ಕೇದಾರ್ ನಾಥ್ ಕುರಿಫಾರಂ

‘ಕೇದಾರ್ ನಾಥ್ ಕುರಿಫಾರಂ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ

ಜೆ.ಕೆ.ಮೂವೀಸ್ ಲಾಂಛನದಲ್ಲಿ ಕೆ.ಎಂ ನಟರಾಜ್ ಅವರು ನಿರ್ಮಿಸಿರುವ, ಶೀನು ಸಾಗರ್ ನಿರ್ದೇಶನದಲ್ಲಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ‘ಕೇದಾರ್ ನಾಥ್ ಕುರಿಫಾರಂ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕಣ್ಣೂರ್ ಜಗದೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಿಡುಗಡೆ ಸಮಾರಂಭದ ನಂತರ ಚಿತ್ರತಂಡದ ಮಾತನಾಡಿದರು.

ನಾನು ‘ದುನಿಯಾ’ ಸೂರಿ ಅವರ ನಿರ್ದೇಶನದ ಚಿತ್ರಗಳಲ್ಲಿ ನಟನಾಗಿ ಹಾಗೂ ಸಹಾಯಕ ನಿರ್ದೇಶಕನಾಗಿ ಗುರುತಿಸುಕೊಂಡಿದ್ದೆ. ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಬಳಿ ಛಾಯಾಗ್ರಹಣ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದೆ. ನಿರ್ದೇಶಕನಾಗಿ ಇದು ಎರಡನೇ ಚಿತ್ರ. ನಾನು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನ ರಾಜೇಶ್ ಸಾಲುಂಡಿ ಅವರದು. ಇದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ‌. ಕಾಮಿಡಿ ಥ್ರಿಲ್ಲರ್ ಜಾನರ್ ನ ಕಥಾ ಹಂದರ ಹೊಂದಿರುವ ಈ ಚಿತ್ರ ನೂರು ರೂಪಾಯಿ ಕೊಟ್ಟು ಟಿಕೆಟ್ ಪಡೆದ ಪ್ರೇಕ್ಷಕನಿಗೆ ಯಾವುದೇ ರೀತಿಯ ಬೇಸರ ಮಾಡದೆ ಮನೋರಂಜನೆಯ ಮಹಾಪೂರವನ್ನೇ ಹರಿಸುತ್ತದೆ. ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿದ್ದ ಮಡೆನೂರ್ ಮನು ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಿರ್ಮಾಪಕ ಕೆ.ಎಂ. ನಟರಾಜ್ ಈ ಚಿತ್ರವನ್ನು ಆಗಸ್ಟ್ 30 ರಂದು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ ಎಂದು ನಿರ್ದೇಶಕ ಶೀನು ಸಾಗರ್ ತಿಳಿಸಿದರು.

ಕೇದಾರ್ ನಾಥ್ ಕುರಿಫಾರಂ

‘ಕಾಲೇಜ್ ಕುಮಾರ’, ‘ಜಾನ್ ಜಾನಿ ಜನಾರ್ದನ್’ ಚಿತ್ರಗಳಿಗೆ ಸಹ ನಿರ್ಮಾಪಕನಾಗಿದ್ದೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ನಾಯಕಿಯ ತಂದೆಯ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ನಟರಾಜ್.

‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ನ ನಂತರ ನಾನು ನಟಿಸಿರುವ ಮೊದಲ ಚಿತ್ರವಿದು. ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಮನೋರಂಜನೆಗೆ ಬರವಿಲ್ಲ. ಮಂಜು ನನ್ನ ಪಾತ್ರದ ಹೆಸರು ಎಂದು ಮಡೆನೂರ್ ಮನು ತಿಳಿಸಿದರು.

ನಾಯಕಿ ಶಿವಾನಿ ಹಾಗೂ ನಟ ಮುತ್ತು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನೃತ್ಯ ನಿರ್ದೇಶಕ ನಾಗಭೂಷಣ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!