ಆಗಸ್ಟ್ 15ರಂದು ‘ಭೈರತಿ ರಣಗಲ್’ ಬಿಡುಗಡೆ

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ಭೈರತಿ ರಣಗಲ್ ‘ ಚಿತ್ರ ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆ ದಿವಸ ಬಿಡುಗಡೆಯಾಗುತ್ತಿದೆ.

ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿರುವ, ನರ್ತನ್ ನಿರ್ದೇಶನದ ‘ಭೈರತಿ ರಣಗಲ್ ‘ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಸಿನಿಮಾದ ಬಗ್ಗೆ ಮಾತನಾಡಿದ ಶಿವಣ್ಣ, ‘ಭೈರತಿ ರಣಗಲ್‍’ ಚಿತ್ರ ಆರು ವರ್ಷಗಳ ಹಿಂದೆ ಬಿಡುಗಡೆಯಾದ ‘ಮಫ್ತಿ’ ಚಿತ್ರದ ಪ್ರೀಕ್ವೆಲ್‍ ಎಂದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಮಫ್ತಿ ಚಿತ್ರ ಮಾಡುವಾಗ ಈ ಚಿತ್ರದಲ್ಲಿ ನಟಿಸಬೇಕಾ ಎಂಬ ಗೊಂದಲ ನನ್ನಗಿತ್ತು. ಆ ಚಿತ್ರದಲ್ಲಿ ನನ್ನ ಪಾತ್ರ ಬರುವುದೇ ಇಂಟರ್‌ ವಲ್ ನಂತರ. ಶ್ರೀಮುರಳಿ ಈ ಚಿತ್ರದಲ್ಲಿ ಇನ್ನೊಂದು ಪಾತ್ರವನ್ನು ಮಾಡುತ್ತಿದ್ದರು. ಮುರಳಿ ನನ್ನ ಮಾವನ ಮಗ. ಇಲ್ಲ ಎನ್ನುವಂತೆಯೂ ಇರಲಿಲ್ಲ. ಹಾಗಿರುವಾಗ, ಏನು ಮಾಡುವುದು ಎಂಬ ಪ್ರಶ್ನೆ ಇದ್ದೇ ಇತ್ತು. ಆ ಸಂದರ್ಭದಲ್ಲಿ ನಿರ್ದೇಶಕ ನರ್ತನ್ ಬಂದು ನೀವು ಈ ಪಾತ್ರ ಮಾಡಿ ಎಂದರು. ನನಗೊಂದು ಧೈರ್ಯ ಬಂತು. ಆನಂತರ “ಮಫ್ತಿ” ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ” ಎಂದರು.

ನಿರ್ದೇಶಕ ನರ್ತನ್‍, ”ಮಫ್ತಿ ಚಿತ್ರ ಮಾಡುವಾಗಲೇ  ಆ ಪಾತ್ರದ ತೂಕ ಹೆಚ್ಚಿತ್ತು. ಚಿತ್ರ ನೋಡಿದಾಗ ಜನರಿಗೆ ಸಾಕಾಗಲಿಲ್ಲ. ಶಿವಣ್ಣ ಅವರ ಪಾತ್ರ ಇಂಟರ್‍ವೆಲ್‍ ನಂತರ ಬರುತ್ತದೆ. ಈ ಪಾತ್ರವನ್ನು ಇಷ್ಟಕ್ಕೇ ಮುಗಿಸಬಾರದು. ಇದರ ಹಿನ್ನೆಲೆ ಏನಾದರೂ ಬರೆಯಬೇಕು ಎಂದಾಗ ರಣಗಲ್‍ ಹಿಂದಿನ ಕಥೆ ಸೃಷ್ಟಿಯಾಯಿತು. ಪೆನ್‍ ಹಿಡಿದಾಗ ಬಹಳ ಸಲೀಸಾಗಿ ಕಥೆ ಸೃಷ್ಟಿಯಾಯಿತು. ಭೈರತಿ ರಣಗಲ್‍ ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲಾಕ್‍ ಡ್ರೆಸ್‍ ಯಾಕೆ ಹಾಕುತ್ತಾರೆ ಎನ್ನುವುದೇ ಚಿತ್ರದ ಕಥೆ. ಈಗಾಗಲೇ 70 ರಷ್ಟು ಚಿತ್ರ ಮುಗಿದಿದೆ. ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ” ಎಂದರು.

”ಆಗಸ್ಟ್ ನಲ್ಲಿ ಸಾಲುಸಾಲು ರಜೆಗಳಿದೆ. ಸಾಮಾನ್ಯವಾಗಿ ಸತತವಾಗಿ ರಜೆ ಸಿಕ್ಕರೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ದೃಷ್ಟಿಯಿಂದ ಆಗಸ್ಟ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ” ಎಂದು ನಿರ್ಮಾಪಕಿ ಗೀತಾ ಶಿವರಾಜಕುಮಾರ್ ತಿಳಿಸಿದರು.

ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍ , ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ. “ಭೈರತಿ ರಣಗಲ್” ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತವಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!