“ಪ್ರೇಮಪೂಜ್ಯಂ” ಖ್ಯಾತಿಯ ಬೃಂದಾ ಆಚಾರ್ಯ ಅಭಿನಯದ ಈ ಚಿತ್ರ ಫೆಬ್ರವರಿ 24 ರಂದು ಬಿಡುಗಡೆ

ಪಶ್ಚಿಮಘಟ್ಟಗಳ ಕಾಡಿನ ನಡುವೆ ಸಾಗಿದೆ “ಜೂಲಿಯೆಟ್ 2” ಜರ್ನಿ.

ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಉತ್ತಮ ಕಂಟೆಂಟ್ ವುಳ್ಳ “ಜೂಲಿಯೆಟ್‌ 2” ಚಿತ್ರ ಸಹ ಫೆಬ್ರವರಿ 24ರಂದು ಬಿಡುಗಡೆಯಾಗುತ್ತಿದೆ. “ಪ್ರೇಮಪೂಜ್ಯಂ” ಚಿತ್ರದ ಖ್ಯಾತಿಯ ಬೃಂದಾ ಆಚಾರ್ಯ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

“ಜೂಲಿಯೆಟ್ 2” ಮಹಿಳಾ ಪ್ರಧಾನ ಚಿತ್ರ. ತೊಂದರೆಗೆ ಸಿಲುಕಿದ ಹೆಣ್ಣುಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ? ಎಂಬುದು ಪ್ರಮುಖ ಕಥಾಹಂದರ. ಸಾಮಾನ್ಯವಾಗಿ “ಜೂಲಿಯೆಟ್‌” ಎಂದ ತಕ್ಷಣ ಪ್ರೇಮಕಥೆ ಅಂದುಕೊಳ್ಳುವುದು ವಾಡಿಕೆ. ಆದರೆ ಇದು ಲವ್ ಸ್ಟೋರಿ ಅಲ್ಲ‌. ಇಲ್ಲಿ ರೋಮಿಯೋ ಇರುವುದಿಲ್ಲ.
ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ. ಎಂಬುದನ್ನು ಸಿನಿಮಾ ಮೂಲಕ ಹೇಳ ಹೊರಟ್ಟಿದ್ದೇವೆ. ಹಾಡುಗಳು ಹಾಗೂ ಟ್ರೇಲರ್ ಮೂಲಕ ನಮ್ಮ ಚಿತ್ರ ಜನರ ಮನ ತಲುಪಿದೆ. ಅಪ್ಪ – ಮಗಳ ಬಾಂಧವ್ಯದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ಬೆಳ್ತಂಗಡಿ ಬಳಿಯ ಪಶ್ಚಿಮಘಟ್ಟದ ಕಾಡೊಂದರಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ ಇದು ನನ್ನ ಪ್ರಥಮ ಚಿತ್ರ. ನೋಡಿ ಹಾರೈಸಿ ಎಂದರು ನಿರ್ದೇಶಕ ವಿರಾಟ್ ಬಿ ಗೌಡ.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು
“ಜೂಲಿಯೆಟ್‌” ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೊಂದು ವಿಭಿನ್ನ ಕಥೆ ಎನ್ನಬಹುದು. ಮಹಿಳೆ ಅಬಲೆಯಲ್ಲ. ಸಬಲೆ. ಎಂದು ನಿರ್ದೇಶಕರು ಹೇಳ ಹೊರಟ್ಟಿದ್ದಾರೆ‌. ತಂದೆ – ಮಗಳ ಬಾಂಧವ್ಯದ ಸನ್ನಿವೇಶಗಳು ಮನ ಮಿಡಿಯತ್ತದೆ. ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ‌ ಮರೆಯಲು ಅಸಾಧ್ಯ. ಎಲ್ಲರೂ ಬೆವರು ಸುರಿಸಿ ಚಿತ್ರ‌ ಮಾಡಿದ್ದೇವೆ ಎನ್ನುತ್ತಾರೆ. ನಾವು ರಕ್ತ ಸುರಿಸಿ ಸಿನಿಮಾ ಮಾಡಿದ್ದೇವೆ ಎನ್ನಬಹುದು. ಏಕೆಂದರೆ ಕಾಡಿನಲ್ಲಿ ಜಿಗಣೆಗಳು ಅಷ್ಟು ಕಾಟ ಕೊಟ್ಟಿದೆ ಎಂದು ನಾಯಕಿ ಬೃಂದಾ ಆಚಾರ್ಯ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಚಿತ್ರದಲ್ಲಿ ಅಭಿನಯಿಸಿರುವ ಶ್ರೀಕಾಂತ್ ಹಾಗೂ ರಾಯ್ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣವಿದೆ.

ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!