಂದು ಶುರುವಾಗಿದೆ ಚಿತ್ರವನ್ನು ಬೆಂಗಳೂರು, ಕುಂದಾಪುರ & ಕುಣಿಗಲ್ ಸುತ್ತಮುತ್ತಲ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಮಂಜೇಶ್ ಭಾಗವತ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಲೋಕೇಂದ್ರ ಸೂರ್ಯ ಕ್ಯಾಮೆರಾ ಹಿಡಿದಿದ್ದು, ಸೂರಜ್ ಜೋಯಿಸ್ ಸಂಗೀತ, ದೀಪಕ್ ಸಿಎಸ್ ಗೌಡ ಸಂಕಲನ ಜವಾಬ್ದಾರಿ ನಿಭಾಯಿಸಿದ್ದಾರೆ. ಶಶಾಂಕ್, ಸಿಂಪಲ್ ಸುನಿ & ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸೋನು ನಿಗಂ, ರಾಜೇಶ್ ಕೃಷ್ಣನ್ ಹಾಗೂ ವಾಸುಕಿ ವೈಭವ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮಾಚ್ 7ಕ್ಕೆ ಧೀರಜ್ ರಾಜ್ಯಾದ್ಯಂತ ಕನಸೊಂದು ಶುರುವಾಗಿದೆ ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!